ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಇಡೀ ದೇಶದ ಗಡಿಯನ್ನು ಕಾಯುವ ಶ್ರೇಷ್ಠ ಕಾಯಕ ಮಾಡುವ ಸೈನಿಕರನ್ನು ಪ್ರತಿಯೊಬ್ಬರೂ ಅಭಿಮಾನದಿಂದ ಗೌರವಿಸವಂತಾಗಬೇಕೆಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ನಿಡಗುಂದಿ ರಸ್ತೆಯಲ್ಲಿರುವ ಸೈನಿಕ ಕಲ್ಯಾಣ ಮಂಟಪದಲ್ಲಿ ಮಾಜಿ ಸೈನಿಕರ ಹಾಗೂ ಅರೇಸೈನಿಕರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದವರ ಸೈನಿಕರ ಅನುಭವ ಕೇಳಿದಾಗ ಸೈನಿಕರು ಯಾವ ಪರಿಸ್ಥಿತಿಯಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣ ಲೆಕ್ಕಿಸದೇ ಹೋರಾಟ ಮಾಡಿದ್ದನ್ನು ನಾವು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. 1999ರಲ್ಲಿ ಅರವತ್ತು ದಿನಗಳ ಕಾಲ ನಿರಂತರವಾಗಿ ನಡೆದ ಕಾರ್ಗಿಲ್ ಯುದ್ಧದಲ್ಲಿ 527ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾದರು. ಸಾವಿರಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಈ ಯುದ್ಧದಲ್ಲಿ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶದ ಗಡಿಯನ್ನು ಕಾಪಾಡಿ ವಿಜಯವನ್ನು ಸಾಧಿಸಿದರು. ಯುವಜನಾಂಗವು ಕಾರ್ಗಿಲ್ ವಿಜಯೋತ್ಸವವನ್ನು ಗೌರವದಿಂದ ಆಚರಣೆ ಮಾಡುವಂತಾಗಬೇಕೆಂದರು.

ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಪ್ರತಿ ಶಾಲೆಗಳಲ್ಲಿ ಮಾಜಿ ಸೈನಿಕರು ತೆರಳಿ ತಮ್ಮ ಸೈನ್ಯದ ಅನುಭವ ಹೇಳುವ ಜೊತೆಗೆ ದೇಶ ಭಕ್ತಿ ಕುರಿತು ಹೇಳುವಂತಾದರೆ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲು ಪೂರಕವಾಗುತ್ತದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಚ್.ಬಿ.ಬಾರಿಕಾಯಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಅನೇಕ ಸೈನಿಕರು ಹುತಾತ್ಮರಾದ ಕುಟುಂಬಸ್ಥರು ದುಃಖದಲ್ಲಿದ್ದಾರೆ. ಅನೇಕ ಮಕ್ಕಳು ತಬ್ಬಲಿಯಾಗಿದ್ದಾರೆ. ಹುತಾತ್ಮರಾದ ಸೈನಿಕರಿಗೆ ಗೌರವಿಸಬೇಕಾದ ಕರ್ತವ್ಯ ನಮ್ಮೆಲ್ಲರದು. ಸಂಘಟನೆಯಲ್ಲಿ ಸಂಘರ್ಷ ಇರಬಾರದು. ಸಂಘರ್ಷವಿಲ್ಲದೇ ಇರುವ ಸಂಘಟನೆಯೆಂದರ ಅದು ಸೈನಿಕರ ಸಂಘಟನೆಯಾಗಿದೆ. ಜಗತ್ತಿನಲ್ಲಿ ಎರಡು ಮಹಾಯುದ್ಧಗಳಾಗಿವೆ. ಮೂರನೇ ಮಹಾಯುದ್ಧ ಸಂಭವಿಸಿದರೆ ಒಂದೊಂದು ದೇಶವನ್ನು ಪ್ರತಿನಿಧಿಸುವ ದೇಶಗಳಿವೆ. ಆದರೆ ಭಾರತವನ್ನು ಪ್ರತಿನಿಧಿಸುವ ದೇಶ ಮತ್ತೊಂದಿಲ್ಲ ಎಂದರು.


ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿದರು.

ಶಿವಾನಂದ ಈರಕಾರ ಮುತ್ಯಾ ಸಾನ್ನಿಧ್ಯ, ಮಾಜಿ ಸೈನಿಕರ ಹಾಗೂ ಅರೇಸೈನಿಕರ ಸಂಘದ ತಾಲೂಕಾಧ್ಯಕ್ಷ ಬಿ.ಜಿ.ಬಿರಾದಾರ ಅಧ್ಯತಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಲಕ್ಷ್ಮೀ ಜಾಲಗೇರಿ, ಸಂಘದ ಉಪಾಧ್ಯಕ್ಷ ಎಸ್.ಬಿ.ಕೊಟ್ರಶೆಟ್ಟಿ ಇತರರು ಇದ್ದರು. ಸಂಘದ ಕಾರ್ಯದರ್ಶಿ ಆರ್.ಐ.ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿವು ಮಡಿಕೇಶ್ವರ ನಿರೂಪಿಸಿದರು. ಕೊಟ್ರೇಶ ಹೆಗ್ಡಾಳ ವಂದಿಸಿದರು.

ಕಾರ್ಗಿಲ್ ಹುತಾತ್ಮ ಯೋಧನ ಪ್ರತಿಮೆಗೆ ಮಾಲಾರ್ಪಣೆ

ವಿಜಯಪುರ ರಸ್ತೆಯಲ್ಲಿರುವ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಕಾರ್ಗಿಲ್ ಹುತಾತ್ಮ ಅಶೋಕ ಜಾಧವ ಪ್ರತಿಮೆಗೆ ಸಂಘದಿಂದ ಮಾಲಾರ್ಪಣೆ ಮಾಡಿದ ನಂತರ ಮಾಜಿ ಸೈನಿಕರಿಂದ ಪರೇಡ್ ನಡೆಯಿತು. ನಂತರ ಸೈನಿಕ ಜ್ಯೋತಿಯನ್ನು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು.