ಸಾರಾಂಶ
, ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಿಗೆ ಕೇಂದ್ರ ಸರ್ಕಾರದ ಭದ್ರತೆ ಇರುವುದರಿಂದ ಉಳಿತಾಯ ಮಾಡುವ ನಿಮ್ಮ ಹಣಕ್ಕೆ ಸುರಕ್ಷತೆ ಇರುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ಅಂಚೆ ಇಲಾಖೆ ಯೋಜನೆಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದು ಜನೋಪಯೋಗಿಯಾಗಿವೆ, ಇವುಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಬೋಗಾದಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು ಅಭಿಪ್ರಾಯಪಟ್ಟರು.ಬೋಗಾದಿಯ ಬಯಲು ರಂಗಮಂದಿರದಲ್ಲಿ ಮೈಸೂರು ಅಂಚೆ ವಿಭಾಗ ಏರ್ಪಡಿಸಿದ್ದ ಅಂಚೆ ಜನಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಿಗೆ ಕೇಂದ್ರ ಸರ್ಕಾರದ ಭದ್ರತೆ ಇರುವುದರಿಂದ ಉಳಿತಾಯ ಮಾಡುವ ನಿಮ್ಮ ಹಣಕ್ಕೆ ಸುರಕ್ಷತೆ ಇರುತ್ತದೆ ಎಂದು ತಿಳಿಸಿದರು.
ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಅಂಚೆ ಇಲಾಖೆ ನಮ್ಮ ಭಾವನೆ ಮತ್ತು ಹೃದಯಗಳಿಗೆ ಹತ್ತಿರವಾದ ಇಲಾಖೆಯಾಗಿದೆ. ಅಂಚೆ ಇಲಾಖೆ ಬೆಳೆದು ಬಂದು ಬಗೆಯನ್ನು ವಿವರಿಸಿ, ಅಂಚೆಯವನು ಎಂಬ ಕವಿತೆಯನ್ನು ವಾಚಿಸುವ ಮೂಲಕ ಸಭಿಕರ ಗಮನ ಸೆಳೆದರು.ಪ್ರಾಸ್ಥಾವಿಕವಾಗಿ ಮಾತನಾಡಿದ ಮೈಸೂರು ಪಶ್ಚಿಮ ಅಂಚೆ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಎಂ.ಜೆ. ಶ್ರೀನಿವಾಸ್ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಶಾಲಾ ಮಕ್ಕಳೊಂದಿಗೆ ಅಂಚೆ ಇಲಾಖೆಗೆ ಸಂಬಂಧಿಸಿದಂತೆ ಸಂವಾದ ನಡೆಸಿದರು.
ಉಪ ಅಂಚೆ ಪಾಲಕಿ ಸುಜಾತಾ, ಮೋಹನ್, ಚರಣ್ ಮತ್ತು ಬೋಗಾಧಿ ಅಂಚೆ ಕಚೇರಿ ಸಿಬ್ಬಂದಿ ಇದ್ದರು.