ಸಾರಾಂಶ
ಬೆಂಗಳೂರು- ಹಾಸನ ನಡುವೆ ಸಂಚರಿಸುತ್ತಿರುವ ಇಂಟರ್ಸಿಟಿ ರೈಲನ್ನು ಸಕಲೇಶಪುರದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರವರಿಗೆ ಮನವಿ ಮಾಡಿದ್ದಾರೆ.
ಸಕಲೇಶಪುರ : ಬೆಂಗಳೂರು- ಹಾಸನ ನಡುವೆ ಸಂಚರಿಸುತ್ತಿರುವ ಇಂಟರ್ಸಿಟಿ ರೈಲನ್ನು ಸಕಲೇಶಪುರದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ವಿ.ಸೋಮಣ್ಣನವರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿರುವ ಶಾಸಕ ಸಿಮೆಂಟ್ ಮಂಜು, ಇಂಟರ್ ಸಿಟಿ ರೈಲು ಬೆಂಗಳೂರು ಹಾಸನ ನಡುವೆ ಸಂಚರಿಸುತ್ತಿದ್ದು, ಈ ರೈಲನ್ನು ಸಕಲೇಶಪುರದವರೆಗೂ ವಿಸ್ತರಿಸಿದರೆ ಸಕಲೇಶಪುರ ಹಾಗೂ ಆಲೂರು ತಾಲೂಕಿನ ಜನ ದಿನನಿತ್ಯದ ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ಹೋಗಿ ಅಂದೇ ಹಿಂತಿರುಗಿ ಬರಲು ಅನುಕೂಲವಾಗುತ್ತದೆ. ಸಕಲೇಶಪುರ ಹಾಗೂ ಆಲೂರು ತಾಲೂಕಿನಿಂದ ದಿನನಿತ್ಯ ನೂರಾರು ಜನ ವಿವಿಧ ಕಾರ್ಯಗಳಿಗಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ. ಕೆಲವರು ಹಾಸನದಿಂದ ರೈಲು ಮುಖಾಂತರ ಬೆಂಗಳೂರಿಗೆ ಹೋದರೆ ಕೆಲವರು ದುಬಾರಿ ಬಸ್ ದರ ತೆತ್ತು ಬೆಂಗಳೂರಿಗೆ ಹೋಗುತ್ತಿದ್ದಾರೆ. ಆಸ್ಪತ್ರೆ, ಸರ್ಕಾರಿ ಕೆಲಸ, ವಿದ್ಯಾಬ್ಯಾಸ ಸೇರಿದಂತೆ ಇನ್ನು ಹಲವು ಅಗತ್ಯಗಳಿಗೆ ಆಗಾಗ ಬೆಂಗಳೂರಿಗೆ ಹೋಗಲೇಬೇಕಾಗುತ್ತದೆ ಹಾಗೂ ಜೀವನೋಪಾಯಕ್ಕಾಗಿ ಈ ಭಾಗದ ಸಾವಿರಾರು ಜನ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ವಿವರಿಸಿದರು.
ಇಂಟರ್ಸಿಟಿ ರೈಲನ್ನು ವಿಸ್ತರಿಸಿದರೆ ಸಕಲೇಶಪುರ ಹಾಗೂ ಆಲೂರು ತಾಲೂಕಿನ ಜನಕ್ಕೆ ಬಹಳ ಅನುಕೂಲವಾಗುತ್ತದೆ ಮತ್ತು ಆಲೂರು ರೈಲು ನಿಲ್ದಾಣದಲ್ಲಿ ಎಲ್ಲಾ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿರುವ ಸಚಿವರು ಕೂಡಲೇ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆಂದು ತಿಳಿದು ಬಂದಿದೆ.