ಸಾರಾಂಶ
ಮಂಡ್ಯ: ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸರ್ಕಾರ ಪ್ರತಿ ವರ್ಷವೂ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸುತ್ತಾ ಬಂದಿದೆ ಎಂದು ಡಯಟ್ ಉಪನಿರ್ದೇಶಕ ಪುರುಷೋತ್ತಮ್ ಹೇಳಿದರು. ನಗರದ ಡಯಟ್ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ, ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಿ ಜೊತೆಗೆ ಸ್ವಯಂ ಚಿಂತನೆ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ತನ್ಮಯತೆ ಮತ್ತು ಹೆಚ್ಚು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಅವರು ವಿಜ್ಞಾನಿಗಳಾಗಲು ಸಹಕಾರಿಯಾಗುತ್ತದೆ. ಅತ್ಯಂತ ವೇಗವಾಗಿ ವಿಜ್ಞಾನ ಬೆಳೆಯುತ್ತಿದೆ, ಹೊಸ ಹೊಸ ಸಂಶೋಧನೆಯಿಂದ ಹೊಸತನ ಕಾಣಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಯಾರಿಸಿದ ವಾಟರ್ ರಾಕೆಟ್ ಸೇರಿದಂತೆ ವಿವಿಧ ಮಾದರಿಗಳನ್ನು ಗಣ್ಯರು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಮೋಹನ್ ಕುಮಾರ್, ಉಪನ್ಯಾಸಕರಾದ ಶ್ರೀಕಂಠಪ್ರಸಾದ್, ಬಿ.ಎಸ್.ನಿರ್ಮಲಾ, ವಿಜಯ ಕುಮಾರಿ, ತೆಹರಾ, ಮೋಹನ್ಕುಮಾರ್, ಎಸ್.ಸಿದ್ದರಾಜು, ಪ್ರಶಾಂತ್ಕುಮಾರ್, ಪ್ರತಿಭಾ ಇತರರಿದ್ದರು.