ರೋಟರಿ ಸಂಸ್ಥೆ ಕಳೆದ 125 ವರ್ಷಗಳಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬರುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಉಚಿತ ಆರೋಗ್ಯ ಶಿಬಿರ, ಕೃತಕ ಕಾಲು ಜೋಡಣೆ, ಉದ್ಯೋಗ ಮೇಳ, ಸ್ವಚ್ಛತಾ ಕಾರ್ಯ, ಪ್ರತಿಭಾ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಾ ಬರುತ್ತಿದ್ದು, ಆಸಕ್ತರು ರೋಟರಿ ಸಂಸ್ಥೆಗೆ ಕೈ ಜೋಡಿಸಬಹುದು.
ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ವಿಜ್ಞಾನ ಎಷ್ಟೇ ವೇಗವಾಗಿ ಬೆಳೆದರೂ ಅಷ್ಟೇ ರಭಸದಲ್ಲಿ ಮಾನವನ ಆರೋಗ್ಯ ಸಮಸ್ಯೆಗಳು ಬೆಳೆಯುತ್ತಿದ್ದು, ವಿಜ್ಞಾನಕ್ಕೆ ಸವಾಲಾಗಿಯೇ ಕಾಣುತ್ತಿವೆ. ಈ ಕಾಯಿಲೆಗಳನ್ನು ಎದುರಿಸಲು ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಅರಿವು ಹೊಂದಬೇಕು ಎಂದು ರೇಶಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.ತ್ಯಾಮಗೊಂಡ್ಲು ಪಟ್ಟಣದ ಜ್ಞಾನಧಾಮ ವಿದ್ಯಾಸಂಸ್ಥೆಯಲ್ಲಿ ರೇಶಿ ಫೌಂಡೇಶನ್, ನೆಲಮಂಗಲ ರೋಟರಿ ಸಂಸ್ಥೆ, ಅರುಣೋದಯ ಸಪ್ತಗಿರಿ ಆಸ್ಪತ್ರೆ, ಅಮೃತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ಹಾಗೂ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯಬೇಕು. ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಹಾಗೂ ಶಿಕ್ಷಣ ಸಂಸ್ಥೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರೇಶಿ ಫೌಂಡೇಶನ್ ಸ್ಥಾಪಿಸಿದ್ದು, ಪ್ರಸಕ್ತ ವರ್ಷದಿಂದ 10 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದ್ದು, ಪ್ರತಿವರ್ಷ ಮುಂದುವರಿಸುತ್ತೇವೆ ಎಂದರು.ಕುಟುಂಬದಂತೆ ಆರೋಗ್ಯವೂ ಮುಖ್ಯ:
ಶಾಲಾ ಕಾರ್ಯದರ್ಶಿ ರೇಖಾ ಕೆ.ಎನ್ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಚೆನ್ನಾಗಿದ್ದರೆ ಸಾಧನೆಗಳು ಉನ್ನತವಾಗುತ್ತವೆ. ಆರೋಗ್ಯಕರವಾದ ಸ್ಥಿತಿ ಮನುಷ್ಯನ ಜೀವನ ಮಟ್ಟ ಸುಧಾರಿಸುತ್ತದೆ. ಅಂತಹ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ನಮ್ಮ ಸಂಸ್ಥೆಯಲ್ಲಿ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ವಿದ್ಯಾರ್ಥಿಗಳು, ಪೋಷಕರಿಗೆ ತಪಾಸಣೆ ಮಾಡಲಾಗುತ್ತಿದೆ ಎಂದರು.ನೆಲಮಂಗಲ ರೋಟರಿ ಅಧ್ಯಕ್ಷ ನಾಗರಾಜು ಮಾತನಾಡಿ, ರೋಟರಿ ಸಂಸ್ಥೆ ಕಳೆದ 125 ವರ್ಷಗಳಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬರುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಉಚಿತ ಆರೋಗ್ಯ ಶಿಬಿರ, ಕೃತಕ ಕಾಲು ಜೋಡಣೆ, ಉದ್ಯೋಗ ಮೇಳ, ಸ್ವಚ್ಛತಾ ಕಾರ್ಯ, ಪ್ರತಿಭಾ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಾ ಬರುತ್ತಿದ್ದು, ಆಸಕ್ತರು ರೋಟರಿ ಸಂಸ್ಥೆಗೆ ಕೈ ಜೋಡಿಸಬಹುದು ಎಂದರು.
ಸಪ್ತಗಿರಿ ಆಸ್ಪತ್ರೆಯ ವೈದ್ಯೆ ಡಾ. ವಿದ್ಯಾ, ಸಂಸ್ಥೆಯ ಕಾರ್ಯದರ್ಶಿ ರೇಖಾ, ನೆಲಮಂಗಲ ರೋಟರಿ ಅಧ್ಯಕ್ಷ ನಾಗರಾಜು, ಪದಾಧಿಕಾರಿಗಳಾದ ನವೀನ್ ಕುಮಾರ್, ಶಿವಶಂಕರ್ ಪ್ರಸಾದ್, ರವಿಕುಮಾರ್, ಸಂಸ್ಥೆಯ ಪ್ರಾಂಶುಪಾಲ ಸೈಂಥಿಲ್, ವೈಶಾಲಿ, ಉದಯಕುಮಾರ್, ಡಾ.ರಾಜಶೇಖರ್, ಅಭಿಲಾಷ್ ಸೇರಿ ಶಿಕ್ಷಕರು, ಉಪನ್ಯಾಸಕರು, ವೈದ್ಯ ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು.----------