ದೆಹಲಿಯಿಂದ ಮತ್ತೆ ಕರೆ ಬಂದರೆ ಹೋಗುವೆ : ಈಶ್ವರಪ್ಪ

| Published : Apr 05 2024, 01:11 AM IST / Updated: Apr 05 2024, 09:34 AM IST

ಸಾರಾಂಶ

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕರೆದಾಗ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಆದರೆ, ಅವರು ಭೇಟಿಯಾಗದೆ ಪರೋಕ್ಷವಾಗಿ ನನ್ನ ಸ್ಪರ್ಧೆಗೆ ಅಸ್ತು ಎಂದಿದ್ದಾರೆ. ನಾನು ಈ ಹಿಂದೆ ಹೇಳಿದಂತೆ ನನ್ನ ಸ್ಪರ್ಧೆ ನಿಶ್ಚಿತ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

 ಶಿವಮೊಗ್ಗ :ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕರೆದಾಗ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಆದರೆ, ಅವರು ಭೇಟಿಯಾಗದೆ ಪರೋಕ್ಷವಾಗಿ ನನ್ನ ಸ್ಪರ್ಧೆಗೆ ಅಸ್ತು ಎಂದಿದ್ದಾರೆ. ನಾನು ಈ ಹಿಂದೆ ಹೇಳಿದಂತೆ ನನ್ನ ಸ್ಪರ್ಧೆ ನಿಶ್ಚಿತ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಿತ್‌ ಶಾ ಅವರು ಸೇರಿ ಪಕ್ಷದ ಹಿರಿಯರಿಗೆ ಗೌರವ ಕೊಡುವುದು ನನಗೆ ಕಲಿಸಿರುವ ಸಂಸ್ಕೃತಿ. ಹೀಗಾಗಿ ನಾನು ಹೋಗಿದ್ದೆ. ಆದರೆ ಅಲ್ಲಿ ಮಾತುಕತೆ ನಡೆಯಲಿಲ್ಲ. ಮತ್ತೆ ದೆಹಲಿಯಿಂದ ಕರೆ ಬಂದರೆ ಅವರಿಗೆ ಗೌರವ ಕೊಟ್ಟು ಹೋಗುತ್ತೇನೆ. ಆದರೆ, ಚುನಾವಣೆಯಿಂದ ಹಿಂದೆ ಸರಿಯಲ್ಲ. ಹೀಗಾಗಿ ನನ್ನ ಸ್ಪರ್ಧೆ ಕುರಿತು ಕಾರ್ಯಕರ್ತರು ಇನ್ನು ಯಾವ ಅನುಮಾನವನ್ನೂ ಇಟ್ಟುಕೊಳ್ಳುವುದು ಬೇಡ ಎಂದರು.

ದೆಹಲಿಯಲ್ಲಿ ಸಂಘಟನಾ ಕಾರ್ಯದರ್ಶಿ‌ ರಾಜೇಶ್ ಜೀ ಮನೆಗೆ ಬರುವಂತೆ ತಮಗೆ ತಿಳಿಸಲಾಗಿತ್ತು. ಶಾ ಅವರ ಕಚೇರಿಯಿಂದ ಕರೆ ಬಂದ ಬಳಿಕ ಮನೆಗೆ ಕರೆಯುವುದಾಗಿ ತಿಳಿಸಲಾಯಿತು. ಕೆಲ ಹೊತ್ತಿನ ಬಳಿಕ ಅಮಿತ್‌ ಶಾ ಭೇಟಿಯಾಗುವುದಿಲ್ಲ ಎಂದು ಮಾಹಿತಿ ನೀಡಲಾಯಿತು. ಇದರರ್ಥ ಶಿವಮೊಗ್ಗಕ್ಕೆ ವಾಪಸ್‌ ಹೋಗು, ಹೋಗಿ ನೀನು ಸ್ಪರ್ಧಿಸಿ ಗೆಲ್ಲು ಎಂಬ ಸಂದೇಶ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಅವರು ನನಗೆ ಕರೆ ಮಾಡಿದಾಗ ನನ್ನ ಸ್ಪರ್ಧೆ ಉದ್ದೇಶವನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೆ. ನಾನು ಆಕ್ಷೇಪಿಸಿರುವ ಪ್ರಶ್ನೆಗೆ ಅಮಿತ್ ಶಾ ಬಳಿ ಯಾವುದೇ ಉತ್ತರ ಇರಲಿಲ್ಲ. ಹಾಗಾಗಿ ಅವರು ಹೊರಡು ಎಂದಿದ್ದಾರೆ ಎಂದು ನಾನು ಅಂದು ಕೊಂಡಿದ್ದೇನೆ ಎಂದರು.

ನನ್ನ ಸ್ಪರ್ಧೆಗೆ ಭಗವಂತನೇ ಕೃಪೆ ತೋರಿದ್ದಾನೆ. ಅಮಿತ್‌ ಶಾ, ಮೋದಿ ಅಪೇಕ್ಷೆಯಂತೆ ನಾನು ಸ್ಪರ್ಧೆ ಮಾಡಿ, ಗೆದ್ದು ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದರು.

ಅದ್ಧೂರಿ ಸ್ವಾಗತ ನೀಡಿದ ಅಭಿಮಾನಿಗಳು ಇದಕ್ಕೂ ಮೊದಲು ದೆಹಲಿಯಿಂದ ವಾಪಸ್‌ ಬಂದ ಈಶ್ವರಪ್ಪ ಅವರನ್ನು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ಬೈಕ್‌ ರ್‍ಯಾಲಿ, ಮೆರವಣಿಗೆ ಮೂಲಕ ನಗರಕ್ಕೆ ಕರೆತರಲಾಯಿತು.