ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಮುಂಬರುವ ಎಲ್ಲಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕ ಚುನಾವಣೆ ಆಯೋಗ ಹಮ್ಮಿಕೊಂಡ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಒಂದೇ ಕಡೆ ಮತದಾನ ಹಕ್ಕನ್ನು ಚಲಾವಣೆ ಮಾಡುವ ಉದ್ದೇಶದಿಂದ (ಎಸ್.ಐ.ಆರ್) ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ತಾಲೂಕಿನ ಹುಣಶ್ಯಾಳ ಪಿ.ಬಿ. ಗ್ರಾಮದ ಸದ್ಗುರು ಸಿದ್ಧಾರೂಢ ಸಭಾಭವನದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಿ.ಎಲ್.ಓ.ಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು,. ಮತದಾರರ ಪಟ್ಟಿಯಿಂದ ಬಿಟ್ಟು ಹೋದ ಹೆಸರು, ಬೇರೆ ಊರಿನಲ್ಲಿ ಇರುವ ವಾಸ್ತವ್ಯ ಸೇರಿ ಎಲ್ಲ ಮಾಹಿತಿ ಸಂಗ್ರಹಿಸಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತಿದೆ. ಇದು ಪ್ರಾಮಾಣಿಕವಾಗಿ ನಡೆಯುವಂತೆ ನಮ್ಮ ಕಾರ್ಯಕರ್ತರು ನಿಗಾವಹಿಸಬೇಕಿದೆ. ಈ ನಿಟ್ಟಿನಲ್ಲಿ ಇದರ ಪ್ರಕ್ರಿಯೆ ಕುರಿತು ತಮಗೆ ಮಾಹಿತಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ಸೂಕ್ತವಾಗಿ ನಡೆದುಕೊಳ್ಳಬೇಕೆಂದರು.

ಗಡಿನಾಡು ಪ್ರಾಧಿಕಾರದ ಅಧ್ಯಕ್ಷ, ಎಸ್.ಐ.ಆರ್ ಉಸ್ತುವಾರಿ ಸೋಮಣ್ಣ ಬೇವಿನಮರದ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಸುಭದ್ರ ಭಾರತ ಕಟ್ಟಲು ನಾಳೆಯಿಂದ ನಿಮ್ಮ ಬಿ.ಎಲ್. ಒ ಗಳ ಜೊತೆಗೆ ಬಿ.ಎಲ್. ಎ-೨ ಎಂದು ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ ತಮ್ಮ ಮತದಾರರ ಪಟ್ಟಿಯಲ್ಲಿ ಇರುವಂತೆ ನಿಗದಿತ ನಮೂನೆ ಭರ್ತಿ ಮಾಡಿ ಇನ್ನೊಮ್ಮೆ ದಾಖಲಾತಿ ನೀಡಿ ಸೇರ್ಪಡೆ ಮಾಡಿಸಬೇಕು. ಮತದಾರರ ಪಟ್ಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಜೂ.30 ರಿಂದ ಜು 29ರವರೆಗೆ ಈ ವಿಶೇಷ ಕಾರ್ಯಗಾರ ನಡೆಯಲಿದೆ. ನಿಮ್ಮ ಮತಗಟ್ಟೆಯ ಮತಪಟ್ಟಿಯಲ್ಲಿ ನಿಮ್ಮ ಹೆಸರು ಇದೇಯೇ ಇಲ್ಲವೇ ಕೈಬಿಟ್ಟಿದೆ ಎಂದು ಎಚ್ಚರದಿಂದ ಈ ಕಾರ್ಯ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಈ ಕಾರ್ಯಗಾರ ಬಹಳ ಮಹತ್ವದ್ದಾಗಿದೆ. ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆ ನಿಟ್ಟಿನಲ್ಲಿ ನಾವು ಈಗಾಗಲೇ ಚುನಾವಣೆ ಆಯೋಗಕ್ಕ ಬಿ.ಎಲ್. ಎ-೨ ಅವರ ಹೆಸರನ್ನು ನಿಮ್ಮ ನಾಯಕರಿಗೆ ಕೊಟ್ಟಿದ್ದೇವೆ. ಯಾರಿಗೆ ಯಾವ ಕೆಲಸ ವಹಿಸಿದ್ದೇವೆ. ಅವರು ಒಂದು ತಿಂಗಳ ಕಾಲ ಹಗಲು ರಾತ್ರಿ ಎನ್ನದೇ ಈ ದೇಶ ಕಟ್ಟುವ ಕೇಲಸ ಮಾಡಿದರೆ ಮುಂದೆ ಪಕ್ಷ ಅವರನ್ನು ಗುರುತಿಸಿ ಉನ್ನತ ಸ್ಥಾನಮಾನ ನೀಡುತ್ತದೆ. ಆ ನಿಟ್ಟಿನಲ್ಲಿ ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸುಂದರ ಸಮಾಜ ಕಟ್ಟಲು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.


ಮಾಜಿ ಶಾಸಕ ರಾಜು ಆಲಗೂರ, ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದ ದೊಡಮನಿ, ಶಿವಾನಂದ ದೇಸಾಯಿ, ಗೌರಮ್ಮ ಮುತ್ತತ್ತಿ, ರಮೀಜಾ ನದಾಪ್, ಬಾಳನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಪಿ.ಜಿ. ಗೋಠೇದ, ಸಾಹೇಬಗೌಡ ಬಿರಾದಾರ, ಸುರೇಶಬಾಬು ಬಿರಾದಾರ, ರಮೇಶ ನಾಯ್ಕೋಡಿ, ನಾಗಪ್ಪ ಅರಳಗುಂಡಿಗಿ ಇತರರು ಇದ್ದರು. ಡಾ.ಪ್ರಭುಗೌಡ ಲಿಂಗದಳ್ಳಿ ಸ್ವಾಗತಿಸಿದರು. ಪ್ರಕಾಶ ಪಾಟೀಲ ನಿರೂಪಿಸಿದರು.