ಸಾರಾಂಶ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾನಗಲ್ಲದ ಕುಮಾರೇಶ್ವರ ನಗರದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಾನಗಲ್ಲ: ಪರಿಸರ ರಕ್ಷಣೆ ಯಾರೊಬ್ಬರ ಹೊಣೆ ಅಲ್ಲ, ಸರ್ಕಾರವೇ ಎಲ್ಲವನ್ನೂ ಮಾಡಲಾಗುವುದಿಲ್ಲ. ನಮ್ಮ ಜವಾಬ್ದಾರಿ ಏನು ಎಂದು ಪ್ರಶ್ನಿಸಿಕೊಂಡು ಕಾರ್ಯಪ್ರವೃತ್ತರಾದರೆ ಮಾತ್ರ ಯಾವುದೇ ಘೋಷಣೆ, ಪ್ರಚಾರವಿಲ್ಲದೆ ಪರಿಸರದ ರಕ್ಷಣೆ ಸಾಧ್ಯ ಎಂದು ನಿವೃತ್ತ ಶಿಕ್ಷಣಾಧಿಕಾರಿ ಪಿ.ಎಂ. ಪಾಟೀಲ ತಿಳಿಸಿದರು.
ಇಲ್ಲಿನ ಕುಮಾರೇಶ್ವರ ನಗರದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ರಕ್ಷಣೆಯಲ್ಲಿ ಪರಿಸರ ರಕ್ಷಣೆಯೂ ಒಂದು ದೊಡ್ಡ ಜವಾಬ್ದಾರಿಯಾಗಿದೆ ಎಂದರು.ವಕೀಲ ರವಿಬಾಬು ಪೂಜಾರ ಮಾತನಾಡಿ, ಪ್ರತಿ ಮನೆಗೊಂದು ಮರ, ಊರಿಗೊಂದು ವನ ಎಂಬ ಘೋಷವಾಕ್ಯವನ್ನು ಪಾಲಿಸಲು ಸಾಧ್ಯವಾದರೆ ನಮ್ಮ ಪರಿಸರ ನಮ್ಮ ಬದುಕು ಸರಿಯಾಗಿ ಉಳಿಯಲು ಸಾಧ್ಯ. ಎಲ್ಲ ಕಾಲಕ್ಕೂ ಪರಿಸರಕ್ಕೆ ಆದ್ಯತೆ ನೀಡಲಾಗಿದೆ. ಆದರೆ ಈಗ ನಮ್ಮ ಸ್ವಾರ್ಥಕ್ಕೆ ಗಿಡ ಮರಗಳಿಲ್ಲದೆ ಬರಡು ಭೂಮಿಯನ್ನು ಸ್ವಾಗತಿಸುತ್ತಿದ್ದೇವೆ. ನಾವು ಉಳಿಯಲು ನಮ್ಮ ಪರಿಸರ ಉಳಿಯಲಿ. ನಾಳೆಯ ನಮ್ಮ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಈಗಲೇ ಎಚ್ಚೆತ್ತುಕೊಳ್ಳೋಣ ಎಂದರು.
ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಎಂ. ಪ್ರಸನ್ನಕುಮಾರ, ಪ್ರೊ. ಸಿ. ಮಂಜುನಾಥ, ಎನ್.ಎಂ. ಪೂಜಾರ, ನ್ಯಾಯವಾದಿ ಎಂ.ಎಸ್. ಹುಲ್ಲೂರ, ಎಂ.ಎಸ್. ಅಮರದ, ಅಣ್ಣಪ್ಪ ನಾಯಕ, ವೀರಣ್ಣ ಮಡಿವಾಳರ, ನಿವೃತ್ತ ಸೈನಿಕ ಶಂಭಣ್ಣ ಇಂಗಳಿಕಿ, ಸುಭಾಸ ಹೊಸಮನಿ, ಎಚ್. ಸುಧಾ, ಅಶೋಕ ದಾಸರ, ಅನುರಾಧಾ ಬಣಕಾರ, ಪ್ರವೀಣ ತಾಳಗುಂದ, ಕುಮಾರ ಹತ್ತಿಕಾಳ, ರವಿರಾಜ ಕಲಾಲ, ರವಿ ತಿರುಮಲೆ ಮೊದಲಾದವರಿದ್ದರು.