- ನಿವೇಶನ-ಸೂರು ಕಲ್ಪಿಸಲು ಜಿ+2, ಜಿ+3 ಮಾದರಿ ಕಟ್ಟಡಗಳಿಗೆ ಪರವಾನಿಗೆ - - -

- ಸಮಗ್ರ ಅಭಿವೃದ್ಧಿ ಯೋಜನೆಗೆ ಮಂಜೂರಾತಿ: ಎಸ್ಸೆಸ್ಸೆಂ, ಹರೀಶ್ ಒತ್ತಾಯ

- ದಾವಣಗೆರೆಯಲ್ಲಿ ನಿವೇಶನಕ್ಕೆ 22 ಸಾವಿರ ಅರ್ಜಿ ಸಲ್ಲಿಕೆ: ಆಯುಕ್ತೆ ರೇಣುಕಾ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ


ಜನಸಂಖ್ಯೆ ಹೆಚ್ಚುತ್ತಿರುವುದು, ನಗರೀಕರಣ ವೇಗದಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ, ಕೆರೆ ಅಭಿವೃದ್ಧಿ ಹಾಗೂ ವಿವಿಧ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳಿಗೆ ವೇಗ ನೀಡುವಂತೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ದೂಡಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೂಡಾದಿಂದ ನಿವೇಶನಗಳ ಹಂಚಿಕೆ, ಕೆರೆಗಳ ಅಭಿವೃದ್ಧಿ, ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸಬೇಕು ಎಂದರು.

ರಾಜ್ಯದಲ್ಲಿ ದಾವಣಗೆರೆ ಸೇರಿದಂತೆ 2ನೇ ಹಂತದ ನಗರಗಳಲ್ಲಿ ನಗರೀಕರಣ ವೇಗದಲ್ಲಿ ಸಾಗುತ್ತಿದೆ. ಹೈರೈಸ್ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿವೆ. ಜಿ+2 ಹಾಗೂ ಜಿ+3 ಮಾದರಿ ವಸತಿ ಕಟ್ಟಡಗಳ ನಿರ್ಮಾಣ, 21 ಮೀಟರ್ ಎತ್ತರದವರೆಗೆ ಕಟ್ಟಡಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ಚಿಂತನೆ ನಡೆಯುಲಿ ಎಂದು ಹೇಳಿದರು.

ಉತ್ತರ ಶಾಸಕ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಹುಬ್ಬಳಿಯಲ್ಲಿ ಜಿ+2 ಹಾಗೂ ಜಿ+3 ಮಾದರಿ ಕಟ್ಟಡಗಳಿಗೆ ಪರವಾನಿಗೆ ನೀಡಲಾಗುತ್ತಿದೆ. ಅದರ ಬಗ್ಗೆ ದೂಡಾ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಬೆಳೆಯುತ್ತಿರುವ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಜಿ+2 ಹಾಗೂ ಜಿ+3 ಮಾದರಿ ಕಟ್ಟಡಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.

ದೂಡಾ ಆಯುಕ್ತೆ ರೇಣುಕಾ ಮಾತನಾಡಿ, ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ನಿವೇಶನಗಳಿಗೆ ಭಾರೀ ಬೇಡಿಕೆ ಇದೆ. ಸುಮಾರು 22 ಸಾವಿರಕ್ಕೂ ಅಧಿಕ ಅರ್ಜಿದಾರರು ನಿವೇಶನಗಳ ನಿರೀಕ್ಷೆಯಲ್ಲಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು. ಅದಕ್ಕೆ ಸಚಿವ ಯತೀಂದ್ರ, ದೊಡ್ಡ ಪ್ರಮಾಣದಲ್ಲಿ ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜನರ ನಿವೇಶನಗಳ ಬೇಡಿಕೆಗೆ ಸ್ಪಂದಿಸುವ ಕೆಲಸ ಪ್ರಾಧಿಕಾರದಿಂದ ಆಗಬೇಕು ಎಂದು ಸೂಚನೆ ನೀಡಿದರು.

ಪ್ರಾಧಿಕಾರದಿಂದ ಈಗಾಗಲೇ 6976 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಜೆ.ಎಚ್.ಪಟೇಲ್‌ ಬಡಾವಣೆಯಲ್ಲಿ ಖಾಲಿ ಉಳಿದಿರುವ 152 ನಿವೇಶನಗಳನ್ನು ಮರುಹರಾಜು ಮಾಡುವ ಮೂಲಕ ವಿಲೇವಾರಿ ಮಾಡಿ, ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ನಿವೇಶನಕ್ಕಾಗಿ ಕಾಯುತ್ತಿರುವ ಜನರ ಪೈಕಿ ಕೆಲವರಿಗಾದರೂ ನಿವೇಶನಗಳು ಸಿಕ್ಕಂತಾಗುತ್ತೆ. ಆದಷ್ಟು ಹೊಸ ಬಡಾವಣೆ ಅಭಿವೃದ್ಧಿಗೆ ಗಮನಹರಿಸಿ ಎಂದು ತಿಳಿಸಿದರು.

ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ, ಬಿ.ಪಿ.ಹರೀಶ ಮಾತನಾಡಿ, ದೂಡಾದಿಂದ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಹಲವಾರು ವರ್ಷಗಳಿಂದ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಸಿಡಿಪಿ ಪ್ಲಾನ್‌ಗೆ ತ್ವರಿತವಾಗಿ ಅನುಮೋದನೆ ನೀಡಬೇಕು. ಸಿಡಿಪಿ ಪ್ರಕ್ರಿಯೆ ಕಳೆದ ಐದಾರು ವರ್ಷಗಳಿಂದಲೂ ಮುಂದುವರಿಯುತ್ತಿದೆ. ಆದಷ್ಟು ಬೇಗನೆ ಸಿಡಿಪಿ ಪ್ಲಾನ್‌ಗೆ ಅನುಮೋದನೆ ನೀಡಿದರೆ ದಾವಣಗೆರೆ, ಹರಿಹರ ನಗರಗಳ ಅಭಿವೃದ್ಧಿಗೆ, ಜಿಲ್ಲಾ, ತಾಲೂಕು ಕೇಂದ್ರಕ್ಕೆ ಹೊಂದಿಕೊಂಡಿರುವ ಹಲವಾರು ಗ್ರಾಮಗಳ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಸಚಿವ ಯತೀಂದ್ರಗೆ ಆಗ್ರಹಿಸಿದರು.

- - -

* (ಬಾಕ್ಸ್‌)ವಿಶೇಷ ಸಾರ್ವಜನಿಕರ ಸಂಪರ್ಕ ಕಾರ್ಯಕ್ರಮ: ಯತೀಂದ್ರ

- ಬರ ಎದುರಾದರೆ ಪರಿಸ್ಥಿತಿ ಎದುರಿಸಲು ಪಾಲಿಕೆ ಸನ್ನದ್ಧವಾಗಿರಲು ಸೂಚನೆ ದಾವಣಗೆರೆ: ಸಾರ್ವಜನಿಕರ ಯಾವುದೇ ಸಮಸ್ಯೆ, ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ, ಅವುಗಳನ್ನು ಪರಿಹರಿಸುವ ಉದ್ದೇಶದಿಂದ ಮಹಾನಗರ ಪಾಲಿಕೆಯು ವಿಶೇಷ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಆರಂಭಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ದೂರು, ಅಹವಾಲು, ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೊಸ ಉಪಕ್ರಮಗಳನ್ನು ಪಾಲಿಕೆಯಿಂದ ಕೈಗೊಳ್ಳಬೇಕು ಎಂದರು.

ಜನರ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ನೇರ ಸ್ವೀಕರಿಸಿ, ಆದಷ್ಟು ಬೇಗ ಪರಿಹರಿಸಬೇಕು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆಗಳಿಗೆ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು ಎಂದು ಪಾಲಿಕೆ ಆಯುಕ್ತರು, ಅಧಿಕಾರಿಗಳಿಗೆ ಅವರು ಆದೇಶಿಸಿದರು.

ಮಳೆ ಕೊರತೆಯಾಗಿದ್ದು, ನೀರಿನ ಹಿತ, ಮಿತ ಬಳಕೆಗೆ ಗಮನ ಹರಿಸಬೇಕು. ಸಂಭವನೀಯ ದೀರ್ಘಕಾಲದ ಬರ ಪರಿಸ್ಥಿತಿ ಮನಗಂಡು ಈಗಿನಿಂದಲೇ ಸಮಗ್ರ ಮುನ್ನೆಚ್ಚರಿಕೆ ಕ್ರಮ, ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಕುಡಿಯುವ ನೀರು, ಸಾರ್ವಜನಿಕ ಆರೋಗ್ಯ, ಸ್ವಚ್ಛತೆ ಹಾಗೂ ಬೇಸಿಗೆ ಅವಧಿಯ ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.

ದೀರ್ಘ ಕಾಲದ ಬರ ಪರಿಸ್ಥಿತಿ ಉಂಟಾದರೆ ಎದುರಿಸಬೇಕಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿರುವಂತೆ ನೋಡಿಕೊಳ್ಳಿ. ಕೊಳವೆಬಾವಿಗಳ ದುರಸ್ತಿ, ನಿರ್ವಹಣೆ, ಬಳಕೆ ಬಗ್ಗೆ ಗಮನವಿರಲಿ. ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸುವುದು, ಅಗತ್ಯ ಬಿದ್ದರೆ ಹೆಚ್ಚುವರಿ ಪೈಪ್‌ ಲೈನ್ ಅಳವಡಿಸುವ ಕೆಲಸವಾಗಬೇಕು ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಭದ್ರಾ ಡ್ಯಾಂನಿಂದ, ತುಂಗಭದ್ರಾ ನದಿಯಿಂದ ನೀರು ಪಡೆಯುವ ಅವಕಾಶವಿದೆ. ಟಿವಿ ಸ್ಟೇಷನ್ ಕೆರೆ, ಕುಂದುವಾರ ಕೆರೆ ಯಂತಹ ಪ್ರಮುಖ ಜಲಮೂಲಗಳಲ್ಲಿ ಈಗ ಶೇ.80ರಷ್ಟು ನೀರಿನ ಸಂಗ್ರಹವಿದೆ. ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಆಶಾದಾಯಕ ಬೆಳವಣಿಗೆಯೆಂದರೆ ತುಂಗಾ ನದಿಯಲ್ಲಿ ನಿನ್ನೆಯಿಂದ ನೀರಿನ ಹರಿಸುವ ಆರಂಭವಾಗಿದೆ. ಇದರಿಂದ ಹರಿಹರ, ಮಾಯಕೊಂಡ, ಹೊನ್ನಾಳಿ ಭಾಗಗಳಲ್ಲಿ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರ ಕಂಡಂತಾಗಿದೆ ಎಂದು ವಿವರಿಸಿದರು.

ಪಾಲಿಕೆ ಆಯುಕ್ತ ಡಾ. ಎನ್.ಮಹಾಂತೇಶ ಮಾತನಾಡಿ, ಮಹಾನಗರದ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ 100 ಕಾಮಗಾರಿ ಪೈಕಿ 98 ಕಾಮಗಾರಿ ಪೂರ್ಣಗೊಂಡಿವೆ. 19 ಆಟೋ ಟಿಪ್ಪರ್ ಖರೀದಿ, ಘನತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಅಗ್ನಿ ಸುರಕ್ಷತಾ ಕಾಮಗಾರಿ ಸೇರಿದಂತೆ 2 ಕಾಮಗಾರಿ ಮಾತ್ರ ಬಾಕಿ ಇವೆ. ಪಾಲಿಕೆ ವ್ಯಾಪ್ತಿಯಲ್ಲಿ ಶೇ.100 ಒ‍ಳಚರಂಡಿ ಸಂಪರ್ಕ ಕಲ್ಪಿಸಿದೆ. ಕೆಲ ಹಳೆ ಭಾಗದಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ದುರಸ್ತಿಗೆ ಕ್ರಮ ಕೈಗೊಂಡಿದೆ ಎಂದು ಸಭೆಯ ಗಮನಕ್ಕೆ ತಂದರು.

ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ, ಬಿ.ಪಿ.ಹರೀಶ, ಸಮರ್ಥ ಎಂ.ಶಾಮನೂರು, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ‍‍ಆಯುಕ್ತೆ ರೇಣುಕಾ, ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ ಸೇರಿದಂತೆ ಪಾಲಿಕೆ, ದೂಡಾ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿದ್ದರು.

- - -

-(ಫೋಟೋ ಇವೆ.):