ಹೊಳಲ್ಕೆರೆಯಲ್ಲಿ ಹಕ್ಕು ಚಲಾಯಿಸಿದ ಆಂಜನೇಯ

| Published : Apr 27 2024, 01:00 AM IST

ಹೊಳಲ್ಕೆರೆಯಲ್ಲಿ ಹಕ್ಕು ಚಲಾಯಿಸಿದ ಆಂಜನೇಯ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ತರಳಬಾಳು ಬಾಲಕಿಯರ ಪ್ರೌಢಶಾಲೆಯ ಬೂತ್ ನಂಬರ್ 172ರಲ್ಲಿ ಮಾಜಿ ಸಚಿವ ಆಂಜನೇಯ ಶುಕ್ರವಾರ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದರು.

ಹೊಳಲ್ಕೆರೆ: ಪಟ್ಟಣದ ತರಳಬಾಳು ಬಾಲಕಿಯರ ಪ್ರೌಢಶಾಲೆಯ ಬೂತ್ ನಂಬರ್ 172ರಲ್ಲಿ ಮಾಜಿ ಸಚಿವ ಆಂಜನೇಯ ಶುಕ್ರವಾರ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದರು.

ನಂತರ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮರ್ಮಾಘಾತದ ಫಲಿತಾಂಶ ಬರಲಿದೆ. ಕನ್ನಡನಾಡಿನ ಜನ ಕೃತಜ್ಞತೆ ಗುಣದವರು. ಅದರಲ್ಲೂ ಗೃಹಲಕ್ಷ್ಮಿಯರು ಪಡೆದ ಫಲಕ್ಕೆ ಪ್ರತಿಯಾಗಿ ಕೃತಜ್ಞತೆ ತೋರುವ ವಿಶಾಲ ಹೃದಯವಂತರು. ಯಾವುದೇ ಮತಗಟ್ಟೆ ಬಳಿ ಜಮಾಯಿಸಿರುವ ಮಹಿಳೆ ಯರು ನಮ್ಮ ಮತ ಸಿದ್ದರಾಮಯ್ಯ ಅವರ ಪಕ್ಷ ಕಾಂಗ್ರೆಸ್ಸಿಗೆ ಎಂದು ಹಸ್ತ ತೋರಿಸಿ ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಇದೆ ಎಂದು ಸಮೀಕ್ಷೆಗಳು ಹೇಳಿದ್ದು, ಇದೇ ಕಾರಣಕ್ಕೆ ಸೋಲುವ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಯೋಗಿ ಆದಿತ್ಯನಾಥ್ ಬರಲಿಲ್ಲ. ತುಮಕೂರಿಗೆ ಅಮಿತ್ ಶಾ ಆಗಮನವಾಗಲಿಲ್ಲ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಚುನಾವಣೆಗೆ ಮುನ್ನವೇ ಬಿಜೆಪಿ ದಕ್ಷಿಣ ಭಾರತದಲ್ಲಿ ಸೋಲು ಒಪ್ಪಿಕೊಂಡಿದೆ ಎಂದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರವಾಗಿ ಜಿಲ್ಲಾ ಮಂತ್ರಿ ಹಾಗೂ ಆರು ಮಂದಿ ಶಾಸಕರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ, ದೇಶದ ಜನರ ಅಚ್ಚುಮೆಚ್ಚಿನ ನಾಯಕಿ ಪ್ರಿಯಾಂಕಾ ಗಾಂಧಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಜೊತೆಗೆ ಬಿಜೆಪಿಯ ಸಪ್ಪೆ ಪ್ರಚಾರ, ಕಾರಜೋಳ ಅವರ ಕಾಟಾಚಾರದ ಸ್ಪರ್ಧೆ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.