ಸಾರಾಂಶ
- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ । ಹೆಚ್ಚುವರಿ 3300 ಎಕರೆ ಜಮೀನು ಸ್ವಾಧೀನದ ಅಧಿಸೂಚನೆಗೆ ವಿರೋಧ
- ಸಚಿವ ಸಂಪುಟಕ್ಕಾಗಿ ಕೊಳೆಯುತ್ತಿದೆ ಭೂಮಿ ವಾಪಸ್ ನಿರ್ಧಾರದ ಆದೇಶ !- 2ನೇ ಹಂತದ ಕೈಗಾರಿಕೆಗೆಂದು 3269 ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ
- ಕನ್ನಡಪ್ರಭ ಸರಣಿ ವರದಿ ಭಾಗ : 66ಆನಂದ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಪ್ರದೇಶದಲ್ಲಿ ಜವಳಿ ಪಾರ್ಕ್, ಕೋಕೋ ಕೋಲಾ, ರೈಲ್ವೆ ಬೋಗಿ ಗಾಲಿಗಳ ಅಚ್ಚು ತಯಾರಿಕಾ ಕಾರ್ಖಾನೆ ಸೇರಿದಂತೆ ವಿವಿಧ ಕೈಗಾರಿಕೆಗಳ ಸ್ಥಾಪನೆಗೆಂದು ದಶಕಗಳ ಹಿಂದೆ 3232 ಎಕರೆ ಸ್ವಾಧೀನಪಡಿಸಿಕೊಂಡಿದ್ದ ಸರ್ಕಾರ, 2020-21ರಲ್ಲಿ ಮತ್ತೆ ಹೆಚ್ಚುವರಿಯಾಗಿ 3269 ಎಕರೆ ಜಮೀನುಗಳ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು.
ಮೊದಲ ಹಂತದ ಸ್ವಾಧೀನ ಕೈಗಾರಿಕೆಗಳೇ ಅರ್ಧಮರ್ಧದ ಬೆನ್ನಲ್ಲೇ, ಹೆಚ್ಚುವರಿಯಾಗಿ ಸರ್ಕಾರ ಮತ್ತೆ ಕಡೇಚೂರು, ಶೆಟ್ಟಿಹಳ್ಳಿ, ದದ್ದಲ್ ಹಾಗೂ ರಾಚನಹಳ್ಳಿ ಭಾಗದ 3269 ಎಕರೆಗೆ ಹೊರಡಿಸಿದ್ದ ಅಧಿಸೂಚನೆ ಜನರ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಪಹಣಿ ದಾಖಲೆಗಳಲ್ಲಿ ಜಮೀನುಗಳು ರೈತರ ಹೆಸರಲ್ಲಿವೆಯಾದರೂ, ಯಾವುದೇ ತರಹದ ಪರಭಾರೆ- ಕ್ರಯಕ್ಕೆ, ಮಾರಾಟ- ಗುತ್ತಿಗೆ ನೀಡಲು ನಿಷೇಧಿಸಿದ್ದರಿಂದ ಅತ್ತ ಕೈಗಾರಿಕೆಗಳ ಸ್ಥಾಪನೆಯೂ ಆಗದೇ, ಇತ್ತ ಭೂಮಿಯೂ ವಾಪಸ್ಸಾಗದೇ ರೈತರು ಕಂಗಾಲಾಗಿದ್ದಾರೆ. ಮದುವೆ, ಅನಾರೋಗ್ಯ ಮುಂತಾದ ಕುಟುಂಬದ ಅನಿವಾರ್ಯ ಪರಿಸ್ಥಿತಿ ಸಂದರ್ಭಗಳಲ್ಲಿ ಜಮೀನು ಮಾರಿ ಹಣ ಪಡೆಯೋಣವೆಂದರೂ, ಇಂತಹ ಕ್ರಮಕ್ಕೆ ನಿಷೇಧದಿಂದಾಗಿ ಜನರ ಪರದಾಡುವಂತೆ ಮಾಡಿದೆ.ಈ ಹಿಂದೆ, ಶಾಸಕರಾಗಿದ್ದ ದಿ. ನಾಗನಗೌಡ ಕಂದಕೂರ ಅವರೂ ಸೇರಿದಂತೆ ಮಠಾಧೀಶರು, ರೈತಪರ ಸಂಘಟನೆಗಳು, ಸಂತ್ರಸ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹೋರಾಟ ನಡೆಸಿದ್ದರಾದರೂ, ಸುಳ್ಳು ಭರವಸೆ ನೀಡಿದ ಅಧಿಕಾರಿಗಳು ಅಧಿಸೂಚನೆ ರದ್ದು ಕ್ರಮಕ್ಕೆ ಮುಂದಾಗಲೇ ಇಲ್ಲ. ಹಾಲಿ ಶಾಸಕ ಶರಣಗೌಡ ಕಂದಕೂರ ಅವರು ಈ ಬಗ್ಗೆ ಸಿಎಂ ಸೇರಿದಂತೆ ಸಚಿವರುಗಳ ಗಮನಕ್ಕೆ ತಂದಿದ್ದಾರಾದರೂ, ಸಚಿವ ಸಂಪುಟದಲ್ಲಿ ಈ ವಿಚಾರ ಮುನ್ನೆಲೆಗೆ ಬಾರದಿರುವುದು, ಆದ್ಯತೆ ಪಡೆಯದಿರುವುದು ಅಚ್ಚರಿ ಮೂಡಿಸಿದೆ.
ಲ್ಯಾಂಡ್ ಲಾಬಿ ಅಥವಾ ರೀಯಲ್ ಎಸ್ಟೇಟ್ ಲಾಬಿ ಈ ನಿರ್ಧಾರಕ್ಕೆ ಪರೋಕ್ಷವಾಗಿ ವಿರೋಧಿಸುತ್ತಿರುವುದರಿಂದ ಸರ್ಕಾರ ಹೆಚ್ಚುವರಿ ಭೂಮಿ ಸ್ವಾಧೀನಕ್ಕೆ ಹೊರಡಿಸಿರುವ ಅಧಿಸೂಚನೆ ರದ್ದತಿಗೆ ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪಗಳಿವೆ.----
ಕೋಟ್- 1 : ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ 2ನೇ ಹಂತವಾಗಿ 3269 ಎಕರೆ ಭೂಮಿಯನ್ನು ಸ್ವಾದ್ಧಿನ ಪಡಿಸಿಕೊಳ್ಳಲು ಸರ್ಕಾರ ಗುರುತಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ನಾವು ಭೂಮಿಯನ್ನು ನೀಡಿ ತಪ್ಪು ಮಾಡಿ ಸದ್ಯ ವಿಷಗಾಳಿ ಕುಡಿಯುತ್ತಿದ್ದೇವೆ. ಮತ್ತೇ ನಾವು ಆ ತಪ್ಪು ಮಾಡಿ ಭೂಮಿ ನೀಡಲು ಸಿದ್ದರಿಲ್ಲ. 100 ಪಟ್ಟು ಹೆಚ್ಚು ಹಣ ನೀಡಿದರೂ ನಮ್ಮ ಭೂಮಿಯನ್ನು ನಾವು ನೀಡುವುದಿಲ್ಲ. ಈ ಬಗ್ಗೆ ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆವೆ. ನಮ್ಮ ಭೂಮಿಗಳು ಪೂರ್ವಜರ ಹೆಸರಿನಲ್ಲಿದ್ದು ಅವುಗಳನ್ನು ನಮ್ಮ ಹೆಸರುಗಳ ಮೇಲೆ ಮಾಡಿಕೊಳ್ಳಲು ಸರಕಾರ ನಿರ್ಬಂಧ ವಿಧಿಸಿದೆ. ದಯವಿಟ್ಟು ಇದನ್ನು ತೆರವು ಮಾಡಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು.- ದಶರಥ ಹೊಸಮನಿ, ಶೆಟ್ಟಿಹಳ್ಳಿ. (12ವೈಡಿಆರ್5)
-ಕೋಟ್- 2 : ಈ ಕೈಗಾರಿಕಾ ಪ್ರದೇಶದ 2ನೇ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನಮ್ಮದು ಒಟ್ಟು 20 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಆದರೆ, ನಮ್ಮ ಭೂಮಿಯನ್ನು ನಾವು ಬಿಟ್ಟುಕೊಡುವುದಿಲ್ಲ. ಈ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಬಹೃತ್ ಕೈಗಾರಿಕಾ ಸಚಿವರಾದ ಎಂ. ಬಿ. ಪಾಟೀಲ್ ಸೇರಿದಂತೆ ಇತರ ಸಚಿವರಿಗೆ, ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಇಲ್ಲಿಯವರೆಗೂ ಯಾವುದೇ ನಿರ್ಣಯಗಳನ್ನು ಕೈಗೊಳ್ಳದೆ ಇರುವುದರಿಂದ ಬಡ ಮತ್ತು ಚಿಕ್ಕ ರೈತರಿಗೆ ಬಹಳಷ್ಟು ತೊಂದರೆಯಾಗಿದೆ. ಅದೊಷ್ಟು ಜಲ್ದಿ ನಮ್ಮ ಹೋಲಗಳನ್ನು ನಮ್ಮಗೆ ನೀಡಿ ಪುಣ್ಯಕೊಟ್ಟಿಕೊಳ್ಳಿ. ಇಲ್ಲಂದರೆ ಒಂದು ತೊಟ್ಟು ಎಣ್ಣೆ ಕೋಡಿ ಕುಡಿದು ಸಾಯುತ್ತೇವೆ. ಏಕೆ ನಮ್ಮಗೆ ಈ ಶಿಕ್ಷೆ. ನಮ್ಮ ಹೋಲ ನಮಗೆ ನೀಡುವುದಕ್ಕೆ ಇಷ್ಟು ಕಾಡಿಸುತ್ತಿದ್ದೀರಾ?.. ಕೆಲ ರೈತರ ಮಕ್ಕಳು ಮದುವೆಗೆ, ಉನ್ನತ ಶಿಕ್ಷಣಕ್ಕೆ ಹೊಲದ ಮೇಲೆ ಸಾಲ ಮಾಡುವುದಕ್ಕೆ ಬ್ಯಾಂಕಿನವರು ಸಾಲ ಕೊಡುತ್ತಿಲ್ಲ. ನಾವು ಏನು ತಪ್ಪು ಮಾಡಿದ್ದೇವೆ, ತಿಳಿಸಿ.
- ಜಗದೀಶ ಸಜ್ಜನ್, ಸೌರಾಷ್ಟ್ರಹಳ್ಳಿ (12ವೈಡಿಆರ್6)-
ಕೋಟ್- 3 : ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆಲ್ಲಿ ಭೂಮಿ ಕಳೆದುಕೊಂಡ ರೈತರ ಪಾಡು ಹೇಗಾಗಿದೆಯೆಂದರೆ, ಇಲ್ಲೇ ಇದ್ದು ಕೆಲಸ ಮಾಡಬೇಕಾದರೆ ಭೂಮಿಯೂ ಇಲ್ಲ, ಕೈಗಾರಿಕೆಗಳಲ್ಲಿ ಕೆಲಸ ಮಾಡಬೇಕಾದರೆ ಉದ್ಯೋಗ ಅವಕಾಶಗಳೂ ಇಲ್ಲ. ಇರುವ ಕೆಮಿಕಲ್ ಕಂಪನಿಗಳು ಅಪಾಯಕಾರಿ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿವೆ. 2ನೇ ಹಂತದಲ್ಲಿ, ನಮ್ಮದು 50 ಎಕರೆಗಿಂತ ಹೆಚ್ಚು ಭೂಮಿಯನ್ನು ಹೋಗುತ್ತದೆ ಎಂದು ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾವು ಭೂಮಿಯನ್ನು ನೀಡುವುದಿಲ್ಲ. ಭೂಮಿ ಇದ್ದರೆ ದುಡಿದು ತಿನ್ನುತ್ತೇವೆ. ಆದರೆ ಸರ್ಕಾರ ಕೊಟ್ಟ ಹಣ ತಿನ್ನಲು ಬರುವಿದಿಲ್ಲ, ಬಹಳ ದಿನವೂ ಅವು ಉಳಿಯೋಲ್ಲ.- ಬಾಪುಗೌಡ, ರಾಚನಹಳ್ಳಿ. (12ವೈಡಿಆರ್7)
-ಕೋಟ್- 4: ನಮ್ಮ ಕುಟುಂಬಕ್ಕೆ ಆಧಾರವಾಗಿರುವುದೇ ಈ 7.30 ಎಕರೆ ಭೂಮಿ. ಇದನ್ನೂ ಕೈಗಾರಿಕಾ ಪ್ರದೇಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಕೆಐಎಡಿಬಿರವರು ನೋಟಿಸ್ ನೀಡಿದ್ದಾರೆ. ಇರುವ ಸ್ವಲ್ಪ ಭೂಮಿಯಲ್ಲಿ ಮೂವರು ಜನ ಸಹೋದರರು ಉಳುಮೆ ಮಾಡಿ ಕಷ್ಟಾನೋ-ಸುಖಾನೋ ಜೀವನವನ್ನು ಸಾಗಿಸುತ್ತಿದ್ದೇವೆ. ಈ ಭೂಮಿಯನ್ನು ಕೊಟ್ಟ ನಾವೆಲ್ಲಿಗೆ ಹೋಗೋಣ? ನಾವು ಜೀವ ಹೋದರೂ ಭೂಮಿ ಕೊಡಲ್ಲ. ಸರಕಾರ ಇಲ್ಲಿನ ಜನರ ಜನರ ಮಿಡಿತವನ್ನು ಅರಿತು ಅವರ ಭೂಮಿಯನ್ನು ಅವರಿಗೆ ನೀಡಿ ಜನಪರ ಸರಕಾರ ಎನ್ನಿಸಿಕೊಳ್ಳಲಿ.
-ಮಲ್ಲಿಕಾರ್ಜುನಗೌಡ , ದದ್ದಲ್. (12ವೈಡಿಆರ್8)-
12ವೈಡಿಆರ್4 : ಕಡೇಚೂರು ಬಾಡಿಯಾಖ ಕೈಗಾರಿಕಾ ಪ್ರದೇಶದ ನೋಟ.