ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪತ್ರಿಕಾ ರಂಗದ ವ್ಯಾಪ್ತಿ ವಿಸ್ತಾರವಾಗುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬ ಪ್ರಜೆಯೂ ಪತ್ರಕರ್ತನ ಮನೋಭಾವ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದ ಪ್ರಭಾವದಿಂದ ಈಗಾಗಲೇ ಪತ್ರಕರ್ತರಾಗುವತ್ತ ಮುನ್ನುಗ್ಗುತ್ತಿರುವ ಯುವಜನತೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪತ್ರಿಕಾ ರಂಗದ ವ್ಯಾಪ್ತಿ ವಿಸ್ತಾರವಾಗುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬ ಪ್ರಜೆಯೂ ಪತ್ರಕರ್ತನ ಮನೋಭಾವ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದ ಪ್ರಭಾವದಿಂದ ಈಗಾಗಲೇ ಪತ್ರಕರ್ತರಾಗುವತ್ತ ಮುನ್ನುಗ್ಗುತ್ತಿರುವ ಯುವಜನತೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ಪಟ್ಟಣದ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುದ್ದೇಬಿಹಾಳ ತಾಲೂಕು ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಸದುಪಯೋಗ, ದುರುಪಯೋಗ ಎರಡೂ ಆಗುತ್ತಿದೆ. ನಾನು, ನನ್ನ ಕುಟುಂಬ, ನನ್ನ ದೇಶದ ಜೊತೆಗೆ ದೇಶದ ಹೆಮ್ಮೆಯ ಪ್ರಜೆಯಾಗುವತ್ತ ಯುವಜನತೆ ಗಮನ ಹರಿಸಬೇಕು. ಮಾಧ್ಯಮದವರು ಇತಿಹಾಸ ಅರಿತುಕೊಳ್ಳಬೇಕು. ದಕ್ಷಿಣ ಭಾರತದಲ್ಲಿಯೇ ಉತ್ತರ ಕರ್ನಾಟಕ ಅತ್ಯಂತ ಸಂಪದ್ಬರಿತ ಪ್ರದೇಶ. ಇದರ ಮೇಲೆ ಬೆಳಕು ಚಲ್ಲುವ ಕಾರ್ಯ ಪತ್ರಕರ್ತರಿಂದ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ನ್ಯೂಸ್ಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ತಂತ್ರಜ್ಞಾನ ಬೆಳೆದಂತೆ ಸುಳ್ಳು ಸುದ್ದಿ ಹೆಚ್ಚಾಗುತ್ತಿದೆ. ಮೊಬೈಲ್ ಡಿಜಿಟಲ್ ಲೈಬ್ರರಿ ಇದ್ದಂತೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಅರಿಹಂತ ಪದವಿ ಕಾಲೇಜು ಉಪನ್ಯಾಸಕ ಪ್ರೊ.ರಾಜನಾರಾಯಣ ನಲವಡೆ, ಪತ್ರಕರ್ತರು ನಿಸ್ವಾರ್ಥ ಸೇವೆ ಒದಗಿಸಬೇಕು. ಆರ್ಥಿಕ ಬಲ ಇರದಿದ್ದರೂ ಪರವಾಗಿಲ್ಲ. ಆದರೆ ನೈತಿಕ, ಮಾನಸಿಕ ಬಲ ಹೊಂದಿರಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸರಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಪತ್ರಿಕಾರಂಗವೇ ಕಾರಣ ಎಂದರು.ಅರಿಹಂತ ಸಂಸ್ಥೆಯ ಅಧ್ಯಕ್ಷ ಮಹಾವೀರ ಸಗರಿ ಅವರು ಮಾತನಾಡಿ, ನಾನೂ 25 ವರ್ಷಗಳವರೆಗೆ ಪತ್ರಕರ್ತನಾಗಿ ಕೆಲಸ ಮಾಡಿದ್ದು ಅವರ ಆಗುಹೋಗುಗಳ ಅನುಭವ ನನಗಿದೆ. ಪತ್ರಿಕಾರಂಗದಲ್ಲಿನ ನ್ಯೂನ್ಯತೆ ಸರಿಯಾಗಬೇಕು. ನಡಹಳ್ಳಿಯವರು ಈ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದರಿಂದ ಅವರನ್ನು ಮಾಜಿ ಶಾಸಕರು ಎನ್ನಲು ಆಗುವುದಿಲ್ಲ. ಅವರು ಯಾವತ್ತಿದ್ದರೂ ನಮಗೆ ಶಾಸಕರೇ ಎಂದರು.ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ, ಪ್ರಾಂಶುಪಾಲ ಪ್ರೊವಿಫುಲ್ ಸಗರಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಿ.ಬಿ.ವಡವಡಗಿ ವೇದಿಕೆಯಲ್ಲಿದ್ದರು. ಸಂಘದ ತಾಲೂಕು ಅಧ್ಯಕ್ಷ ಆರ್.ಬಿ.ವಡವಡಗಿ ಇದ್ದರು.ಪತ್ರಕರ್ತರಾದ ರಿಯಾಜಅಹ್ಮದ್ ಮುಲ್ಲಾ, ಹಣಮಂತ ಬೀರಗೊಂಡ, ಈಶ್ವರ ಈಳಗೇರ, ಹಣಮಂತ ಟಕ್ಕಳಕಿ, ಕೃಷ್ಣಾ ಕುಂಬಾರಗೆ ವಾರ್ಷಿಕ ಪ್ರಶಸ್ತಿ ನೀಡಲಾಯಿತು. ಪತ್ರಕರ್ತ ಬಸವರಾಜ ಕುಂಬಾರ ಪುತ್ರಿ ಭಾಗ್ಯಶ್ರೀಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪವಿತ್ರಾ ಕಲಬುರ್ಗಿ ಪ್ರಾರ್ಥಿಸಿದರು. ಮುತ್ತು ವಡವಡಗಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂರೇನಬಿ ನದಾಫ ನಿರೂಪಿಸಿ ವಂದಿಸಿದರು. ಸಂಘದ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.ಕೋಟ್:ಇಂದು ಮಾಧ್ಯಮ ಬರವಣಿಗೆಯ ಆಧಾರದಲ್ಲಿ ನಿಂತಿಲ್ಲ. ಆದರೆ, ನಿಜವಾದ ಪತ್ರಕರ್ತ ಹೊರಹೊಮ್ಮುವುದು ಆತನ ಬರವಣಿಗೆಯಿಂದ. ಪ್ರಿಂಟ್, ಡಿಜಿಟಲ್, ವಿಜುವಲ್, ಸೋಷಿಯಲ್ ಮೀಡಿಯಾಗಳ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದೆ. ಪತ್ರಕರ್ತರಿಗೆ ಸಂವಹನ ಸಾಮರ್ಥ್ಯ, ಭಾಷಾ ಪ್ರೌಢಿಮೆ ಚನ್ನಾಗಿರಬೇಕು. ಇವೆರಡೂ ಇರುವವನೇ ನಿಜವಾದ ಶ್ರೀಮಂತ.ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕ