ಸಾರಾಂಶ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 227ನೇ ವಿಶೇಷ ಮದ್ಯವರ್ಜನ ಶಿಬಿರದ 86 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮದ್ಯವರ್ಜನ ಶಿಬಿರಗಳಲ್ಲಿ ವ್ಯಸನಿಗಳ ಮನಃಪರಿವರ್ತನೆ ಮಾಡುವ ಕೆಲಸ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಬಿರಕ್ಕೆ ದಾಖಲಾಗುವವರ ಸಂಖ್ಯೆ ಜಾಸ್ತಿಯಾಗಿದೆ. ಇದಕ್ಕೆ ಕಾರಣ ಕುಡಿತ ಕೆಟ್ಟದ್ದು ಅಂತ ಜನರಿಗೆಅರ್ಥವಾಗಿದೆ. ಎಲ್ಲದಕ್ಕೂ ಜಾತಿ ಭೇದವಿದೆ. ಆದರೆ ದುಶ್ಚಟಕ್ಕೆ ಜಾತಿ ಭೇದವಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 227ನೇ ವಿಶೇಷ ಮದ್ಯವರ್ಜನ ಶಿಬಿರದ 86 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹವಾಮಾನ, ಕಾಲಮಾನಕ್ಕೆ ಸರಿಯಾಗಿ ನಾವು ಜೀವನ ಮಾಡಬೇಕು. ಆದರೆ ಕುಡಿತಕ್ಕೆ ಯಾವ ಕಾಲಮಾನವೂ ಇಲ್ಲ. ಎಲ್ಲಾ ಕಾಲಮಾನದಲ್ಲೂ ಅದರ ಸೇವನೆ ಮಾಡ್ತಾರೆ. ಇದೊಂದು ಕೇವಲ ಆಕರ್ಷಣೀಯ ವಸ್ತುವಾಗಿದೆ. ಆದುದರಿಂದ ಚಂಚಲತೆಯನ್ನು ಹತೋಟಿ ಮಾಡುವುದನ್ನು ಕಲಿಯಬೇಕು ಎಂದರು.ಕಾರ್ಯಕ್ರಮದ ಸಮಾರೋಪ ಸಮಾರಂಭದಂದು ಯೋಜನೆಯ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ನವಜೀವನ ಸಮಿತಯ ಉದ್ಘಾಟನೆ ನೆರವೇರಿಸಿದರು.
ಸಮಾರೋಪ ಭಾಷಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ನಿರ್ವಹಿಸಿದರು.ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯ್ಸ್ ನಡೆಸಿಕೊಟ್ಟರು. ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿಗಳಾದ ನಾಗೇಂದ್ರ ಎಚ್.ಎಸ್, ಆರೋಗ್ಯ ಸಹಾಯಕಿ ಸೌಮ್ಯ, ಪ್ರಬಂಧಕರಾದ ಕಿಶೋರ್ ಸಹಕರಿಸಿದರು.