ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಬಾರಿಯೂ ಹಲವು ಪ್ರದೇಶಗಳು ಭಾರಿ ಮಳೆಗೆ ಜಲಾವೃತವಾಗಿವೆ. ಅಕ್ಷರಶಃ ಸ್ಮಾರ್ಟ್ಸಿಟಿಯ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರತಿ ವರ್ಷ ಜುಲೈ, ಆಗಸ್ಟ್ನಲ್ಲಿ ಭಾರಿ ಮಳೆಗೆ ಮಂಗಳೂರು ಮುಳುಗಡೆಯಾಗುತ್ತಿದ್ದರೆ, ಈ ಬಾರಿ ಮಳೆಗಾಲ ಆರಂಭವಾದ ಜೂನ್ ಪ್ರಥಮ ವಾರದಲ್ಲೇ ಪ್ರವಾಹದ ಪರಿಸ್ಥಿತಿಯನ್ನು ಎದುರಿಸಿದೆ.ಪ್ರತಿ ವರ್ಷದ ಮಳೆಗಾಲದಂತೆ ಈ ಬಾರಿಯೂ ಮಂಗಳೂರಿನ ಎಂಟ್ಹತ್ತು ಪ್ರದೇಶಗಳು ಜಲಾವೃತವಾಗಿದೆ. ನಗರ ಪ್ರದೇಶದಲ್ಲೂ ಸುರಕ್ಷಿತ ಸ್ಥಳಗಳಿಗೆ ತೆರಳಲು ಬೋಟು, ರಬ್ಬರ್ ಟ್ಯೂಬ್ಗಳ ಆಶ್ರಯವನ್ನು ಪಡೆಯಲಾಗಿದೆ. ಒಂದೆರಡು ದಿನಗಳ ಕಾಲ ಅಸ್ತವ್ಯಸ್ತಗೊಂಡ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಮತ್ತೆ ಭಾರಿ ಮಳೆಯನ್ನು ಅಲ್ಲಗಳೆಯುವಂತಿಲ್ಲ ಎಂಬ ಪರಿಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ಮಂಗಳೂರನ್ನು ಮುಳುಗಡೆಯಿಂದ ಪಾರು ಮಾಡುವುದೇ ದೊಡ್ಡ ಸವಾಲು ಆಗಿದೆ.
2018ರ ಘಟನೆ ಏನು?:2018ರ ಮೇ 29 ರಂದು ಸುರಿದ ಮಹಾಮಳೆಗೆ ಮಂಗಳೂರು ಸಂಪೂರ್ಣ ಮುಳುಗಡೆಯಾಗಿತ್ತು. ಈ ಮಹಾಮಳೆಗೆ ಮುಳುಗಿದ ಮಂಗಳೂರಿನ ಪ್ರದೇಶಗಳಲ್ಲಿ ರಾಜಕಾಲುವೆಗಳ ಅತಿಕ್ರಮಣ, ಒತ್ತುವರಿ ಪತ್ತೆ ಮಾಡಿ ಸುರತ್ಕಲ್ ಎನ್ಐಟಿಕೆಯಿಂದ ವರದಿ ನೀಡುವಂತೆ ಅಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ) ಕಮಿಷನರ್ಗೆ ಸೂಚನೆ ನೀಡಿದ್ದರು. ಅದರಂತೆ ನಗರ ವ್ಯಾಪ್ತಿಯ ಒತ್ತುವರಿ ವರದಿಯೂ ಸಿದ್ಧಗೊಂಡಿತ್ತು. ಪಾಲಿಕೆ ವ್ಯಾಪ್ತಿಯ 27 ಪ್ರದೇಶಗಳನ್ನು ನೆರೆ ಬಾಧಿತ ಪ್ರದೇಶ ಎಂದು ವರದಿ ನೀಡಲಾಗಿತ್ತು. ಅವುಗಳಲ್ಲಿ ಒತ್ತುವರಿ ತೆರವುಗೊಳಿಸಿ ಸಮಸ್ಯೆ ನಿವಾರಣೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.
ಎಲ್ಲೆಲ್ಲಿ ಮುಳುಗಡೆ?:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಕೊಡಿಯಾಲ್ಬೈಲ್, ಭಗವತಿ ನಗರ ಕೊಡಿಯಾಲಗುತ್ತು, ಕೊಟ್ಟಾರಚೌಕಿ, ಅಳಕೆ, ಮಾಲೆಮಾರ್, ಪಾಂಡೇಶ್ವರ, ಅತ್ತಾವರ, ಪಂಪ್ವೆಲ್, ಜಪ್ಪಿನಮೊಗರು, ಸುಭಾಸ್ ನಗರ, ಶಿವ ನಗರ, ಬಂಗ್ರಕೂಳೂರು ಸೇರಿದಂತೆ ಅನೇಕ ಪ್ರದೇಶಗಳು ಮುಳುಗಡೆಯಾಗಿತ್ತು. 200ಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿ, ಕೋಟ್ಯಂತರ ರು. ನಷ್ಟ ಸಂಭವಿಸಿತ್ತು. ನಗರದ ಈ ದುಸ್ಥಿತಿಗೆ ರಾಜಕಾಲುವೆಗಳ ಅತಿಕ್ರಮಣ ಪ್ರಮುಖ ಕಾರಣ ಎಂದು ಜಿಲ್ಲಾಡಳಿತ ಮನಗಂಡು ಅಧ್ಯಯನಕ್ಕೆ ಸೂಚಿಸಿತ್ತು.
ವರದಿಯ ಶಿಫಾರಸು ಮೂಲೆಗುಂಪುಎನ್ಐಟಿಕೆ ವರದಿಯ ಶಿಫಾರಸನ್ನು ಕಾರ್ಯರೂಪಕ್ಕೆ ತರುವಂತೆ ಅಂದಿನ ಜಿಲ್ಲಾಡಳಿತ ಪಾಲಿಕೆ ಆಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಆದರೆ ರಾಜಕೀಯ ಪ್ರಭಾವ, ಬಿಲ್ಡರ್ ಮಾಫಿಯಾದಿಂದ ಒತ್ತುವರಿ ತೆರವು ಕಾರ್ಯ ಅರ್ಧದಲ್ಲೇ ಮೊಟಕುಗೊಂಡಿತ್ತು. ನಂತರ ಅಧಿಕಾರಕ್ಕೆ ಬಂದ ಚುನಾಯಿತ ಆಡಳಿತದ ಅವಧಿಯಲ್ಲಿ ಒತ್ತುವರಿ ತೆರವು ಬಗ್ಗೆ ಯಾವುದೇ ಪ್ರಯತ್ನ ನಡೆಯಲಿಲ್ಲ. ಇದರಿಂದಾಗಿ ಪ್ರತಿ ಬಾರಿಯೂ ಭಾರಿ ಮಳೆಗೆ ಮಂಗಳೂರು ಮುಳುಗುವುದು ಸಾಮಾನ್ಯವಾಗಿದ್ದು, ಬಗೆಹರಿಯದ ಸಮಸ್ಯೆಯಾಗಿ ಉಳಿದುಕೊಂಡಿದೆ. ಎನ್ಐಟಿಕೆ ವರದಿ ಕಡತದಲ್ಲೇ ಉಳಿದುಕೊಂಡಿದೆ.
............ಮಂಗಳೂರಿನಲ್ಲಿ ಮುಳುಗಡೆ ಪ್ರದೇಶಗಳ ಒತ್ತುವರಿ ತೆರವಿಗೆ ಎನ್ಐಟಿಕೆ ವರದಿ ನೀಡಿ ಏಳು ವರ್ಷ ಕಳೆದಿದೆ. ಆದರೂ ಪಾಲಿಕೆ ಆಡಳಿತ ವರದಿಯತ್ತ ತಿರುಗಿಯೂ ನೋಡದೆ ನಾಗರಿಕರ ಬಾಯಿಮುಚ್ಚಿಸುವ ಕೆಲಸ ಮಾಡಿದೆ. ಪ್ರತಿ ವರ್ಷ ಭಾರಿ ಮಳೆಗೆ ಮಂಗಳೂರು ಮುಳುಗಡೆಯಾಗುವುದನ್ನು ತಪ್ಪಿಸಲು ಇನ್ನಾದರೂ ವರದಿಯಲ್ಲಿನ ಶಿಫಾರಸನ್ನು ಕಾರ್ಯರೂಪಕ್ಕೆ ತರಬೇಕು. ಶಾಶ್ವತ ಪರಿಹಾರಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು.-ಹನುಮಂತ ಕಾಮತ್, ಅಧ್ಯಕ್ಷರು, ನಾಗರಿಕ ಹಿತರಕ್ಷಣಾ ಸಮಿತಿ, ಮಂಗಳೂರು..........
ಎನ್ಐಟಿಕೆ ವರದಿ ನೀಡಿರುವ ಬಗ್ಗೆ ಮಾಹಿತಿ ಇಲ್ಲ, ಆದರೂ 2018ರಲ್ಲಿ ಮಹಾಮಳೆಗೆ ಮಂಗಳೂರು ಮುಳುಗಡೆಯಾದಾಗ ಕೆಲವೊಂದು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೀಗ ಮತ್ತೆ ಮತ್ತೆ ಮುಳುಗಡೆಯಾಗುತ್ತಿರುವುದರಿಂದ ಅಂತಹ ಪ್ರದೇಶಗಳನ್ನು ಗುರುತಿಸಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಖಾಸಗಿ ಏಜೆನ್ಸಿಗೆ ಸರ್ವೆ ನಡೆಸಲು ಸೂಚನೆ ನೀಡಲಾಗಿದೆ.-ರವಿಚಂದ್ರ ನಾಯಕ್, ಆಯುಕ್ತರು, ಮಹಾನಗರ ಪಾಲಿಕೆ