-ಸ್ಮಾಲ್
ಅಪಘಾತ ನಿಯಂತ್ರಿಸಿ----
-ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ರವಾನಿಸಲಾದ ಬೀದರ್ ಎಆರ್ಎಸ್ಐ ವಸಂತ ಜೆ. ಮೇತ್ರೆ----
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಶಾಂತಪುರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ 11.45ಕ್ಕೆ ಎಸ್ಕಾರ್ಟ್ ಕರ್ತವ್ಯದಲ್ಲಿದ್ದ ಬೊಲೆರೊ ವಾಹನದ ಹಿಂದಿನ ಟಯರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಬೀದರ್ನ ಸಹಾಯಕ ಮೀಸಲು ಸಬ್ ಇನ್ಸ್ಪೆಕ್ಟರ್ (ಎಆರ್ಎಸ್ಐ) ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ಬೀದರ್ದಿಂದ ಬೆಂಗಳೂರಿಗೆ ಸಿಪಿಸಿ ಪೇಪರ್ ಎಸ್ಕಾರ್ಟ್ ಕರ್ತವ್ಯಕ್ಕೆ ತೆರಳುತ್ತಿದ್ದ ಕೆಎ-38-ಜಿ-0855 ಸಂಖ್ಯೆಯ ಬೊಲೆರೊ ವಾಹನದ ಹಿಂದಿನ ಟಯರ್ ಸ್ಫೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಎಡಬದಿಗೆ ಇಳಿದು ಅಪಘಾತಕ್ಕೀಡಾಯಿತು. ವಾಹನದಲ್ಲಿದ್ದ ಎಆರ್ಎಸ್ಐ ವಸಂತ ಜೆ. ಮೇತ್ರೆ, ಚಾಲಕ ಹಾಗೂ ಇಬ್ಬರು ಉಪನ್ಯಾಸಕರಿಗೆ ಗಾಯಗಳಾಗಿದ್ದು, ಚಾಲಕ ಮತ್ತು ಉಪನ್ಯಾಸಕರಿಗೆ ಕಕ್ಕೇರಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.ಎಆರ್ಎಸ್ಐ ವಸಂತ ಜೆ. ಮೇತ್ರೆ ಅವರಿಗೆ ಬಲ ಕಿವಿಯಲ್ಲಿ ರಕ್ತಸ್ರಾವ, ತಲೆಯ ಬಲಭಾಗದಲ್ಲಿ ಒಳಗಾಯ ಹಾಗೂ ಎದೆಗೆ ಪೆಟ್ಟಾಗಿರುವ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ ಮೂಲಕ ಸುರಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳಿಗೂ ಯಾವುದೇ ಹಾನಿಯಾಗಿಲ್ಲ. ಘಟನೆಯ ಮಾಹಿತಿ ತಿಳಿದು ಸುರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯಲ್ಲಿ ಹಿಂದಿನ ಟಯರ್ ಸ್ಫೋಟಗೊಂಡಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದ್ದು, ಪ್ರಕರಣ ಸುರಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶಾಂತಪುರ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಇಕ್ಕಟ್ಟಾಗಿರುವುದರಿಂದ ಈ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಅಗಲೀಕರಣ, ರಸ್ತೆ ಬದಿಯನ್ನು ಸಮತಟ್ಟುಗೊಳಿಸುವುದು, ಎಚ್ಚರಿಕೆ ಸೂಚನಾ ಫಲಕಗಳು, ರಿಫ್ಲೆಕ್ಟರ್ಗಳು ಹಾಗೂ ಸುರಕ್ಷತಾ ಬ್ಯಾರಿಕೇಡ್ ಅಳವಡಿಸಿ ತಕ್ಷಣ ಕಾಮಗಾರಿ ಕೈಗೊಂಡು ಅಪಘಾತಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಸದ ಜಿ. ಕುಮಾರ ನಾಯಕ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.-
3ವೈಡಿಆರ್1 : ಸುರಪುರ ತಾಲೂಕಿನ ಶಾಂತಪುರ ಕ್ರಾಸ ಸಮೀಪ ಟಯರ್ ಸ್ಫೋಟಗೊಂಡು ರಸ್ತೆ ಬದಿಗೆ ಇಳಿದ ಎಸ್ಕಾರ್ಟ್ ಕತ೯ವ್ಯದಲ್ಲಿದ ಬೊಲೆರೋ ವಾಹನ.-
3ವೈಡಿಆರ್2 : ಅಪಘಾತದಲ್ಲಿ ಗಾಯಗೊಂಡು ಸುರಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ರವಾನಿಸಲಾದ ಬೀದರದ ಎಆರ್ಎಸ್ಐ ವಸಂತ ಜೆ. ಮೇತ್ರೆ.