ಸಾರಾಂಶ
ಬೆಂಗಳೂರು : ಸಮಾಜದ ಸಕಾರಾತ್ಮಕ ಪರಿಣಾಮ ಬೀರುವ ನೇತ್ರದಾನದಂತಹ ಮೌನಕ್ರಾಂತಿ ಸದಾ ನಡೆಯಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.
ಅವರು ನಾರಾಯಣ ನೇತ್ರಾಲಯದಲ್ಲಿ 39ನೇ ರಾಷ್ಟ್ರೀಯ ನೇತ್ರದಾನದ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೇತ್ರದಾನ ಮನುಕುಲದ ಶ್ರೇಷ್ಠ ವಿಚಾರ. ಅನೇಕರು ಅನಾಮಿಕರಾಗಿ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅವರು ಸಮಾಜದ ನಿಜವಾದ ಹೀರೋಗಳು. ಸಾವಿನ ನಂತರವೂ, ಅವರು ಅಗತ್ಯವಿರುವವರಿಗೆ ದೃಷ್ಟಿಯ ಉಡುಗೊರೆ ನೀಡುತ್ತಾರೆ. ಈ ಮೌನ ಕ್ರಾಂತಿ ಮುಂದುವರಿಯಲಿ, ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಇನ್ನಷ್ಟು ಜನರು ಮುಂದೆ ಬರಲಿ ಎಂದು ಹೇಳಿದರು.
ಚಲನಚಿತ್ರ ನಿರ್ಮಾಪಕ ಎಸ್.ಎ.ಚಿನ್ನೇಗೌಡ. ನಾರಾಯಣ ನೇತ್ರಾಲಯದ ಅಧ್ಯಕ್ಷರಾದ ಡಾ। ರೋಹಿತ್ ಶೆಟ್ಟಿ ಮಾತನಾಡಿದರು. ನಟ, ನಿರ್ಮಾಪಕ ಯೋಗೀಶ್ ದ್ವಾರಕೀಶ್, ನೇತ್ರವಿಜ್ಞಾನ ವಿಭಾಗದ ಜಂಟಿ ನಿರ್ದೇಶಕ ಡಾ। ಜಿ.ಶ್ಯಾಮಸುಂದರ್ ಇದ್ದರು.
ಪ್ರಶಸ್ತಿ ಪ್ರದಾನ
ಡಾ। ಕೆ.ಭುಜಂಗ ಶೆಟ್ಟಿ ಪ್ರಶಸ್ತಿಯನ್ನು ಎಂ.ಬಿ.ಗುರುದೇವ್ ಮತ್ತು ಡಾ। ಹರೀಶ್, ದೊಡ್ಡಬಳ್ಳಾಪುರ ಡಾ। ರಾಜ್ಕುಮಾರ್ ನೇತ್ರ ಸಂಗ್ರಹ ಕೇಂದ್ರಕ್ಕೆ ಅತ್ಯುತ್ತಮ ನೇತ್ರ ಸಂಗ್ರಹ ಕೇಂದ್ರಕ್ಕಾಗಿ ನೀಡಲಾಯಿತು. ಡಾ। ರಾಜ್ಕುಮಾರ್ ಕೌಟುಂಬಿಕ ಪ್ರಶಸ್ತಿಯನ್ನು ಅತ್ಯುತ್ತಮ ನೇತ್ರದಾನ ಪ್ರೇರಕ ತೇರಾಪಂತ್ ಯುವಕ ಪರಿಷತ್ಗೆ ನೀಡಲಾಯಿತು. ನೇತ್ರದಾನ ಜಾಗೃತಿಗಾಗಿ ಅತ್ಯುತ್ತಮ ಸಮಾಜ ಸೇವಕ ಹರೀಶ್ ನಂಜಪ್ಪ ಪ್ರಶಸ್ತಿಯನ್ನು ಜ್ಞಾನ ಬೆಳಕಿನೆಡೆಗೆ ವೇದಿಕೆ, ಸಾರಕ್ಕಿ ಅವರಿಗೆ ನೀಡಲಾಯಿತು.