ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ನವೀನ್ ಕುಮಾರ್ ಹೇಳಿದರು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾವಲುಗಾರ ಮತ್ತು ಜೆಸಿಬಿ ಚಾಳಕ ಸೇರಿ ಮೂವರು ಸಿಬ್ಬಂದಿಗಳು ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ವೇತನ ನೀಡಲಾಗುತ್ತಿದೆ. ಆದರೆ ಹಾಜರಾತಿ ಪುಸ್ತಕ ನಿರ್ವಹಣೆ ಮಾಡದೇ ಇರುವುದರಿಂದ ಅವರಿಗೆ ತೊಂದರೆಯಾಗುತ್ತದೆ. ಕೂಡಲೇ ಎಂಟು ವರ್ಷದ ಹಾಜರಾತಿ ಪುಸ್ತಕ ನಿರ್ವಹಿಸಿ ಎಂದು ವಿಷಯ ನಿರ್ವಹಕರಿಗೆ ಸೂಚನೆ ನೀಡಿದರು.ಪಟ್ಟಣ ಪಂಚಾಯಿತಿ ಎಲ್ಲಾ ಕೊಠಡಿಗಳಿಗೆ ಸಿಸಿ ಕ್ಯಾಮರ ವ್ಯವಸ್ಥೆ ಮಾಡಿ ಕಚೇರಿಗೆ ಬಂದಂತ ಖಾಸಗಿ ವ್ಯಕ್ತಿಗಳು ಕಡತಗಳನ್ನು ನೋಡುತ್ತಾರೆ. ಹಾಗಾಗಿ ಟೇಬಲ್ ಮೇಲೆ ಕಡತಗಳನ್ನು ಇಡದೇ ಗಾಡ್ರೇಜ್ ನಲ್ಲಿ ಇಡಿ ಎಂದು ಸದಸ್ಯ ರಮೇಶ್ ಸಭೆಯ ಗಮನಕ್ಕೆ ತಂದರು.
ಪಟ್ಟಣ ಪಂಚಾಯಿತಿಯನ್ನು ಪರಿವರ್ತಿತ ಪುರಸಭೆಯನ್ನಾಗಿ ಮಾಡುವ ಕಾರ್ಯ ಎಲ್ಲಿಗೆ ಬಂತು ಎಂದು ಸದಸ್ಯ ಶಕೀಲ್ ಆಹಮದ್ ಪ್ರಶ್ನಿಸಿದಾಗ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರ್. ಐ. ಮೋದಿನ್ ಸ್ಪಷ್ಟಪಡಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರಗೆ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಬೇಕು ಎಂಬ ವಿಷಯ ಚರ್ಚೆಗೆ ಬಂದಾಗ, ಶಕೀಲ್ ಆಹಮದ್, ಮಹಮದ್ ಆಲಿ, ಲೂಕ್ಮನ್ ಖಾನ್ ಮಸಿದಿಯ ಮುಂದೆ ಮಳಿಗೆ ಬೇಡ. ಆ ರಸ್ತೆ ಹಾಗೇಯೆ ಇರಲಿ ಎಂದಾಗ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರು ತುರ್ತು ಸಭೆಯನ್ನು ಕರೆದು ಚರ್ಚಿ ನಡೆಸೋಣ ಎಂದು ವಾತಾವರಣ ತಿಳಿಗೊಳಿಸಿದರು.
ಖಾಸಗಿ ನಿವೇಶನಗಳಲ್ಲಿ ಬೆಳೆದಿರುವ ಜಾಲಿ ಗಿಡಗಳನ್ನು ತೆರವು ಮಾಡಲು ಮಾಲಿಕರಿಗೆ ಸೂಚನೆ ನೀಡಬೇಕು ಎಂದು ನಾಮನಿರ್ದೇಶನ ಸದಸ್ಯ ಕುರಿ ಜಯ್ಯಣ್ಣ ಸಭೆಯ ಗಮನಕ್ಕೆ ತಂದರು. ಈಗಾಗಲೇ ಮಾಲಿಕರಿಗೆ ಸೂಚನೆ ನೀಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಹೇಳಿದರು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಉಪಾಧ್ಯಕ್ಷೆ ಲೋಕಮ್ಮ ಓಬಳೇಶ್, ಆರೋಗ್ಯ ನೀರಿಕ್ಷಕ ಪ್ರಶಾಂತ್, ಅಭಿಯಂತರೆ ಶೃತಿ ಸೇರಿದಂತೆ ಪ.ಪಂ.ಸದಸ್ಯರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.