ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿ ಪ್ರಜ್ಞೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಮಹತ್ವದ ಪಾತ್ರ ವಹಿಸುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ನಿರ್ದೇಶಕ ರವೀಂದ್ರ ಪುತ್ತೂರು ಹೇಳಿದ್ದಾರೆ.

ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಾಲಾ ಸಂಸತ್ತು ಕೇವಲ ವಿದ್ಯಾರ್ಥಿಗಳಿಗೆ ಹುದ್ದೆ ನೀಡುವ ಕಾರ್ಯಕ್ರಮವಲ್ಲ. ಅದು ಭವಿಷ್ಯದ ಉತ್ತಮ ನಾಯಕರು, ಜವಾಬ್ದಾರಿಯುತ ನಾಗರಿಕರು ಹಾಗೂ ಸಮಾಜಮುಖಿ ವ್ಯಕ್ತಿತ್ವಗಳನ್ನು ರೂಪಿಸುವ ಪ್ರಜಾಪ್ರಭುತ್ವದ ಪಾಠಶಾಲೆಯಾಗಿದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕು. ಅಂತಹ ಹಕ್ಕನ್ನು ನಾವು ಸರಿಯಾದ ವ್ಯಕ್ತಿಗೆ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ನಾಯಕರನ್ನು ಮಾದರಿಯಾಗಿ ತೆಗೆದುಕೊಂಡು ಅತ್ಯುತ್ತಮ ನಾಯಕರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ. ಶಾಲಾ ಸಂಸತ್ತಿನ ಸದಸ್ಯರು ವಿದ್ಯಾರ್ಥಿಗಳ ಧ್ವನಿಯಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ತಾಯಿ ಮನೆಯಲ್ಲಿ ಹೇಗೆ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೋ ಹಾಗೇ ನಾಯಕರಾದವರು ಇರಬೇಕು ಎಂದರು.

ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಬಿ.ಪಿ ಸಂಪತ್ ಕುಮಾರ್, ಸಿಬಿಎಸ್‌ಸಿ ಶಾಲೆಯ ಪ್ರಾಂಶುಪಾಲ ಶ್ರೀಪ್ರಸಾದ್ ಮತ್ತಿತರರಿದ್ದರು.


ಶಾಲಾ ಸಂಸತ್ತಿನ ನಾಯಕನಾಗಿ ಋಷಿಕೇಶ್ ಎ ಮಿನಾಚೆ, ಉಪನಾಯಕ ನಿಶಾಂತ್ ರಾಜ್, ಸ್ಪೀಕರ್ ನಿಹಾರಿಕ, ಶಿಕ್ಷಣ ಮತ್ತು ಸಾಂಸ್ಕೃತಿಕ ಮಂತ್ರಿ ಸಯ್ಯದಾ ಆನಂ, ಶಿಸ್ತು ಮಂತ್ರಿ ದೃಷ್ಠಿ, ಕ್ರೀಡಾ ಮಂತ್ರಿ ಚೇತನ್, ಜಲಶಕ್ತಿ ಮಂತ್ರಿ ಸಾನ್ವಿಕಾ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ತನ್ವಿ ಪೂಜಾರಿ ತಮ್ಮ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಉಪಮುಖ್ಯೋಪಾಧ್ಯಾಯ ಜಯಶೀಲ ಸಂದೇಶ ವಾಚಿಸಿದರು. ಶಿಕ್ಷಕಿ ರಶ್ಮಿ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಸ್ವರ್ಣಲತಾ ಸಂಸತ್ತಿನ ನೂತನ ನಾಯಕರ ಪದಗ್ರಹಣ ನೆರವೇರಿಸಿದರು. ವನಿತಾ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ಸಂಸತ್ತಿನ ನಾಯಕ ಋಷಿಕೇಶ್ ನಾಯಕನ ಜವಾಬ್ದಾರಿಗಳನ್ನು, ಶಿಸ್ತು ಮಂತ್ರಿ ದೃಷ್ಟಿ, ವಿರೋಧ ಪಕ್ಷದ ನಾಯಕಿ ತನ್ವಿ ಪೂಜಾರಿ ಜವಾಬ್ದಾರಿಗಳನ್ನು ವಾಚಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಸ್ವಾಗತಿಸಿದರು ಶಿಕ್ಷಕಿ ಜಯಲಕ್ಷ್ಮಿನಿರೂಪಿಸಿದರು. ಸ್ಪೀಕರ್ ನಿಹಾರಿಕ ವಂದಿಸಿದರು.