ಭೋವಿ ನಿಗಮದ ಅವ್ಯವಹಾರ ತನಿಖೆಆಗಲಿ: ಗೂಳಿಹಟ್ಟಿ ಮತ್ತೆ ಒತ್ತಾಯ

| Published : Jun 10 2024, 12:46 AM IST

ಭೋವಿ ನಿಗಮದ ಅವ್ಯವಹಾರ ತನಿಖೆಆಗಲಿ: ಗೂಳಿಹಟ್ಟಿ ಮತ್ತೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಭೋವಿ ನಿಗಮದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಆಡಿಯೋವೊಂದನ್ನು ಹರಿಬಿಟ್ಟಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಅವರು ಅದೇ ಹಗರಣಕ್ಕೆ ಸಂಬಂಧಿಸಿ ಶನಿವಾರ ಮತ್ತೊಂದು ಆಡಿಯೋ ಹರಿ ಬಿಟ್ಟಿದ್ದಾರೆ. ಮತ್ತೊಮ್ಮೆ ಭೋವಿ ನಿಗಮದ ಅವ್ಯವಹಾರ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ.

- ಮತ್ತೊಂದು ಆಡಿಯೋ ಹರಿಬಿಟ್ಟ ಮಾಜಿ ಸಚಿವ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಭೋವಿ ನಿಗಮದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಆಡಿಯೋವೊಂದನ್ನು ಹರಿಬಿಟ್ಟಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಅವರು ಅದೇ ಹಗರಣಕ್ಕೆ ಸಂಬಂಧಿಸಿ ಶನಿವಾರ ಮತ್ತೊಂದು ಆಡಿಯೋ ಹರಿ ಬಿಟ್ಟಿದ್ದಾರೆ. ಮತ್ತೊಮ್ಮೆ ಭೋವಿ ನಿಗಮದ ಅವ್ಯವಹಾರ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ.

ತಮ್ಮ ಸಮುದಾಯದ ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವ ಅವರು, ನಾನು ಯಾರನ್ನೂ ಅವಮಾನಿಸುವ ರೀತಿಯಲ್ಲಿ ಮಾತನಾಡಿಲ್ಲ. ನಿಗಮದಲ್ಲಿ ಭೋವಿ ಸಮುದಾಯದ ಜನರಿಗೆ ಆಗಿರುವ ಅನ್ಯಾಯ ತಿಳಿಸುವ ಕೆಲಸ ಮಾಡಿದ್ದೇನೆ. ನನ್ನ ಬಗ್ಗೆ ನಮ್ಮ ಸಮುದಾಯದ ಜನ ತಪ್ಪು ತಿಳಿಯುವುದು ಬೇಡ. ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಭೋವಿ ನಿಗಮಕ್ಕೆ 2018-19ರಲ್ಲಿ ₹127 ಕೋಟಿ, 2019-20ರಲ್ಲಿ ₹119 ಕೋಟಿ, 2020 -21ನೇ ಸಾಲಿನಲ್ಲಿ ₹106 ಕೋಟಿ, 2021-22ರಲ್ಲಿ ₹40 ಕೋಟಿ, 2022-23ರಲ್ಲಿ ₹107 ಕೋಟಿ ಒಟ್ಟು ₹499 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇದು ಕೇವಲ ಸ್ಯಾಂಪಲ್‌ ಅಷ್ಟೇ ಎಂದಿರುವ ಅವರು, 2018-19ರಲ್ಲಿ ನೀಡಲಾಗಿರುವ 127 ಕೋಟಿ ಹಣವನ್ನು ಯುವಕರಿಗೆ, ಮಹಿಳೆಯರಿಗೆ, ವಾಹನ ಸಾಲ, ಗಂಗಾ ಕಲ್ಯಾಣ, ಭೂ ಒಡೆತನ ಹೀಗೆ ಎಲ್ಲಾ ಯೋಜನೆಗಳಿಗೂ ನೀಡಬೇಕೆಂಬ ಗೈಡ್‌ ಲೈನ್‌ ಇದೆ. ಆದರೆ ಇದ್ಯಾವುದಕ್ಕೂ ಲೆಕ್ಕವಿಲ್ಲ. ಮುಖ್ಯಮಂತ್ರಿ, ಇಲಾಖಾ ಮಂತ್ರಿ, ನಿಗಮದ ಅಧ್ಯಕ್ಷರ ವಿವೇಚನಾ ಕೋಟಾದಲ್ಲಿ ಈ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಪ್ರತಿ ವರ್ಷವೂ ಇದೇ ರೀತಿ ನಡೆದಿದ್ದು ಯಾರ ಅವಧಿಯಲ್ಲಿ ದುರ್ಬಳಕೆ ಆಗಿದೆ ಎಂದು ಪತ್ತೆ ಹಚ್ಚಬೇಕು. ಈ ಬಗ್ಗೆ ಸರಿಯಾದ ತನಿಖೆಗೆ ಸರ್ಕಾರವನ್ನು ಕೇಳಿದ್ದೇನೆ. ಯಾರ ಮೇಲೂ ಆಪಾದನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.2020-21ರಲ್ಲಿ ಹೊರಗುತ್ತಿಗೆ ನೌಕರಿಗಾಗಿ ₹1.94 ಕೋಟಿ ಅನಿಕಾ ಎಂಟರ್ ಪ್ರೈಸಸ್‌ಗೆ ಹೋಗಿದೆ. ಯಾಕೆ ಹಣ ಕೊಟ್ಟಿದ್ದಾರೆ? ಕೊವೀಡ್ ವೇಳೆ ₹1.78ಕೋಟಿ ಸಾಯಿ ಥೆರಪಿಸ್ಟ್ ಸಂಸ್ಥೆಗೆ ಹಾಕಿದ್ದಾರೆ. ಈ ಸಂಸ್ಥೆ ಯಾರದ್ದು? ಭೋವಿ ನಿಗಮಕ್ಕೂ ಈ ಸಂಸ್ಥೆಗೂ ಏನು ಸಂಬಂಧ? ಬೆಡ್ ಖರೀದಿಗೆ ₹1.78 ಕೋಟಿ ಎಂದು ತೋರಿಸಿದ್ದಾರೆ. ಬೆಡ್‌ಗೂ ನಮ್ಮ ಸಮಾಜಕ್ಕೂ ಏನು ಸಂಬಂಧ? ಸಾಂಸ್ಥಿಕ ಕೋಟಾದಡಿ ಎಷ್ಟೆಷ್ಟು ಹಣ ಖರ್ಚು ಮಾಡಲಾಗಿದೆ? ಬೊಮ್ಮಾಯಿ ಸಾಹೇಬರು ಇದನ್ನು ತನಿಖೆಗೆ ಕೊಟ್ಟಿದ್ದಾರೆ ಎಂದು ಗೂಳಿಹಟ್ಟಿ ಹೇಳಿದ್ದಾರೆ.ನಾನು ನಿಗಮದ ಅಧ್ಯಕ್ಷನಾದ ಬಳಿಕ ಹಣ ವಾಪಸ್ ಕಟ್ಟಲು ಸೂಚಿಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರಿಗೆ ಮನವಿ ಪತ್ರ ಕೊಟ್ಟಿದ್ದೇನೆ. ಎಲ್ಲಾ ನಿಗಮಗಳದ್ದು ಕೂಡಾ ಇದೇ ಕಥೆ. ಕೋಟಾ ಶ್ರೀನಿವಾಸ್ ಪೂಜಾರಿ ಬಗ್ಗೆ ಗೌರವ ಇದೆ. ಕಲಬುರಗಿ, ರಾಯಚೂರಿಗೆ ತಲಾ ₹20 ಕೋಟಿ ಹಣ ನೀಡಿದ್ದಾರೆ. ವಿವೇಚನಾ ಕೋಟಾ ಎಂದು ಹಣ ಬಿಡುಗಡೆ ಮಾಡಿದ್ದಾರೆ. ಫಲಾನುಭವಿಗಳ ಹಣ ಕೂಡಾ ಡ್ರಾ ಮಾಡಿದ್ದಾರೆ. ರೇಷನ್ ಅಂಗಡಿ ಎಂದು ಮಾಲೀಕನಿಗೆ ₹10 ಲಕ್ಷ ಹಾಕಿ. ₹25 ಸಾವಿರ ಮಾಲೀಕನಿಗೆ ಕೊಟ್ಟು, ಉಳಿದ ಎಲ್ಲ ಹಣ ವಾಪಸ್ ಹಾಕಿಸಿಕೊಂಡಿದ್ದಾರೆ. ಇದೆಲ್ಲವನ್ನು ಸರ್ಕಾರ ಕೂಡಲೇ ತನಿಖೆ ಮಾಡಬೇಕು ಎಂದು ಆಡಿಯೋದಲ್ಲಿ ಒತ್ತಾಯಿಸಿದ್ದಾರೆ.