ಸಾರಾಂಶ
ಹಾವೇರಿ: ಶೈಕ್ಷಣಿಕ ಕಾಳಜಿ, ಉದ್ಯೋಗ ಸೃಷ್ಟಿ, ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ಹಲವು ಕನಸುಗಳನ್ನು ಕಂಡಿರುವ ನನಗೆ ಸಮೃದ್ಧ ಹಾವೇರಿ ಜಿಲ್ಲೆ ನಿರ್ಮಾಣಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.ಜಿಲ್ಲಾ ವಕೀಲರ ಸಂಘದಲ್ಲಿ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ಯಾರನ್ನೂ ದೂಷಿಸಲ್ಲ. ಒಂದು ವೇಳೆ ನನಗೆ ಸೇವೆ ಮಾಡುವ ಅವಕಾಶ ಸಿಕ್ಕರೆ ತಮ್ಮೆಲ್ಲರ ಭಾವನೆಗಳನ್ನು ಗೌರವಿಸುವೆ. ಜೊತೆಗೆ ತಮ್ಮ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುವೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ನನಗೆ ತಮ್ಮ ಬಂಧುಗಳ ಮತ್ತು ತಮ್ಮ ಕಕ್ಷಿದಾರರ ಮತವೂ ಬರುವಂತೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಜತ್ತಿ ಮಾತನಾಡಿ, ಜಿಲ್ಲಾ ವಕೀಲರ ಸಂಘದ ಮೇಲೆ ಗೌರವ ಭಾವನೆ ಹೊಂದಿರುವ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸೋಣ. ಅವರು ಸಂಸದರಾಗಿ ಚುನಾಯಿತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.ಅಹಿಂದ ಒಕ್ಕೂಟದ ಅಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾಗಿದ್ದ ಆರ್. ಗುಂಡೂರಾವ್ ಮತ್ತು ರಾಮಕೃಷ್ಣ ಹೆಗಡೆ ವಿರುದ್ಧ ಚುನಾವಣೆಯಲ್ಲಿ ಗೆದ್ದವರು ಸಾಮಾನ್ಯ ವ್ಯಕ್ತಿ. ಅಂತೆಯೇ ಈ ಬಾರಿಯೂ ಕೂಡ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಆನಂದಸ್ವಾಮಿ ಗಡ್ಡದೇವರಮಠ ಅವರಂಥ ಸಾಮಾನ್ಯ ವ್ಯಕ್ತಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ವಕೀಲರಾದ ಪಿ.ಎಸ್.ಹೆಬ್ಬಾಳ, ಉಮೇಶ ಗೊಡ್ಡೆಮ್ಮಿ, ವಿಜಯಕುಮಾರ ಸಪ್ಪಣ್ಣವರ. ಎಸ್.ಎಸ್.ಖಾಜಿ, ಮಲ್ಲಿಕಾರ್ಜುನ ನೀರಲಗಿಮಠ ಉಪಸ್ಥಿತರಿದ್ದರು. ಎನ್.ಎಸ್.ಕಾಳೆ ನಿರೂಪಿಸಿದರು. ಸಿ.ಪಿ.ಜಾವಗಲ್ಲ ವಂದಿಸಿದರು.