ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಸ್ತುತ ಸಾಲಿನ ಬೆಳೆ ವಿಮೆ ಪಾವತಿ ದಿನಾಂಕವು ಮುಗಿದಿದ್ದು, ರೈತರಿಗೆ ಅನುಕೂಲವಾಗುವಂತೆ ಬೆಳೆ ವಿಮೆ ಪಾವತಿ ದಿನಾಂಕ ವಿಸ್ತರಿಸುವಂತೆ ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣಾ ಮತ್ತು ಮಾರಾಟ ಸಹಕಾರ ಸಂಘ (ದಾಮ್ಕೋಸ್) ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕಗಳು ಸರ್ಕಾರಕ್ಕೆ ಒತ್ತಾಯಿಸಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದಾಮ್ಕೋಸ್ ಅಧ್ಯಕ್ಷ ಬಿ.ಕೆ.ಶಿವಕುಮಾರ ಬಾತಿ, ರೈತ ಸಂಘದ ಮುಖಂಡ ಹೊನ್ನೂರು ಮುನಿಯಪ್ಪ ಮಾತನಾಡಿ, ಹವಾಮಾನ ಬದಲಾವಣೆ ಹಾಗೂ ಪ್ರಕೃತಿಯಲ್ಲಾಗುವ ಏರುಪೇರಿನಿಂದಾಗಿ ಕಾಲಕ್ಕೆ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ವಿಮೆ ಪಾವತಿಸುವ ಅವಧಿಯನ್ನು ಸರ್ಕಾರ ವಿಸ್ತರಿಸಲಿ ಎಂದರು.

ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬೆಳೆವಿಮೆ ಯೋಜನೆ ಜಾರಿಗೊಳಿಸಿವೆ. ರೈತರು ಸದುಪಯೋಗ ಪಡೆಯಬೇಕು. ಈಚಿನ ದಿನಗಳಲ್ಲಿ ಅಡಕೆ ಧಾರಣೆ ಕುಸಿತವಾಗುತ್ತಿದ್ದು, ಪ್ರತಿ ಕ್ವಿಂಟಲ್‌ಗೆ ₹60- ₹62 ಸಾವಿರ ಇದ್ದ ದರ ಈಗ ₹50-₹52 ಸಾವಿರಕ್ಕೆ ಬಂದು ನಿಂತಿದೆ. ರಾಸಾಯನಿಕ ಮಿಶ್ರಿತ ಮತ್ತು ಗುಣಮಟ್ಟವಿಲ್ಲದ ಅಡಕೆಯನ್ನು ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ (ಎಫ್.ಡಿ.ಎ) ಅಧಿಕಾರಿಗಳು ತಡೆ ಹಿಡಿದಿರುವುದರಿಂದ ಖರೀದಿ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಳೆಗಾರರಾದ ರೈತರ ಪೈಕಿ ಯಾರೂ ಅಡಕೆಗೆ ಬಣ್ಣ ಸೇರಿಸಿ, ಮಾರುಕಟ್ಟೆಗೆ ನೀಡುವುದಿಲ್ಲ. ಮಧ್ಯವರ್ತಿಗಳು ಅಥವಾ ವ್ಯಾಪಾರಸ್ಥರು ಅಡಕೆಗೆ ಬಣ್ಣ ಸೇರಿಸುವ ಕೆಲಸ ಮಾಡುತ್ತಾರೆ. ಮಾರುಕಟ್ಟೆಗೆ ಬರುತ್ತಿರುವ ಅಡಕೆಯಲ್ಲಿ ರಾಸಾಯನಿಕ ಮಿಶ್ರಣವಿರುವುದು, ಗುಣಮಟ್ಟವಿಲ್ಲದ ಅಡಕೆಯನ್ನು ಮಾರುಕಟ್ಟೆಗೆ ಬರುತ್ತಿರುವುದರಿಂದ ಎಫ್‌ಡಿಎ ಅಧಿಕಾರಿಗಳು ತಡೆ ಹಿಡಿದಿದ್ದರಿಂದ ಅಡಕೆ ಖರೀದಿ ಪ್ರಕ್ರಿಯೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಇದೇ ಮಾರುಕಟ್ಟೆ ದರ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಿದರು.


ಪ್ರತಿಯೊಬ್ಬ ಅಡಕೆ ಬೆಳೆಗಾರರು ತಾವು ಬೆಳೆದ ಹಸಿ ಅಡಕೆಯನ್ನು ತಾವೇ ಸುಲಿಸಿ, ಸಾಂಪ್ರಾದಾಯಿಕವಾಗಿ ಬೇಯಿಸಿ ಪರಿಷ್ಕರಿಸಿ ಮಾರಾಟ ಮಾಡಬೇಕು. ಅಡಕೆ ಖೇಣಿ ಕೊಡುವ ರೈತರು ಖೇಣಿದಾರರಿಗೆ ಗುಣಮಟ್ಟದ ರಾಸಾಯನಿಕ ಮುಕ್ತ ಅಡಕೆ ತಯಾರಿಸುವಂತೆ ಕಡ್ಡಾಯವಾಗಿ ತಿಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಡಕೆ ಮಾರಾಟ ಕಷ್ಟವಾಗುತ್ತದೆ ಎಂದು ಬಿ.ಕೆ.ಶಿವಕುಮಾರ, ಹೊನ್ನೂರು ಮುನಿಯಪ್ಪ ಸೂಚ್ಯವಾಗಿ ಎಚ್ಚರಿಸಿದರು.

ದಾಮ್ಕೋಸ್‌ ಕಾರ್ಯದರ್ಶಿ ಡಿ.ಎಚ್. ಶಿವಕುಮಾರ, ಉಪಾಧ್ಯಕ್ಷ ಎಚ್.ಜಿ.ಮಲ್ಲಿಕಾರ್ಜುನ ಬೆಳವನೂರು, ನಿರ್ದೇಶಕರಾದ ರಾಮಗೊಂಡನಹಳ್ಳಿ ಎಚ್.ಜಿ.ಮರುಳಸಿದ್ದಪ್ಪ, ಆರ್.ಜಿ.ನರೇಂದ್ರ ರಾಂಪುರ, ಕೆ.ಟಿ.ಮಹದೇವಪ್ಪ ಕಕ್ಕರಗೊಳ್ಳ, ಬಿ.ಬಸವರಾಜ ಬೇತೂರು, ಎಲ್.ಟಿ.ಮಹಾಂತಪ್ಪ ಕುಕ್ಕವಾಡ ಇತರರು ಇದ್ದರು.

- - -

-3ಕೆಡಿವಿಜಿ1: