ಪೋಷಕರು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು ಮುಖ್ಯ. ಇದು ಅವರ ಗುರಿ ಸಾಧನೆಗೆ ಸಹಕಾರಿ ಆಗುತ್ತದೆ. ವಿದ್ಯಾರ್ಥಿಗಳು ಓದುವ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರಿಡೆಯ ಕಡೆ ಗಮನ ಹರಿಸಬೇಕು. ಕ್ರೀಡಾ ಮನೋಭಾವದಿಂದ ವಿದ್ಯಾರ್ಥಿಗಳು ಒಲಂಪಿಕ್‌ನಲ್ಲಿ ಆಡುವ ಕನಸು ಹೊತ್ತುಕೊಂಡು ಮುನ್ನಡೆದರೆ ಗೆಲವು ಸಿಕ್ಕೇ ಸಿಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆತ್ಮರಕ್ಷಣೆಗಾಗಿ ಪ್ರತಿಯೊಬ್ಬರು ಕರಾಟೆ ಕಲಿಯುವುದು ಅಗತ್ಯ ಎಂದು ರಾಷ್ಟ್ರೀಯ ಕೊಕ್ಕೊ ಕ್ರೀಡಾಪಟು ಬಿ.ಚೈತ್ರಾ ಸಲಹೆ ನೀಡಿದರು.

ನಗರದ ಎಂಒಬಿ ಸಮುದಾಯ ಭವನದಲ್ಲಿ ಗೋಜು ರಿಯೋ ಕರಾಟೆ ಡೊ ಅಕಾಡೆಮಿ ಇಂಡಿಯಾ, ವಿಷ್ಣು ಲಯನ್ಸ್‌ ಮಾರ್ಷಲ್‌ ಆರ್ಟ್ಸ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಭಾನುವಾರ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಪೋಷಕರು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು ಮುಖ್ಯ. ಇದು ಅವರ ಗುರಿ ಸಾಧನೆಗೆ ಸಹಕಾರಿ ಆಗುತ್ತದೆ. ವಿದ್ಯಾರ್ಥಿಗಳು ಓದುವ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರಿಡೆಯ ಕಡೆ ಗಮನ ಹರಿಸಬೇಕು. ಕ್ರೀಡಾ ಮನೋಭಾವದಿಂದ ವಿದ್ಯಾರ್ಥಿಗಳು ಒಲಂಪಿಕ್‌ನಲ್ಲಿ ಆಡುವ ಕನಸು ಹೊತ್ತುಕೊಂಡು ಮುನ್ನಡೆದರೆ ಗೆಲವು ಸಿಕ್ಕೇ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಲಯನ್ಸ್‌ ಇಂಟರ್‌ ನ್ಯಾಷನಲ್‌ ಕ್ಲಬ್‌ ಸೌತ್‌ ಮಲ್ಟಿಪಲ್‌ ಕೌನ್ಸಿಲ್‌ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಅಗತ್ಯ ಸೇವೆಗಳನ್ನು ನೀಡಬೇಕು. ಹೆಣ್ಣು ಮಕ್ಕಳು ಸ್ವಸಾಮರ್ಥ್ಯ ಬೆಳೆಸಿಕೊಳ್ಳುವಂತಹ ಕಲೆಗಳನ್ನು ಕಲಿಸಿಕೊಡಬೇಕು. ವಿದ್ಯಾರ್ಥಿಗಳು ತಮ್ಮ ಆತ್ಮರಕ್ಷಣೆಗಾಗಿ ಕರಾಟೆ ಕಲಿಯಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪ್ರತಿಯೊಂದು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಿಂತ ತಮಗೆ ಯಾವುದು ಇಷ್ಟವೋ ಅದರಲ್ಲಿ ಸಾಧನೆ ಮಾಡುವುದು ಮುಖ್ಯವಾಗಬೇಕು. ಕ್ರೀಡಾ ಇಲಾಖೆಯು ಪ್ರೌಢಶಾಲಾ ಹಂತದಲ್ಲಿಯೇ ಪರಿಣಾಮಕಾರಿಯಾಗಿ ಕ್ರೀಡೆಗೆ ಉತ್ತೇಜನ ಕೊಡುವ ಮನೋಭಾವ ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಹಿರಿಯ ಕರಾಟೆ ಶಿಕ್ಷಕರಾದ ಗೋಪಿ ದಾಸ್‌, ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಸೋಸಿಯೇಷನ್‌ ಗೌರವಾಧ್ಯಕ್ಷ ಎಸ್‌.ಕೆ.ಶಿವಪ್ರಕಾಶ್‌ಬಾಬು, ಕಾರ್ಯಕ್ರಮ ಆಯೋಜಕ ಲೋಕೇಶ್‌ ಮೊದಲಿಯಾರ್‌, ತೀರ್ಪುಗಾರರಾದ ವಿನಯ್‌ಕುಮಾರ್‌, ವೆಂಕಟೇಶ್‌, ಪ್ರೇಮ್‌ಕುಮಾರ್‌, ಮನು ಭಾಗವಹಿಸಿದ್ದರು.