ಇತ್ತೀಚೆಗಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರಸಿದ್ಧಿ ಹೊಂದುತ್ತಿರುವ ತಾಲೂಕಿನ ಕ್ಯಾಸನೂರು ಗ್ರಾಮದ ಅಡಿಕೆ ತಳಿಯು ಸಂರಕ್ಷಣೆ ಬಲವರ್ಧನೆ ಹಾಗೂ ವೈಜ್ಞಾನಿಕ ಸಂಶೋಧನೆ ದೃಷ್ಟಿಯಿಂದ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಕ್ಯಾಸನೂರು ಅಡಿಕೆ ತಳಿ ಸಂಶೋಧನಾ ಕೇಂದ್ರ ಸ್ಥಾಪಿಸುವಂತೆ ಕಾನೂನು ವಿದ್ಯಾರ್ಥಿ ವಿಕಾಸ್ ಕ್ಯಾಸನೂರು ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸೊರಬ
ಇತ್ತೀಚೆಗಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರಸಿದ್ಧಿ ಹೊಂದುತ್ತಿರುವ ತಾಲೂಕಿನ ಕ್ಯಾಸನೂರು ಗ್ರಾಮದ ಅಡಿಕೆ ತಳಿಯು ಸಂರಕ್ಷಣೆ ಬಲವರ್ಧನೆ ಹಾಗೂ ವೈಜ್ಞಾನಿಕ ಸಂಶೋಧನೆ ದೃಷ್ಟಿಯಿಂದ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಕ್ಯಾಸನೂರು ಅಡಿಕೆ ತಳಿ ಸಂಶೋಧನಾ ಕೇಂದ್ರ ಸ್ಥಾಪಿಸುವಂತೆ ಕಾನೂನು ವಿದ್ಯಾರ್ಥಿ ವಿಕಾಸ್ ಕ್ಯಾಸನೂರು ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.ಪ್ರಸ್ತುತ ಹವಾಮಾನ ಬದಲಾವಣೆ, ವಿವಿಧ ರೋಗ-ಕೀಟಗಳ ಬಾಧೆ, ಉತ್ಪಾದನಾ ವೆಚ್ಚದ ಏರಿಕೆ ಹಾಗೂ ಗುಣಮಟ್ಟದ ನೆಟ್ಟಿಗೆ ಸಾಮಗ್ರಿಗಳ ಕೊರತೆಯಿಂದ ಅಡಿಕೆ ಬೆಳೆಗಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭ ಸ್ಥಳೀಯವಾಗಿ ವಿಶಿಷ್ಟವಾಗಿರುವ ಕ್ಯಾಸನೂರು ಅಡಿಕೆ ತಳಿಯ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸಿ ಅದರ ಉತ್ತಮ ಗುಣಲಕ್ಷಣಗಳನ್ನು ಗುರುತಿಸಿ, ತಳಿಯ ಬಲವರ್ಧನೆ ಮತ್ತು ಗುಣಮಟ್ಟದ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದು ಅಗತ್ಯ ಎಂದು ಒತ್ತಾಯಿಸಿದ್ದಾರೆ.
ಸೊರಬ ಹಾಗೂ ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಮಾತ್ರವಲ್ಲದೆ, ರಾಜ್ಯದ ವಿವಿಧ ಭಾಗಗಳ ಅಡಿಕೆ ರೈತರಿಗೆ ಈ ಸಂಶೋಧನಾ ಕೇಂದ್ರವು ಬಹಳ ಉಪಯುಕ್ತವಾಗಲಿದೆ. ಕ್ಯಾಸನೂರು ಅಡಿಕೆ ತಳಿಯ ವೈಶಿಷ್ಟ್ಯವನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದರ ಜತೆಗೆ ಈ ಭಾಗದ ಕೃಷಿ ಮತ್ತು ರೈತರ ಆರ್ಥಿಕ ಅಭಿವೃದ್ಧಿಗೂ ಇದು ಮಹತ್ವದ ಕೊಡುಗೆ ನೀಡಲಿದೆ.ಆದ್ದರಿಂದ, ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಲು ಅಗತ್ಯ ಅನುದಾನ, ಮೂಲಸೌಕರ್ಯ, ಸಂಶೋಧನಾ ಸಿಬ್ಬಂದಿ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಿ ಶೀಘ್ರವಾಗಿ ಈ ಯೋಜನೆಗೆ ಚಾಲನೆ ನೀಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಗೆ ಸಚಿವ ಮಧು ಬಂಗಾರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿಶ್ವವಿದ್ಯಾಲಯದ ಕುಲಪತಿಗಳಿಗೆ ಈ ಕುರಿತು ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ವಿದ್ಯಾರ್ಥಿ ವಿಕಾಸ್ ಕ್ಯಾಸನೂರು ಸ್ಪಷ್ಟಪಡಿಸಿದರು.