ಕನ್ನಡಪ್ರಭ ವಾರ್ತೆ ಹಿರಿಯೂರು

ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಆಗುಂಬೆಯಾದರೆ, ಅದಕ್ಕೆ ವಿರುದ್ಧವಾಗಿ ಅತಿ ಕಡಿಮೆ ಮಳೆ ಆಗುವ ಪ್ರದೇಶ ನಾಯಕನಹಟ್ಟಿಯಾಗಿದೆ. ನಾವು ಅತಿ ಕಡಿಮೆ ಮಳೆ ಆಗುವ ಪ್ರದೇಶದ ಹತ್ತಿರ ಇದ್ದೇವೆ. ಇದನ್ನು ಹೋಗಲಾಡಿಸುವ ಸಲುವಾಗಿ ಎಲ್ಲರೂ ಹೆಚೆಚ್ಚು ಮರಗಿಡಗಳನ್ನು ಬೆಳೆಸಬೇಕು. ಹೊಂಡ, ಕಾಲುವೆಗಳನ್ನು ನಿರ್ಮಿಸಿ ಪರಿಸರ ಸಂರಕ್ಷಿಸಿಕೊಳ್ಳಬೇಕು ಎಂದು ಜಾಗೃತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ ಕರೆ ನೀಡಿದರು.

ತಾಲೂಕಿನ ಗೊಲ್ಲಹಳ್ಳಿಯ ಜೆಟ್ ಸಿಬಿಎಸ್ಇ ಶಾಲೆಯಲ್ಲಿ ಶುಕ್ರವಾರ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಮನೆಗೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು, ಮನೆಯ ಆಸು ಪಾಸಿನಲ್ಲಿ ಹೂವು ಮತ್ತು ಹಣ್ಣಿನ ಗಿಡಗಳನ್ನು ಬೆಳೆಸಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡಬೇಕು. ಇಂತಹ ಆಲೋಚನೆಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ಪರಿಸರ ಸಂರಕ್ಷಣೆ ಸಾಕ್ಷಾತ್ಕಾರಗೊಳ್ಳುವುದು ಎಂದರು.

ಪ್ರಾಂಶುಪಾಲರು ಹಾಗೂ ಲೇಖಕ ಉದಯ್ ಇಟಗಿ ಮಾತನಾಡಿ, ಮಕ್ಕಳಿಗೆ ಪರಿಸರದ ಮಹತ್ವದ ಬಗ್ಗೆ ಮತ್ತು ಪ್ಲಾಸ್ಟಿಕ್ ಉಪಯೋಗವನ್ನು ನಿಷೇಧಿಸುವ ಬಗ್ಗೆ ಹೇಳಿದ್ದಲ್ಲದೆ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸುವಂತೆ ಮಕ್ಕಳಿಗೆ ಕರೆಕೊಟ್ಟರು. ಮಕ್ಕಳು ಪರಿಸರ ಜಾಗೃತಿ ಮೂಡಿಸುವ ಮೂಕಾಭಿನಯ ಮತ್ತು ಕಿರು ನಾಟಕ ಮತ್ತು ನೃತ್ಯಗಳನ್ನ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ನೂರಾರು ಗಿಡಗಳನ್ನು ಆವರಣದಲ್ಲಿ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥವತ್ತಾಗಿ ಆಚರಿಸಿದರು.