ನರಗುಂದ: ಮನುಷ್ಯ ಆಧುನಿಕ ಒತ್ತಡ ಜೀವನದಲ್ಲಿ ಆಧ್ಯಾತ್ಮಕ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಆರೋಗ್ಯವಾಗಿರಲು ಸಾಧ್ಯವೆಂದು ಆಧ್ಯಾತ್ಮಿಕ ಚಿಂತಕ ಬಾಬುಗೌಡ ತಿಮ್ಮನಗೌಡ್ರ ತಿಳಿಸಿದರು.

ತಾಲೂಕಿನ ಶಿರೋಳ ಗ್ರಾಮದ ಯಚ್ಚರಸ್ವಾಮಿಗಳ ಸಂಸ್ಥಾನ ಗವಿಮಠದಲ್ಲಿ ನಡೆದ 33ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿ, ಅಧ್ಯಾತ್ಮ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಅವಶ್ಯವಾಗಿ ಬೇಕು. ಆಧ್ಯಾತ್ಮವಿಲ್ಲದಿದ್ದರೆ ಜೀವನಕ್ಕೆ ಬೆಲೆಯೇ ಇರುವುದಿಲ್ಲ. ಹಾಗೆಯೇ ಅನುಷ್ಠಾನ ಜಪ ತಪಾದಿಗಳು ಕೇವಲ ಸ್ವಾಮಿಗಳೇ ಮಾಡಬೇಕೆಂದಿನಿಲ್ಲ. ಅದನ್ನು ಲೌಕಿಕ ಜೀವನದಲ್ಲಿ ಇದ್ದುಕೊಂಡು ಎಲ್ಲರೂ ಸಾಧಿಸಬಹುದು ಎಂದರು.

ಶಾಂತಲಿಂಗ ಶ್ರೀಗಳು ಮಾತನಾಡಿ, ಅನುಷ್ಠಾನ ಎನ್ನುವುದು ಆತ್ಮಬಲವನ್ನು ಹೆಚ್ಚಿಸಿಕೊಳ್ಳುವ ಕ್ರಿಯೆ. ಅನುಷ್ಠಾನದಲ್ಲಿ ಬಹಳ ದೊಡ್ಡ ಶಕ್ತಿ ಇದೆ. ಹಿಂದೆ ಯಚ್ಚರಸ್ವಾಮಿಗಳು, ಹಾನಗಲ್ಲ ಕುಮಾರಸ್ವಾಮಿಗಳು, ಸಿದ್ಧಾರೂಢರು, ಅಜಾತ ನಾಗಲಿಂಗಸ್ವಾಮಿಗಳು ಇವರೆಲ್ಲರೂ ಅನುಷ್ಠಾನ ಬಲದಿಂದಲೇ ಲೋಕವನ್ನು ಉದ್ಧಾರ ಮಾಡಿದ್ದಾರೆ. ಹಾಗಾಗಿ ಅದರ ಕುರಿತು ಜನ ಸಾಮಾನ್ಯರಿಗೂ ತಿಳಿಯಪಡಿಸುವುದಕ್ಕಾಗಿ ಇಂದಿನ ಗವಿಮಠದ ಶಿವಾನುಭವ ಗೋಷ್ಠಿ ಸಾಕ್ಷಿಯಾಗಿದೆ ಎಂದರು.

ಕಿತ್ತಲಿಯ ಅಭಿನವ ಸಿದ್ದರಾಮ ಶ್ರೀಗಳು ಮಾತನಾಡಿ, ನಾವು ಕೂಡ ಇತ್ತೀಚೆಗೆ ಅನುಷ್ಠಾನವನ್ನು ಮೊದಲ ಬಾರಿಗೆ ಸಂಪನ್ನಗೊಳಿಸಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದೇವೆ. ಅನುಷ್ಠಾನದ ಅನುಭವ ಬಹಳ ದೊಡ್ಡದು. ಜಗತ್ತಿನ ಜಂಜಾಟದಿಂದ ದೂರವಿರುವುದರಲ್ಲಿ ಬಹಳಸ್ಟು ನೆಮ್ಮದಿ ಇದೆ ಎಂದರು.

ಅಭಿನವ ಯಚ್ಚರ ಶ್ರೀಗಳು ಮಾತನಾಡಿ ಮಠಾಧೀಶರು ನಾಡಿನ ಉದ್ಧಾರಕ್ಕಾಗಿ ಪ್ರತಿವರ್ಷ ಲಿಂಗ ಅನುಷ್ಠಾನ ಮತ್ತು ಮೌನ ಅನುಷ್ಠಾನ ಮಾಡುತ್ತಾರೆ ಎಂದರು.


ಜಿಲ್ಲಾ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ ಅವರು ಶಿವಾನುಭವ ದತ್ತಿ ನಿಧಿಗಾಗಿ ₹25000 ಶ್ರೀಮಠಕ್ಕೆ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಅನುಷ್ಠಾನಗೈದ ಪೂಜ್ಯರನ್ನು ಮತ್ತು ರೈತ ಮುಖಂಡ ಎಸ್.ಎಸ್. ಪಾಟೀಲರನ್ನು ಶ್ರೀಮಠದಿಂದ ಗೌರವಿಸಲಾಯಿತು.

ಈ ವೇಳೆ ಸಂಗೀತ ಸೇವೆಯನ್ನು ದುರ್ಗಾದೇವಿ ಭಜನಾ ಮಂಡಳಿಯವರು ಹಾಗೂ ಮಲ್ಲಪ್ಪ ಚಿಕ್ಕನರಗುಂದ, ಬಸವರಾಜ ಕುಪ್ಪಸ್ತ, ಗುರುಪಾದಪ್ಪ ಭಜಂತ್ರಿಯವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಎಸ್.ವಿ. ಕುಪ್ಪಸ್ತ, ಮಾಳಪ್ಪ ಪೂಜಾರ, ಶಂಕರಪ್ಪ ಮುಚಖಂಡಿ, ಶೇಖಪ್ಪ ಕಟಗೇರಿ, ಎಸ್.ವೈ. ಮುಲ್ಕಿಪಾಟೀಲ, ದೇವರಾಜ ಜಂಗವಾಡ ಉಪಸ್ಥಿತರಿದ್ದರು. ವಿಜೇಂದ್ರಸ್ವಾಮಿ ಸ್ವಾಗತಿಸಿದರು. ಸುನೀಲ ಕಳಸದ ನಿರೂಪಿಸಿ, ವಂದಿಸಿದರು.