ಸಂವಿಧಾನದ ಶಕ್ತಿಯಿಂದ ಸಮಾನತೆ: ಕೃಷ್ಣಕಾಂತ್‌

| Published : Sep 09 2025, 01:01 AM IST

ಸಂವಿಧಾನದ ಶಕ್ತಿಯಿಂದ ಸಮಾನತೆ: ಕೃಷ್ಣಕಾಂತ್‌
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿಯಿಂದ ಸಮಾನತೆ ಬರುತ್ತಿದೆ. ಮಾನಸಿಕ ಮೈಲಿಗೆಯ ಜನರ ಮಧ್ಯೆ ದೃಢ ಬದುಕು ಕಟ್ಟಲು ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ದೀನ ದಲಿತರಿಗೆ ಹಾಗೂ ಶೋಷಿತ ವರ್ಗಗಳಿಗೆ ಶಿಕ್ಷಣ ಒಂದೇ ಮುಖ್ಯವಾಹಿನಿಯ ಮಾರ್ಗ ಎಂದು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಅಭಿಯಂತರ ಕೃಷ್ಣಕಾಂತ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿಯಿಂದ ಸಮಾನತೆ ಬರುತ್ತಿದೆ. ಮಾನಸಿಕ ಮೈಲಿಗೆಯ ಜನರ ಮಧ್ಯೆ ದೃಢ ಬದುಕು ಕಟ್ಟಲು ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ದೀನ ದಲಿತರಿಗೆ ಹಾಗೂ ಶೋಷಿತ ವರ್ಗಗಳಿಗೆ ಶಿಕ್ಷಣ ಒಂದೇ ಮುಖ್ಯವಾಹಿನಿಯ ಮಾರ್ಗ ಎಂದು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಅಭಿಯಂತರ ಕೃಷ್ಣಕಾಂತ್ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ಆದಿ ಜಾಂಬವ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಾಗೂ ರಾಜಕೀಯ ಶಕ್ತಿ ನಮ್ಮಲ್ಲಿ ಬೆಳೆಯಬೇಕಿದೆ. ಬಹು ಸಂಖ್ಯೆ ಇದ್ದರೂ ಸಮಾಜದಲ್ಲಿ ಗುರುತರ ಕೆಲಸ ಮಾಡಲು ಸಾಧ್ಯವಾಗಿಲ್ಲ. ಸಂವಿಧಾನ ಬದ್ಧ ಸರ್ವರಿಗೂ ಸಮಪಾಲು ಸಮಬಾಳು ನಾವೇ ಅರಿತು ಮುಂದಿನ ಪೀಳಿಗೆಗೆ ಶಿಕ್ಷಣದ ಅವಶ್ಯಕತೆ ಮಹತ್ವ ತಿಳಿ ಹೇಳಬೇಕಿದೆ. ಮೀಸಲಾತಿ ಬಳಕೆ ನಿರಂತರ ಇರಲೇಬೇಕಿದೆ. ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜನಾಂಗ ಒಳಮೀಸಲಾತಿ ಪಡೆದು ಎಲ್ಲಾ ರಂಗದಲ್ಲೂ ಮುಂಚೂಣಿಯಾಗಿ ಬೆಳೆಯಬೇಕು ಎಂದು ಕರೆ ನೀಡಿದರು. ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕಿ ಮಹಾಲಕ್ಷ್ಮಮ್ಮ ಮಾತನಾಡಿ, ಪೈಪೋಟಿ ಯುಗದಲ್ಲಿ ನಮ್ಮ ಮಕ್ಕಳಿಗೆ ನೂರಕ್ಕೆ ನೂರು ಅಂಕ ಗಳಿಸುವ ಕೌಶಲ್ಯ ಬೆಳೆಸಬೇಕಿದೆ. ಮೀಸಲಾತಿ ಎಂಬುದು ಸರ್ಕಾರಿ ವಲಯದಲ್ಲಿ ಮಾತ್ರವಿದೆ. ಖಾಸಗಿ ವಲಯದಲ್ಲಿ ಕಾಣದ ಮೀಸಲಾತಿ ನಡುವೆ ನಮ್ಮ ಮಕ್ಕಳು ಶೈಕ್ಷಣಿಕ ಪ್ರಗತಿ ಕಂಡಲ್ಲಿ ಮಾತ್ರ ಸ್ವಂತ ಶಕ್ತಿಯ ಪ್ರದರ್ಶನ ಕಾಣುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಶಿಕ್ಷಣ ಒದಗಿಸಿ ಎಂದ ಅವರು ಜಾತಿ ನಿಂದನೆ ಪ್ರಕರಣಗಳು ನೂರಾರು ರಾಜಿ ಸಂಧಾನ ಆಗುತ್ತಿವೆ. ಶೇಕಡಾ 1 ರಷ್ಟು ಮಾತ್ರ ಶಿಕ್ಷೆಗೆ ಗುರಿಯಾಗಿರುವ ಉದಾಹರಣೆ ಇದೆ. ಗ್ರಾಮದಲ್ಲಿ ಭಯದ ವಾತಾವರಣ ಅಥವಾ ಆಸೆ ಆಮಿಷ ಈ ರಾಜಿಗೆ ಕಾರಣವಾಗಿದೆ. ಈ ಜೊತೆ ದುಶ್ಚಟ ನಮ್ಮ ಜನರ ಬದುಕು ಹಾಳು ಮಾಡಿದೆ ಎಂದು ವಿಷಾದಿಸಿದರು. ಉಪನ್ಯಾಸಕ ಕೆಂಪರಾಜು, ದಸಂಸ ಮುಖಂಡ ಚೇಳೂರು ಶಿವನಂಜಪ್ಪ, ಮಾತನಾಡಿದರು.ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಮಾದಿಗ ಸಮುದಾಯದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮುಖಂಡರಾದ ತೊರೆಹಳ್ಳಿ ಚಂದ್ರಯ್ಯ, ದೊಡ್ಡಮ್ಮ, ಆದಿ ಜಾಂಬವ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಶಾಂತರಾಜು, ಗೌರವ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಶಿವನಂಜಯ್ಯ, ಪ್ರಧಾನ ಕಾರ್ಯದರ್ಶಿ ಟಿ.ಆರ್.ಕುಮಾರ್, ಸಂಘಟನಾ ಕಾರ್ಯದರ್ಶಿ ರಂಗನಾಯಕಮ್ಮ, ಖಜಾಂಚಿ ಕೆ.ನರಸಿಂಹಮೂರ್ತಿ, ನಿರ್ದೇಶಕರಾದ ಕೃಷ್ಣಮೂರ್ತಿ, ಮಂಜುಳಾ, ಲಕ್ಷ್ಮಿದೇವಮ್ಮ, ಪುರುಷೋತ್ತಮ್, ಪ್ರಸಾದ್, ಲಕ್ಷ್ಮಣ್, ಗಂಗಾಧರ್, ಮಹೇಶ್ ಇತರರು ಇದ್ದರು.