ರಟ್ಟಿಹಳ್ಳಿ: ಪ್ರತಿಯೊಬ್ಬ ಯುವಕರು ಆ. 14. 1947ರ ಕರಾಳ ದಿನವನ್ನು ಎಂದೂ ಮರೆಯಬಾರದು. ಕಾರಣ ಅಂದು ಭಾರತವನ್ನು ಧರ್ಮದ ಆಧಾರದ ಮೇಲೆ ತುಂಡರಿಸಿ ದ್ರೋಹ ಬಗೆದ ಕರಾಳ ದಿನವೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಧಾರವಾಡ ವಿಭಾಗ ಸಂಯೋಜಕ ಅನೀಲ್ ಹಲವಾಗಿಲ್ ಹೇಳಿದರು.

ವಿಶ್ವ ಹಿಂದೂ ಪರಿಷತ್ ಬಜರಂದಳ ರಟ್ಟಿಹಳ್ಳಿ ಪ್ರಖಂಡ ವತಿಯಿಂದ ಅಖಂಡ ಭಾರತವನ್ನು ತುಂಡರಿಸಿದ ಕರಾಳ ದಿನದ ಅಂಗವಾಗಿ ನಡೆದ ಬೃಹತ್ ಪಂಜಿನ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅಖಂಡ ಭಾರತವನ್ನು ಧರ್ಮದ ಆಧಾರದ ಮೇಲೆ ತುಂಡರಿಸಿ ಪಾಕಿಸ್ತಾನವನ್ನು ಮುಸ್ಲಿಂ ದೇಶವೆಂದು ಘೋಷಣೆ ಮಾಡಿ ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಮಾಡಿ ದ್ರೋಹ ಬಗೆದು ಪಾಕಿಸ್ತಾನದಲ್ಲಿನ ಲಕ್ಷಾಂತರ ಹಿಂದೂಗಳು ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಬಿಟ್ಟು ಭಾರತಕ್ಕೆ ಬರಬೇಕಾಯಿತು, ಲಕ್ಷಾಂತರ ಹಿಂದೂಗಳನ್ನು ಕಗ್ಗೊಲೆ ಮಾಡಿ ಭಾರತಕ್ಕೆ ಕಳಿಸಲಾಯಿತು. ಇಂಥ ಕರಾಳ ದಿನವನ್ನು ಮರೆತು ಆ. 15ನ್ನು ದೇಶಾದ್ಯಂತ ಅತೀ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಅದೇ ರೀತಿ ಆ.14ರ ಕರಾಳ ದಿನವನ್ನು ಮರೆಯಬಾರದು ಎಂದರು.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಸಹ ಸಂಯೋಜಕ ವಿನಾಯಕ ಕರ್ನೂಲ್, ಮುತ್ತು ಬೆಣ್ಣಿ, ಸಹ ಧರ್ಮ ಪ್ರಸಾರ ಪ್ರಮುಖ ನವೀನ್ ಮಾದಾರ, ಆಕಾಶ ಪಾಟೀಲ್, ಪ್ರಶಾಂತ ಹಿತ್ತಲಮನಿ, ಭುವನ ಪವಾರ್, ಪಟ್ಟಣ ಪಂಚಾಯತ್ ಸದಸ್ಯ ರವಿ ಹದಡೇರ, ರವೀಂದ್ರ ಮುದ್ದಣ್ಣನವರ, ಶ್ರೀನಿವಾಸ ಬೈರೋಜಿಯವರ ಹಾಗೂ ನೂರಾರು ಕಾರ್ಯಕರ್ತರು ಇದ್ದರು.