ಯಲಬುರ್ಗಾ: ಪ್ರತಿಯೊಬ್ಬ ನಾಗರಿಕರು ಹಕ್ಕು ಮತ್ತು ಕರ್ತವ್ಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ವಕೀಲ ವೀರಣ್ಣ ತಳಕಲ್ ಹೇಳಿದರು.

ತಾಲೂಕಿನ ತುಮ್ಮರಗುದ್ದಿ ಗ್ರಾಮದ ಆದಿಶಕ್ತಿ ಅಗ್ರಮ್ಮದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ೬೦ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಕಾನೂನು ಅರಿವು ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಆಧ್ಯಾತ್ಮದಲ್ಲಿ ಮುಖ್ಯವಾದ ಕಾನೂನು ಎಂದರೆ ಧರ್ಮ.ಧರ್ಮ ಎಂದರೆ ಸತ್ಯ, ನ್ಯಾಯ, ಒಳ್ಳೆಯ ನಡೆ-ನುಡಿ. ನಾವು ಸತ್ಯದ ಮಾರ್ಗದಲ್ಲಿ ನಡೆದರೆ ಅದು ಆಧ್ಯಾತ್ಮದ ಕಾನೂನನ್ನು ಪಾಲಿಸಿದಂತಾಗುತ್ತದೆ. ಶಿವಾನುಭವ ಎಂದರೆ ನಮ್ಮ ಒಳಮನಸ್ಸಿನಲ್ಲಿ ಶಿವತತ್ವ ಅರಿತುಕೊಳ್ಳುವುದು. ಶಿವನು ಶಾಂತಿ, ಸತ್ಯ, ಸಮತೆ ಮತ್ತು ಧರ್ಮದ ಪ್ರತೀಕ.ಈ ಮೌಲ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಿಜವಾದ ಶಿವಾನುಭವ ಸಿಗುತ್ತದೆ. ಕಾನೂನು ಅರಿವು ಎಂದರೆ ಸಮಾಜದಲ್ಲಿ ನಾವು ಹೇಗೆ ಬದುಕಬೇಕು,ನಮ್ಮ ಹಕ್ಕುಗಳು ಮತ್ತು ಕರ್ತವ್ಯ ಯಾವುವು ಎಂಬುದನ್ನು ತಿಳಿದುಕೊಳ್ಳುವುದು. ಕಾನೂನು ನಮ್ಮನ್ನು ನಿಯಂತ್ರಿಸಲು ಮಾತ್ರವಲ್ಲ, ನಮ್ಮನ್ನು ರಕ್ಷಿಸಲು ಕೂಡ ಇದೆ ಎಂದರು.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಬೆಳೆಸಲು ಧಾರ್ಮಿಕ ಹಾದಿಯಲ್ಲಿ ಸಾಗುವುದು ಅಗತ್ಯವಾಗಿದೆ, ಸಮಾಜದಲ್ಲಿ ಶಾಂತಿ ಮತ್ತು ನ್ಯಾಯ ಕಾಪಾಡಲು ಕಾನೂನು ಅರಿವು ಅತ್ಯಂತ ಅಗತ್ಯವಾಗಿದೆ.ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳು ಹಾಗೂ ಕರ್ತವ್ಯ ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಕಾನೂನು ಅರಿವು ಇಲ್ಲದಿರುವುದರಿಂದ ಅನೇಕರು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಲ್ಲು ಮಾಟರಂಗಿ ಮಾತನಾಡಿ, ಅಗ್ರಮ್ಮದೇವಿಯ ಕೃಪೆಯಿಂದ ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಭಕ್ತರಲ್ಲಿ ಹೊಸ ಶಕ್ತಿ, ಹೊಸ ನಂಬಿಕೆ ಮತ್ತು ಹೊಸ ಚೈತನ್ಯ ತುಂಬುತ್ತದೆ. ಭಕ್ತರು ತಮ್ಮ ಅನುಭವ ಹಂಚಿಕೊಳ್ಳುವುದರಿಂದ ಸಮಾಜದಲ್ಲಿ ಒಳ್ಳೆಯ ಮೌಲ್ಯಗಳು ಬೆಳೆಯುತ್ತವೆ. ಇಂದಿನ ಯುಗದಲ್ಲಿ ಮಾನಸಿಕ ಒತ್ತಡ, ಸಮಸ್ಯೆಗಳು ಹೆಚ್ಚಾಗಿರುವಾಗ ಇಂತಹ ಕಾರ್ಯಕ್ರಮಗಳು ನಮಗೆ ಮನಶಾಂತಿ ಮತ್ತು ಧೈರ್ಯ ನೀಡುತ್ತವೆ ಎಂದರು.


ತಾಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ್ ಮಾತನಾಡಿದರು. ಈ ಸಂದರ್ಭ ಮಹಾದೇವಯ್ಯ ಹಿರೇಮಠ, ರಾಜಶೇಖರಯ್ಯ ಹಿರೇಮಠ, ಬಸಪ್ಪ‌ ಕುದರಿಕೋಟಗಿ, ದುರಗಪ್ಪ ನಡುವಿನಮನಿ, ಮಹಾದೇವಯ್ಯ ಬಸಯ್ಯ ಹಿರೇಮಠ, ಮಂಗಳೇಶ ಶ್ಯಾಗೋಟಿ, ಬಸವರಾಜ ಮಾಲಿಗೌಡ್ರ,ರುದ್ರಯ್ಯ ಹಿರೇಮಠ, ಕುಬೇರಪ್ಪ ತೋಪಲಕಟ್ಟಿ, ಕಳಕನಗೌಡ ಪಾಟೀಲ, ಶ್ರೀಶೈಲ ಚಿಕ್ಕೊಪ್ಪದ, ಮಲ್ಲಪ್ಪ ಬಡಿಗೇರ, ಕುಮಾರ ಯರಿಗೇರಿ ಸೇರಿದಂತೆ ಗ್ರಾಮದ ಗುರು-ಹಿರಿಯರು,ಯುವಕರು ಇದ್ದರು.