ಸಾರಾಂಶ
ಎಸ್ಸೆಸ್ಸೆಲ್ಸಿ ಪರೀಕ್ಷೆ-೨ ಬರೆಯುವ ವಿದ್ಯಾರ್ಥಿಗಳಿಗೆ ನಡೆಸುವ ಪರಿಹಾರ ಬೋಧನಾ ತರಗತಿ ರದ್ದುಪಡಿಸುವಂತೆ ಒತ್ತಾಯ.
ಯಲಬುರ್ಗಾ-ಕುಕನೂರು ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಮನವಿ
ಮತ್ತೆ ಬೋಧನಾ ತರಗತಿ ನಡೆಸುವುದು ಎಷ್ಟು ಸರಿ?ಕನ್ನಡಪ್ರಭ ವಾರ್ತೆ ಯಲಬುರ್ಗಾ
ಎಸ್ಸೆಸ್ಸೆಲ್ಸಿ ಪರೀಕ್ಷೆ-೨ ಬರೆಯುವ ವಿದ್ಯಾರ್ಥಿಗಳಿಗೆ ನಡೆಸುವ ಪರಿಹಾರ ಬೋಧನಾ ತರಗತಿ ರದ್ದುಪಡಿಸುವಂತೆ ಒತ್ತಾಯಿಸಿ ಯಲಬುರ್ಗಾ-ಕುಕನೂರು ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.ಕುಕನೂರು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮೇಟಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ-೨ನ್ನು ಬರೆಯುವ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ತರಗತಿ ನಡೆಸುವಂತೆ ಶಿಕ್ಷಣ ಇಲಾಖೆ ಪ್ರೌಢಶಾಲೆಗಳಿಗೆ ಆದೇಶಿಸಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕು. ಈಗಾಗಲೇ ವಾರ್ಷಿಕ ಪರಿಕ್ಷೆ ಮುನ್ನವೇ ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರು ಕಿರು ಪರೀಕ್ಷೆ, ಘಟಕ ಮತ್ತು ಸರಣಿ ಹಾಗೂ ಇತರ ಪರೀಕ್ಷೆಗಳನ್ನು ವಿಷಯವಾರು ನಡೆಸಿ ಪಾಠಬೋಧನೆ ಮಾಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ಸಹ ಕಾರ್ಯಾಗಾರವನ್ನು ನಡೆಸಿದ್ದಾರೆ. ಹೀಗಿರುವಾಗ ಮತ್ತೆ ಬೋಧನಾ ತರಗತಿ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಹಾಗೂ ಲೋಕಸಭೆ ಚುನಾವಣೆ ಕರ್ತವ್ಯಗಳನ್ನು ರಜೆ ಅವಧಿಯಲ್ಲೇ ನಡೆಸಲಾಗಿದೆ. ಸದ್ಯ ರಜೆ ಅವಧಿಯಾಗಿದ್ದರಿಂದ ಎಲ್ಲ ಶಿಕ್ಷಕರು ತಮ್ಮ ಮೂಲ ಸ್ಥಳಗಳಿಗೆ ತೆರಳಿ ತಮ್ಮ ಕುಟುಂಬದೊಂದಿಗೆ ನಾನಾ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಇದೀಗ ದಿಢೀರ್ ಆದೇಶ ಮಾಡಿರುವುದು ಶಿಕ್ಷಕರಿಗೆ ಗೊಂದಲ ಉಂಟಾಗಿದೆ. ನಾವು ಮನುಷ್ಯರಲ್ಲವೇ? ಕೂಡಲೇ ಈ ಆದೇಶ ಹಿಂಪಡೆದು ಶಿಕ್ಷಕರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ಬಿಇಒ ಕಚೇರಿ ವ್ಯವಸ್ಥಾಪಕ ಪದ್ಮನಾಭ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ತಾಲೂಕು ಸಂಘದ ಅಧ್ಯಕ್ಷ ಅಶೋಕ ಮಾಲಿಪಾಟೀಲ, ಕಾರ್ಯದರ್ಶಿ ಸುರೇಶ ಅಬ್ಬಿಗೇರಿ, ಶಿಕ್ಷಣ ಸಂಯೋಜಕ ಸುರೇಶ ಮಾದಿನೂರ, ಉದಯಕುಮಾರ ತಳವಾರ, ಹನುಮರಡ್ಡಿ ಸಿದ್ದರಡ್ಡಿ ಮತ್ತಿತರರು ಇದ್ದರು.