ವಿಮೆ ಹೆಸರಿನಲ್ಲಿ ಹೆಚ್ಚಿಗೆ ಹಣ: ಶೋರೂಂಗೆ 60 ಸಾವಿರ ರು. ದಂಡ

| Published : Jun 15 2024, 01:03 AM IST

ಸಾರಾಂಶ

ಹುಬ್ಬಳ್ಳಿಯ ನಾಗಶಾಂತಿ ಶೋರೂಂ ಹೆಚ್ಚಿಗೆ ಪಡೆದಿದ್ದ ₹9548 ಗಳನ್ನು ವಾರ್ಷಿಕ ಶೇ. 12 ರ ಬಡ್ಡಿಯೊಂದಿಗೆ ಪಾವತಿಸುವುದರೊಂದಿಗೆ ₹60 ಸಾವಿರ ದಂಡ ವಿಧಿಸಲಾಗಿದೆ.

ಕಾರವಾರ: ಗ್ರಾಹಕರೊಬ್ಬರಿಂದ ಕಾರು ಖರೀದಿ ಸಂದರ್ಭದಲ್ಲಿ ವಿಮೆಯ ಹೆಸರಿನಲ್ಲಿ ಹೆಚ್ಚಿಗೆ ಹಣ ಪಡೆದ ಶೋರೂಂಗೆ ₹60 ಸಾವಿರ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಜಿಲ್ಲೆಯ ಕೈಗಾದ ಎನ್‌ಪಿಸಿಐಎಲ್ ಉದ್ಯೋಗಿ ಎ. ರಾಜಶೇಖರನ್, ಹುಬ್ಬಳ್ಳಿಯ ನಾಗಶಾಂತಿ ಎಂಟರಪ್ರೈಸೆಸ್ ಪ್ರೈವೇಟ್ ಲಿಮಿಟೆಡ್, ರೆನಾಲ್ಟ್ ಇಂಡಿಯಾ ಲಿಮಿಟೆಡ್‌ನ ಮಾರಾಟಗಾರರ ಬಳಿ ಕಾರು ಖರೀದಿಸಿದ್ದರು. ಈ ಸಂದರ್ಭದಲ್ಲಿ ವಿಮೆ ಹಾಗೂ ಕಾರಿಗಾಗಿ ಶೋರೂಂನವರು ಹೆಚ್ಚಿಗೆ ಹಣ ಪಡೆದ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ, ಶೋರೂಂನವರು ಕಾರಿನ ಮೊತ್ತದಲ್ಲಿ ಹಾಗೂ ವಿಮೆಯ ಹೆಸರಿನಲ್ಲಿ ಹೆಚ್ಚಿನ ಹಣ ಪಡೆದಿರುವುದನ್ನು ಗಮನಿಸಿ, ಎದುರುದಾರರು ಸೇವಾ ನ್ಯೂನತೆಯೊಂದಿಗೆ ಅನುಚಿತ ವ್ಯಾಪಾರ ನೀತಿಯನ್ನು ಅನುಸರಿಸಿರುವುದರಿಂದ ಹುಬ್ಬಳ್ಳಿಯ ನಾಗಶಾಂತಿ ಶೋರೂಂ ಹೆಚ್ಚಿಗೆ ಪಡೆದಿದ್ದ ₹9548 ಗಳನ್ನು ವಾರ್ಷಿಕ ಶೇ. 12 ರ ಬಡ್ಡಿಯೊಂದಿಗೆ ಪಾವತಿಸುವುದರೊಂದಿಗೆ ₹60 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ದಂಡದ ಮೊತ್ತದಲ್ಲಿ ₹45,000 ದೂರುದಾರರಿಗೆ ಪರಿಹಾರ ನೀಡುವಂತೆ, ಇನ್ನು ಮುಂದೆ ಈ ರೀತಿಯ ತಪ್ಪುಗಳನ್ನು ಎಸಗದಂತೆ ಎಚ್ಚರಿಕೆಗಾಗಿ ₹5000 ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸುವಂತೆ ಹಾಗೂ ₹10000 ಗಳನ್ನು ದೂರುದಾರರಿಗೆ ಪ್ರಕರಣದ ಖರ್ಚು- ವೆಚ್ಚಕ್ಕಾಗಿ ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ಸೂಚಿಸಿದೆ. ದೂರುದಾರರ ಪರ ನ್ಯಾಯವಾದಿ ವಿ.ಎ. ತೋಡುರಕರ ವಾದಿಸಿದ್ದರು.

ದಂಡ ಪಾವತಿಸಲು ವಿಮಾ ಕಂಪನಿಗೆ ಆದೇಶ

ಕಾರವಾರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಅಪಘಾತ ವಿಮೆಯ ₹15 ಲಕ್ಷ ಮೊತ್ತವನ್ನು ವಾರ್ಷಿಕ ಶೇ. 10ರ ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.ಹೊನ್ನಾವರ ನಿವಾಸಿ ನರಸಿಂಹ ಸುಬ್ಬಯ್ಯ ಶೆಟ್ಟಿ ಅವರು ದ್ವಿಚಕ್ರ ವಾಹನದಲ್ಲಿ ಅಪಘಾತದಿಂದ ಗಾಯಗೊಂಡು ಹಲವು ತಿಂಗಳ ಚಿಕಿತ್ಸೆ ಪಡೆದು ಸಾವಿಗೀಡಾಗಿದ್ದು, ವಾಹನದ ವಿಮೆಯ ಪ್ರಕಾರ ವೈಯಕ್ತಿಕ ಅಪಘಾತ ವಿಮೆ ₹15 ಲಕ್ಷಗಳಿದ್ದು, ಈ ಮೊತ್ತ ಪಾವತಿಸಲು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ಅವರು ಮಕ್ಕಳು ವಿನಂತಿಸಿದ್ದರು. ಆದರೆ ವಿಮಾ ಕಂಪನಿ ವಿಮಾ ಮೊತ್ತ ನೀಡದಿದ್ದಾಗ ಮೃತರ ಮಕ್ಕಳಾದ ಧರ್ಮೇಂದ್ರ, ಲೋಕೇಶ್ ಹಾಗೂ ರೇಖಾ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಈ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ, ವಿಮಾ ಕಂಪನಿ ವಿರುದ್ಧ ಆದೇಶಿಸಿ, ವಿಮಾ ಮೊತ್ತ ₹15 ಲಕ್ಷಗಳನ್ನು ವಾರ್ಷಿಕ ಶೇ. 10ರ ಬಡ್ಡಿಯೊಂದಿಗೆ ಪಾವತಿಸಲು ಹಾಗೂ ದೂರುದಾರರಿಗೆ ಪರಿಹಾರವಾಗಿ ₹90,000 ಹಾಗೂ ಖರ್ಚು ವೆಚ್ಚಕ್ಕಾಗಿ ₹10000 ನೀಡುವಂತೆ ಆಯೋಗ ಆದೇಶದಲ್ಲಿ ಸೂಚಿಸಿದೆ. ದೂರುದಾರರ ಪರ ನ್ಯಾಯವಾದಿ ಪಿ.ಎಸ್. ಭಟ್ ವಾದ ಮಂಡಿಸಿದ್ದರು.