ಕನ್ನಡಪ್ರಭ ವಾರ್ತೆ ಶಿಕಾರಿಪುರ
ಆರ್ಥಿಕ ಸಾಕ್ಷರತೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ. ಪ್ರಸ್ತುತ ವೇಗದ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಗದು ರಹಿತ ವ್ಯವಹಾರ ಅತ್ಯಂತ ಜನಪ್ರಿಯ ಹಾಗೂ ಅನಿವಾರ್ಯವಾಗಿದ್ದು ಜಾಗ್ರತೆಯಿಂದ ವ್ಯವಹರಿಸುವ ಜತೆಗೆ ದುರಾಸೆಯಿಂದ ಆಮಿಷಕ್ಕೆ ಒಳಗಾಗಬಾರದು ಎಂದು ಇಲ್ಲಿನ ಪಟ್ಟಣ ಠಾಣೆ ವೃತ್ತ ನಿರೀಕ್ಷಕ ಸಂತೋಷ ಎಸ್.ಪಾಟೀಲ್ ತಿಳಿಸಿದರು.ತಾಲೂಕಿನ ನೆಲವಾಗಿಲು ಗ್ರಾಪಂ ಆವರಣದಲ್ಲಿ ಸೋಮವಾರ ಕೆನರಾ ಬ್ಯಾಂಕ್ ಪ್ರಧಾನ ಕಚೇರಿ, ಕೆನರಾ ಆರ್ಥಿಕ ಸಲಹಾ ಟ್ರಸ್ಟ್ ಬೆಂಗಳೂರು,ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಸ್ಥಳೀಯ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ವತಿಯಿಂದ ನಡೆದ ನಗದು ರಹಿತ ವ್ಯವಹಾರ ಮತ್ತು ಆರ್ಥಿಕ ಸಾಕ್ಷರತೆಯ ಅರಿವಿನೊಂದಿಗೆ ಮಹಿಳಾ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗದು ರಹಿತ ವ್ಯವಹಾರ ಇತ್ತೀಚಿನ ದಿನದಲ್ಲಿ ಅತ್ಯಂತ ಜನಪ್ರಿಯವಾಗಿದ್ದು,ನಿರ್ಲಕ್ಷಿಸಿದಲ್ಲಿ ದೊಡ್ಡ ನಷ್ಟ ಕಟ್ಟಿಟ್ಟ ಬುತ್ತಿ ಎಂದ ಅವರು ತಂತ್ರಜ್ಞಾನದ ಭರದಲ್ಲಿ ಆರ್ಥಿಕ ಸಾಕ್ಷರತೆಯ ಅರಿವಿನ ಜತೆ ನಗದು ರಹಿತ ವ್ಯವಹಾರ ಕೈಗೊಳ್ಳುವಂತೆ ತಿಳಿಸಿದರು.ಅತಿಯಾದ ಆಮಿಷಕ್ಕೆ ಒಳಗಾದಲ್ಲಿ ಮೋಸ ಮಾಡುವವರು ಕಣ್ಣಿಗೆ ಕಾಣುವಂತೆ ಮೋಸದ ಬಲೆಗೆ ಕೆಡವಲಿದ್ದಾರೆ.ಜಾಣ್ಮೆ ಹಾಗೂ ಜಾಗ್ರತೆಯಿಂದ ವ್ಯವಹರಿಸಿ ತಂತ್ರಜ್ಞಾನದ ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.ಅಪರಿಚಿತರ ಫೋನ್ ಕರೆ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ತಿಳಿಸಿ ಡಿಜಿಟಲ್ ಅರೆಸ್ಟ್ ಎಂಬ ಮೋಸದ ಜಾಲಕ್ಕೆ ಸಿಲುಕಿದಲ್ಲಿ ತಕ್ಷಣ 1930 ಟೋಲ್ ಫ್ರೀ ನಂಬರಿಗೆ ದೂರು ನೀಡುವಂತೆ ತಿಳಿಸಿ ಮೊಬೈಲ್ ಆ್ಯಪ್ಗಳ ಬಳಕೆ ಮಾಡುವಾಗ ಡಬಲ್ ಲಾಕ್ ಕೋಡ್ನ್ನು ಬಳಸಬೇಕು ವಂಚನೆಗೆ ಒಳಗಾಗಿ ಮರ್ಯಾದೆಗೆ ಅಂಜಿ ಪ್ರಕರಣ ದಾಖಲಿಸಲು ಹಿಂದೇಟು ಹಾಕಬಾರದು.ಎಲ್ಲ ರೀತಿಯ ಸಮಸ್ಯೆಗೆ 112ಕ್ಕೆ ಕರೆ ಮಾಡಿದಲ್ಲಿ ತಕ್ಷಣ ಸ್ಪಂದಿಸಲಾಗುವುದು ಎಂದರು.
ಸ್ಥಳೀಯ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಗುಡದಯ್ಯ ಉಡುಗಣಿ ಮಾತನಾಡಿ, ಆರ್ಥಿಕತೆಯ ಬಲವರ್ಧನೆಗೆ ಆರ್ಥಿಕ ಸಾಕ್ಷರತೆಯ ಅರಿವು ಪ್ರತಿ ವ್ಯಕ್ತಿಗೂ ಅತೀ ಅವಶ್ಯಕವಾಗಿದ್ದು ಭವಿಷ್ಯದ ನೆಮ್ಮದಿಯ ಬದುಕಿಗಾಗಿ ಹಣದ ಉಳಿತಾಯ ಹೂಡಿಕೆ ಬಹು ಮುಖ್ಯವಾಗಿದೆ ಉಳಿತಾಯದ ಹಣ ಆಪತ್ಕಾಲದಲ್ಲಿ ಅತ್ಮ ಸ್ಥೈರ್ಯ ಹೆಚ್ಚಸಲಿದೆ.ಇದರೊಂದಿಗೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಖಾತೆ ತೆರೆದಲ್ಲಿ ರೂ.4 ಲಕ್ಷ ರು.ವರೆಗೆ ಪರಿಹಾರ ಪಡೆದು ಕುಟುಂಬಕ್ಕೆ ಆರ್ಥಿಕ ಚೈತನ್ಯ ದೊರೆಯಲಿದೆ ಎಂದರು.
ಗ್ರಾಪಂ ಪಿಡಿಒ ಎಂ.ರಾಮಚಂದ್ರಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ಚಂದನ ಪ್ರವೀಣ, ಮಾಜಿ ಉಪಾಧ್ಯಕ್ಷೆ ಶೈಲಾ, ಪೊಲೀಸ್ ಸಿಬ್ಬಂದಿ ಚಂದ್ರಪ್ಪ, ವಲಯ ಮೇಲ್ವಿಚಾರಕ ಮಹೇಶ್, ಸಹಾಯಕ ಸಮಾಲೋಚಕ ಬಷೀರ್ ಸಾಬ್ ಮತ್ತಿತರರು ಹಾಜರಿದ್ದರು.