ಶ್ರವಣದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಿ: ಡಾ.ಆನಂದ್

| Published : Mar 05 2024, 01:35 AM IST

ಸಾರಾಂಶ

ಒಂದು ಸಾವಿರ ಜನರಲ್ಲಿ 291 ಮಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಶ್ರವಣದೋಷ ಇರುತ್ತದೆ. ಆದ್ದರಿಂದ ಸೂಕ್ಷ್ಮ ಭಾಗವಾದ ಶ್ರವಣ ಬಗ್ಗೆ ಎಚ್ಚರವಹಿಸಬೇಕು. 75 ಡಿಸಿಬಲ್‌ಗಿಂತ ಕಡಿಮೆ ಶಬ್ದ ಬಳಸಬೇಕು.

ಕನ್ನಡಪ್ರಭ ವಾರ್ತೆ ಮಡಿಕೇರಿಪ್ರತಿ ಮನುಷ್ಯರಿಗೂ ಶ್ರವಣ(ಕಿವಿ) ಪ್ರಮುಖ ಅಂಗವಾಗಿದ್ದು, ಸೂಕ್ಷ್ಮ ಪ್ರದೇಶವಾದ ಕಿವಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಹಾಗೂ ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಡಿಕೇರಿ ಬಾಹ್ಯ ಸೇವಾ ಕೇಂದ್ರ ಸಹಯೋಗದಲ್ಲಿ ‘ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ’ದಡಿಯಲ್ಲಿ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಉಪನ್ಯಾಸ ಕೊಠಡಿಯಲ್ಲಿ ಸೋಮವಾರ ನಡೆದ ‘ವಿಶ್ವ ಶ್ರವಣ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಂದು ಸಾವಿರ ಜನರಲ್ಲಿ 291 ಮಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಶ್ರವಣದೋಷ ಇರುತ್ತದೆ. ಆದ್ದರಿಂದ ಸೂಕ್ಷ್ಮ ಭಾಗವಾದ ಶ್ರವಣ ಬಗ್ಗೆ ಎಚ್ಚರವಹಿಸಬೇಕು. 75 ಡಿಸಿಬಲ್‌ಗಿಂತ ಕಡಿಮೆ ಶಬ್ದ ಬಳಸಬೇಕು ಎಂದು ಸಲಹೆ ಮಾಡಿದರು.

ಸಣ್ಣ ಮಕ್ಕಳಿಗೂ ಸಹ ಶ್ರವಣದೋಷ ಇರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಶ್ರವಣದೋಷ ಇರುವವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳಲ್ಲಿ ಶ್ರವಣದೋಷ ಎಷ್ಟು ಬೇಗ ಪತ್ತೆ ಮಾಡುತ್ತೇವೆ ಅಷ್ಟು ಒಳ್ಳೆಯದು. ಶ್ರವಣದೋಷ ಇದ್ದಲ್ಲಿ ಮಕ್ಕಳು ಮಾತನಾಡಲು ತೊಂದರೆಯಾಗುತ್ತದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿಯೇ ಗುಣಪಡಿಸಲು ಮುಂದಾಗಬೇಕು. ಜಿಲ್ಲೆಯಲ್ಲಿ ಇಂತಹ ಎರಡು ಪ್ರಕರಣಗಳು ವರದಿಯಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥೆ ಡಾ.ಶ್ವೇತಾ ಮಾತನಾಡಿ, ಯುವಜನರು ತಮ್ಮ ಇಯರ್‌ಫೋನ್‌ಗಳು ಮತ್ತು ಹೆಡ್‌ಫೋನ್ (ಕರ್ಣವಾಣಿ) ಬಳಕೆಯನ್ನು ಮಿತಿಗೊಳಿಸಬೇಕಾದ ಅಗತ್ಯ ಬಗ್ಗೆ ಒತ್ತಿ ಹೇಳಿದರು. ಮಕ್ಕಳಲ್ಲಿ ಎರಡು ವರ್ಷದ ವಯಸ್ಸಿನೊಳಗೆ ಆರೈಕೆ ಸಾಧ್ಯವಾದಷ್ಟು ಬೇಗ ಪ್ರಾರಂಭಿಸಬೇಕು ಎಂದು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ.ನರಸಿಂಹ ರೈ ಮಾತನಾಡಿ, ಇಯರ್‌ಫೋನ್ ಬಳಕೆಯನ್ನು ಮಿತಿಗೊಳಿಸುವ ಮಹತ್ವದ ಬಗ್ಗೆ ವಿವರಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ರೂಪೇಶ್ ಗೋಪಾಲ್ ಮಾತನಾಡಿ, ವಯಸ್ಸಾದವರಲ್ಲಿ ಶ್ರವಣೇಂದ್ರಿಯ ಆರೈಕೆಯ ಪ್ರಾಮುಖ್ಯತೆ ಮತ್ತು ಶ್ರವಣ ದೋಷದ ಭಾವನಾತ್ಮಕ ಮತ್ತು ಸಾಮಾಜಿಕ ಪರಿಣಾಮ ಕುರಿತು ತಿಳಿಸಿದರು.

ಮೂರನೇ ಎಂಬಿಬಿಎಸ್ ವಿದ್ಯಾರ್ಥಿ ಸುಮಂತ್, ವಿಕ್ರಮ್‌ ಶೆಟ್ಟಿ ಮಾತನಾಡಿದರು.ಮೂರನೇ ಎಂಬಿಬಿಎಸ್ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಪ್ರಾರ್ಥಿಸಿದರು. ತೃತೀಯ ಎಂಬಿಬಿಎಸ್ ವಿದ್ಯಾರ್ಥಿ ಸುಮಂತ್ ವಂದಿಸಿದರು.

ಜಾಥಾ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ-ಔಟ್ರೀಚ್ ಸೇವಾ ಕೇಂದ್ರದ ಸಹಯೋಗದೊಂದಿಗೆ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ಜಾಥಾ ನಡೆಯಿತು.

ನಗರದ ರಾಜಾಸೀಟು ಬಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದ ಅಧಿಕಾರಿ ಡಾ.ಆನಂದ್ ಮತ್ತು ಕೊ.ವೈ.ವಿ.ಸಂ. ನ ಪ್ರಾಂಶುಪಾಲರು ಡಾ.ನರಸಿಂಹ ರೈ, ಡಾ.ಶ್ವೇತಾ ಅವರು ಜಾಥಾಕ್ಕೆ ಚಾಲನೆ ನೀಡಿದರು.

ಕೊ.ವೈ.ವಿ.ಸಂ ಬೋಧನಾ ಆಸ್ಪತ್ರೆಗೆ ವಿದ್ಯಾರ್ಥಿಗಳು, ಕಿವಿ ಮತ್ತು ಶ್ರವಣೇಂದ್ರಿಯದ ಬಗ್ಗೆ ಫಲಕಗಳು ಮತ್ತು ಭಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು.