ರಾಮನಗರ: ವಿದ್ಯಾರ್ಥಿಗಳ ಶೈಕ್ಷಣಕಿ ಜೀವನದ ಯಶಸ್ಸಿಗೆ ಶಿಕ್ಷಣದಷ್ಟೇ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಮರಿಸ್ವಾಮಿ ಅಭಿಪ್ರಾಯಪಟ್ಟರು
ರಾಮನಗರ: ವಿದ್ಯಾರ್ಥಿಗಳ ಶೈಕ್ಷಣಕಿ ಜೀವನದ ಯಶಸ್ಸಿಗೆ ಶಿಕ್ಷಣದಷ್ಟೇ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಮರಿಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಸೋಮವಾರ 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ, ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಂಸ್ಥಾಪಕರ ದಿನಾಚರಣೆಯನ್ನು ಒಳಗೊಂಡಿರುವ ಎಕ್ಸ್ಪರ್ಟ್ ಪರ್ವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅರ್ಜುನನ ಏಕಾಗ್ರತೆ, ಏಕಲವ್ಯನಂತೆ ನಿರಂತರ ಅಭ್ಯಾಸದಿಂದ ವಿದ್ಯಾರ್ಥಿಗಳು ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ. ಜೊತೆಗೆ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಿರಂತರ ಸಂಪರ್ಕದಲ್ಲಿದ್ದು, ಮಾರ್ಗದರ್ಶನ ಪಡೆಯುವುದರಿಂದ ಯಶಸ್ಸಿನ ಹಾದಿಯನ್ನು ಸಹ ಸುಲಭಗೊಳಿಸಿಕೊಳ್ಳಬಹುದು ಎಂದು ಹೇಳಿದರು.ಕಾಲೇಜು ಪ್ರಾಂಶುಪಾಲ ಡಾ.ಡಿ.ಆರ್.ರವಿಕುಮಾರ್ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಜ್ಞಾನ, ಬೆಳಕು, ಭರವಸೆ, ಸಾಧನೆ ಎಂಬ ಆಶಯಗಳ ಮೇಲೆ ಆರಂಭವಾದ ಕಾಲೇಜಿನಲ್ಲಿ ಹಲವು ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ಹೊರಹೊಮ್ಮಿರುವುದು ನಮಗೆ ಹೆಮ್ಮೆಯ ವಿಷಯ. ಕೇವಲ ಪಠ್ಯಕ್ಕಷ್ಟೇ ಸೀಮಿತರಾಗದೆ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.
ಗ್ರಾಮೀಣ ಪರಿಸರದಲ್ಲಿ ಲಭ್ಯವಿರುವ ಪ್ರಕೃತಿ, ಕೃಷಿ ಮತ್ತು ನಿತ್ಯಜೀವನದ ಉದಾಹರಣೆಗಳನ್ನು ಬಳಸಿ ಕಲಿಯುವುದರಿಂದ ವಿಷಯಗಳು ದೀರ್ಘಕಾಲ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿಯುತ್ತವೆ. ತಂತ್ರಜ್ಞಾನವನ್ನು ಕೇವಲ ಮನರಂಜನೆಗೆ ಬಳಸದೆ, ದೇಶ-ವಿದೇಶಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಘಟನಾವಳಿಗಳ ಮಾಹಿತಿ ಪಡೆಯಲು ಉಪಯೋಗಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಸುಪ್ರೀಂಕೋರ್ಟ್ ವಕೀಲ ಎಚ್.ಬಿ.ಶಿವರಾಜು ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಸೂಕ್ತ ಅವಕಾಶ, ಸರಿಯಾದ ಮಾರ್ಗದರ್ಶನ ಮತ್ತು ಆಧುನಿಕ ಸಂಪನ್ಮೂಲಗಳ ಪರಿಚಯ ದೊರೆತಾಗ ನಗರ ಪ್ರದೇಶದ ಮಕ್ಕಳಂತೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಣ, ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನವನ್ನು ಸಮತೋಲನದಲ್ಲಿಟ್ಟುಕೊಂಡು ಮುನ್ನಡೆಯುವುದು ಅವರ ಉಜ್ವಲ ಭವಿಷ್ಯಕ್ಕೆ ಅಡಿಪಾಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಪ್ರಯತ್ನಶೀಲತೆ ವಿದ್ಯಾರ್ಥಿಯನ್ನು ಉನ್ನತಿಯತ್ತ ಸಾಗಿಸುವ ಸಾಧನ. ಪ್ರಯತ್ನವೂ ಒಂದರ ವಿಫಲತೆಯನ್ನು ಬದಿಗಿರಿಸಿ, ಮತ್ತೊಂದು ಯಶಸ್ಸನ್ನು ತಂದು ಕೊಡುತ್ತದೆ. ಉತ್ತಮ ಕೇಳುಗರಾಗಿ, ಉಪಾಧ್ಯಾಯರ ಮಾತುಗಳನ್ನು ಕೇಳಿ, ಮನನ ಮಾಡಿ,ವಿಚಾರಗಳನ್ನು ಮತ್ತೊಬ್ಬರಿಗೆ ಮುಟ್ಟಿಸುವ ಉತ್ತಮ ಸಂವಹನ ಕೌಶಲ್ಯ ಬೆಳೆಸಿಕೊಳ್ಳಿ. ಬರವಣಿಯನ್ನು ಗಂಭೀರವಾಗಿ ಪರಿಗಣಿಸಿ. ಉತ್ತಮ ಬರೆವಣಿಗೆಯ ಶೈಲಿಯನ್ನು ಕಲಿತು ಕೊಂಡಾಗ ಫಲಿತಾಂಶ ಹೆಚ್ಚಾಗಲು ಅನುಕೂಲವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಳೆದ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರಿಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಾಣಿಜ್ಯ ವಿಭಾಗದಿಂದ ಎಚ್.ಸಿ.ಲಾವಣ್ಯ , ಎಲ್.ಸಿಂಚನಾ, ಬಿ.ಎಸ್. ಸಂಜನಾ, ವೈಶಾಖ್ ಸಿ.ಗೌಡ, ಸಿ.ಯಶಸ್ವಿನಿ, ವಿಜ್ಞಾನ ವಿಭಾಗದಿಂದ ಎ.ನೇತ್ರಾವತಿ, ಆರ್. ಹರ್ಷಿತ್ ಗೌಡ, ಕೆ.ಸಿಂಚನಾ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ಲೋಕ ಶಿಕ್ಷಣ ವಿಭಾಗದ ವಯಸ್ಕರ ಶಿಕ್ಷಣಾಧಿಕಾರಿ ಭೀಮಾ ನಾಯಕ್, ಶೈಕ್ಷಣಿಕ ಮುಖ್ಯಸ್ಥ ಡಿ.ನಾಗರಾಜು, ಪ್ರಾಂಶುಪಾಲರಾದ ಡಾ.ಶಿಲ್ಪ ಬಿ, ಉಪ ಪ್ರಾಂಶುಪಾಲ ಆರ್.ಚಂದ್ರಶೇಖರ್, ಸಲಹೆಗಾರ ವಿನೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಕಾಲೇಜು ವಿದ್ಯಾರ್ಥಿಗಳು ಸಾಮಾಜಿಕ ಸಂದೇಶ ನೀಡುವ ಕಿರು ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
24ಕೆಆರ್ ಎಂಎನ್ 2.ಜೆಪಿಜಿರಾಮನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ, ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಂಸ್ಥಾಪಕರ ದಿನಾಚರಣೆಯ ಎಕ್ಸ್ ಪರ್ಟ್ ಪರ್ವ ಸಮಾರಂಭದಲ್ಲಿ ಅತಿಥಿಗಳು ಪಾಲ್ಗೊಂಡಿರುವುದು.