ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರ ಸ್ಥಾಪನೆ: ಪ್ರಸನ್ನನಾಥ ಸ್ವಾಮೀಜಿ

| Published : May 02 2024, 12:17 AM IST

ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರ ಸ್ಥಾಪನೆ: ಪ್ರಸನ್ನನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರಿದ್ದಂತೆ. ಅಂತಹ ಪದ್ಧತಿ ಉಳಿಸಿ ಬೆಳೆಸುವ ಸಲುವಾಗಿ ಶ್ರೀ ಕ್ಷೇತ್ರದಲ್ಲಿ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರ ಆರಂಭಿಸಲು ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಶ್ರೀಗಳು ನಿರ್ಧರಿಸಿದ್ದಾರೆ. ಒಂದು ತರಬೇತಿಯಲ್ಲಿ ಕನಿಷ್ಠ 50 ಮಂದಿಯನ್ನು ನಿಗದಿ ಪಡಿಸಿ ಭಾಗವಹಿಸುವ ವೈದ್ಯರುಗಳಿಗೆ ವಸತಿ ಮತ್ತು ಉಪಾಹಾರವನ್ನು ಶ್ರೀಮಠದಿಂದಲೇ ಉಚಿತವಾಗಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಾರಂಪರಿಕ ವೈದ್ಯ ಪದ್ಧತಿ ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಲು ಮತ್ತು ಆಸಕ್ತ ವೈದ್ಯರುಗಳಿಗೆ ಹೆಚ್ಚಿನ ಮಾಹಿತಿ ಪಡೆಯಲು ಶ್ರೀಕ್ಷೇತ್ರದಲ್ಲಿ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರವನ್ನು ಶೀಘ್ರ ಪ್ರಾರಂಭಿಸಲಾಗುವುದು ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಪರಿಷತ್ತಿನ ಗೌರವಾಧ್ಯಕ್ಷ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ಸಂಚಾಲಕರ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರಿದ್ದಂತೆ. ಅಂತಹ ಪದ್ಧತಿ ಉಳಿಸಿ ಬೆಳೆಸುವ ಸಲುವಾಗಿ ಶ್ರೀ ಕ್ಷೇತ್ರದಲ್ಲಿ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರ ಆರಂಭಿಸಲು ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳು ನಿರ್ಧರಿಸಿದ್ದಾರೆ. ಒಂದು ತರಬೇತಿಯಲ್ಲಿ ಕನಿಷ್ಠ 50 ಮಂದಿಯನ್ನು ನಿಗದಿ ಪಡಿಸಿ ಭಾಗವಹಿಸುವ ವೈದ್ಯರುಗಳಿಗೆ ವಸತಿ ಮತ್ತು ಉಪಾಹಾರವನ್ನು ಶ್ರೀಮಠದಿಂದಲೇ ಉಚಿತವಾಗಿ ನೀಡಲಾಗುವುದು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ರಾಜ್ಯಾಧ್ಯಕ್ಷ ಜಿ. ಮಹದೇವಯ್ಯ ಮಾತನಾಡಿ, ಪರಿಷತ್ತಿನ ಸಂಸ್ಥಾಪಕರು ಮತ್ತು ಹಿಂದಿನ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಪರಿಷತ್ ಮುನ್ನಡೆಯುತ್ತಿದೆ. ಪರಿಷತ್ತಿನ ಎಲ್ಲಾ ಜಿಲ್ಲಾ ಸಂಚಾಲಕರು ಈ ತರಬೇತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

ಜಿಲ್ಲೆಯಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಆಸಕ್ತ ವೈದ್ಯರ ಪಟ್ಟಿಯನ್ನು ರಾಜ್ಯ ಸಮಿತಿಗೆ ಅತಿ ಶೀಘ್ರವಾಗಿ ಕಳಿಸಿಕೊಡಬೇಕು. ಶ್ರೀ ಕ್ಷೇತ್ರವು ಪರಿಷತ್ತಿನ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಮೊದಲಿನಿಂದಲೂ ಪೂರ್ಣಪ್ರಮಾಣದಲ್ಲಿ ಸಹಕಾರ ನೀಡುತ್ತಿದೆ ಎಂದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಪಾರಂಪರಿಕ ವೈದ್ಯರಿಗೋಸ್ಕರ ನಿರಂತರವಾಗಿ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರ ಪ್ರಾರಂಭಿಸಲು ಅನುವು ಮಾಡಿ ಕೊಟ್ಟಿರುವ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಹಾಗೂ ಪರಿಷತ್‌ನ ಗೌರವಾಧ್ಯಕ್ಷ ಪ್ರಸನ್ನನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪರಿಷತ್ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಇದರ ಪ್ರಯೋಜನವನ್ನು ನಮ್ಮ ವೈದ್ಯ ಬಂಧುಗಳು ಪಡೆದುಕೊಳ್ಳಬೇಕು ಎಂದರು.

ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸುವ ವೈದ್ಯರಿಗೆ ಮೊದಲು ಪರಿಷತ್ತಿನ ಪರಿಚಯದ ಜೊತೆಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಗಿಡಮೂಲಿಕೆಗಳ ಮಾಹಿತಿಯನ್ನು ಕೊಡಿಸುವ ಜೊತೆಗೆ, ಮೂಲಿಕೆಗಳಿಂದ ಚೂರ್ಣ ತೆಗೆಯುವ ವಿಧಾನ, ರಸ ಔಷಧಿ ತಯಾರಿಕೆ, ಇನ್ನು ಮುಂತಾದ ಮೂಲಿಕೆಗಳಿಂದ ಔಷಧಿ ತಯಾರಿಕೆಯ ಬಗ್ಗೆ ಹಂತ ಹಂತವಾಗಿ ತರಬೇತಿ ಕೊಡಿಸಲಾಗುವುದು. ಇವೆಲ್ಲಕ್ಕೂ ಬೇಕಾಗಿರುವ ಪರಿಕರಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಂಡು ಉತ್ತಮ ತರಬೇತಿ ಕೇಂದ್ರವನ್ನಾಗಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದರು.

ಈ ಮಾಸಾಂತ್ಯದ ವೇಳೆಗೆ ತರಬೇತಿಯನ್ನು ಪ್ರಾರಂಭಿಸಲಾಗುವುದು, ತರಬೇತಿಯಲ್ಲಿ 50 ಮಂದಿಗೆ ಮಾತ್ರ ಅವಕಾಶವಿದ್ದು, ಭಾಗವಹಿಸುವ ವೈದ್ಯರುಗಳು ಮೇ 10 ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.

ಸಮಾರಂಭದಲ್ಲಿ ಪರಿಷತ್ತಿನ ಖಜಾಂಚಿ ವೈದ್ಯ ಶಿವಾನಂದ ಜಂಗಿನಮಠ ವಿಜಯಪುರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಚಿತ್ರದುರ್ಗ ಜಿಲ್ಲೆಯ ವೈದ್ಯ ವೀರಣ್ಣ, ಉಡುಪಿ ಜಿಲ್ಲೆಯ ವೈದ್ಯ ಜಯರಾಮ್‌ರಾವ್, ವಿಜಯನಗರ ಜಿಲ್ಲೆಯ ವೈದ್ಯ ಎಂ.ಸೂರಣ್ಣ, ಜಿಲ್ಲಾ ಸಂಚಾಲಕರಾದ ತುಮಕೂರು ಜಿಲ್ಲೆ ವೈದ್ಯ ಸುರೇಶ್‌ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲೆಯ ವೈದ್ಯ ನಾಗರಾಜ್, ಗದದ ಜಿಲ್ಲೆಯ ವೈದ್ಯ ಶಿವಕುಮಾರ್ ಹಿರೇಮಠ, ಹಾವೇರಿ ಜಿಲ್ಲೆಯ ವೈದ್ಯ ಮಹೇಶ್ ಗೌಡ ಪಾಟೀಲ್, ಚಿಕ್ಕಬಳ್ಳಾಪುರ ತಾಲೂಕು ಕಾರ್ಯದರ್ಶಿ ವೈದ್ಯ ಗಂಗಾಧರ್, ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾದ ವೈದ್ಯ ಅಂಬರೀಶ್ ಸೇರಿದಂತೆ ಹಲವರು ಇದ್ದರು.

ಈ ತರಬೇತಿ ಕೇಂದ್ರ ಪ್ರಾರಂಭವಾದ ನಂತರ ದೂರದ ವೈದ್ಯರಿಗೆ ಅನುಕೂಲವಾಗಲೆಂದು ರಾಜ್ಯದ ಜಿಲ್ಲೆ ಇಲ್ಲವೆ ವಲಯವಾರು ಮೂಲಿಕೆಗಳ ಪ್ರಾಥಮಿಕ ಪಾಠ ಪ್ರವಚನದ ಮೂಲಕ ಪರಿಷತ್ತಿನ ಪದಾಧಿಕಾರಿಗಳು ಎರಡು ಅಥವಾ ಮೂರು ದಿನಗಳ ತರಬೇತಿ ನೀಡಿ ಇವರೆಲ್ಲರಿಗೂ ನಂತರ ಪ್ರತಿ ಆರು ತಿಂಗಳಿಗೊಮ್ಮೆ ಪ್ರಾಯೋಗಿಕ ತರಬೇತಿಯನ್ನು ಶ್ರೀ ಕ್ಷೇತ್ರದಲ್ಲಿ 10 ದಿನಗಳ ನೀಡಲಾಗುವುದು.

- ಪ್ರಸನ್ನನಾಥ ಸ್ವಾಮೀಜಿ, ಪರಿಷತ್ತಿನ ಗೌರವಾಧ್ಯಕ್ಷ

ಶ್ರೀಮಠದ ಪೀಠಾಧ್ಯಕ್ಷರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕ್ಷೇತ್ರದ ತಪೋವನದಲ್ಲಿ ಸುಂದರವಾದ ಧನ್ವಂತರಿ ವನವನ್ನು ನಿರ್ಮಿಸಿ ಈ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರದಲ್ಲಿ ಎಲ್ಲಾ ರೀತಿಯ ಔಷಧಿ ಸಸ್ಯಗಳನ್ನು ಬೆಳೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ತರಬೇತಿಗೆ ಭಾಗವಹಿಸುವ ವೈದ್ಯರಿಗೆ ಗಿಡಗಳ ಪರಿಚಯದ ಜೊತೆಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು.

- ಅನುಗನಾಳು ಕೃಷ್ಣಮೂರ್ತಿ, ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ