ವಿಷ ಕಂಟಕ ಕಾರ್ಖಾನೆಗಳಿಗೆ ‘ಬೀಗ’ ಬೀಳಲಿ ಬೇಗ

| Published : Aug 24 2024, 01:18 AM IST

ವಿಷ ಕಂಟಕ ಕಾರ್ಖಾನೆಗಳಿಗೆ ‘ಬೀಗ’ ಬೀಳಲಿ ಬೇಗ
Share this Article
  • FB
  • TW
  • Linkdin
  • Email

ಸಾರಾಂಶ

ಹುಮನಾಬಾದ್‌ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶಕ್ಕೆ ಕಿಮ್ಮತ್ತೇ ಇಲ್ಲ. ಆದೇಶವಾಗಿ ತಿಂಗಳಾದರೂ ಕಾರ್ಖಾನೆ ಸ್ಥಗಿತವಾಗಿಲ್ಲ. ಅಧಿಕಾರಿಗಳ ದಿವ್ಯ ನಿರ್ಲಕ್ಷ, ಮೌನಿಯಾದ್ರಾ ನಮ್ಮ ಜನಪ್ರತಿನಿಧಿಗಳು?

ವೆಂಕಟೇಶ ಜಾಧವ್

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಪರಿಸರಕ್ಕೆ ಭಾರಿ ಹಾನಿಯಾಗ್ತಿದೆ, ಜನರ ಜೀವದ ಜೊತೆ ಚೆಲ್ಲಾಟವಾಡ್ತಿವೆ ಎಂದೆಲ್ಲ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆಯವರ ಮುತುವರ್ಜಿಯಿಂದ ಇಲ್ಲಿನ ಟೈರ್‌ ಪೈರೋಲಿಸಿಸ್‌, ನಾಲ್ಕು ಔಷಧಿ ಕಚ್ಚಾ ಸಾಮಗ್ರಿ ಉತ್ಪನ್ನ ಕಾರ್ಖಾನೆಗಳಿಗೆ ತಿಂಗಳ ಹಿಂದೆಯೇ ಬೀಗ ಜಡಿಯುವ ಆದೇಶವಾಗಿದ್ದರೂ ಜಾರಿ ಮಾತ್ರ ಆಗಿಲ್ಲ. ಕಾರ್ಖಾನೆಗಳು ಕದ್ದು ಮುಚ್ಚಿ ಮತ್ತೆ ಮಾಲಿನ್ಯ ಪಸರಿಸುವ ಕಾರ್ಯ ಮಾಡ್ತಿವೆ. ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆ. ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹುಮನಾಬಾದ್‌ ಕೈಗಾರಿಕಾ ಪ್ರದೇಶದಲ್ಲಿರುವ 5 ಟೈರ್ ಪೈರೋಲಿಸಿಸ್‌, 4 ಔಷಧಿ ಕಾರ್ಖಾನೆಗಳನ್ನು ಮುಚ್ಚುವ ಆದೇಶ ಹೊರಡಿಸಿ ಜು.23ರಿಂದ ಇಲ್ಲಿಯವರೆಗೆ ಒಂದು ತಿಂಗಳು ಗತಿಸಿದರೂ ಕಾರ್ಖಾನೆಗಳು ರಾಜಾರೋಷವಾಗಿ ಪರಿಸರ ಹಾನಿ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಜಪ್ತಿ ಮಾಡುವ ಕಾರ್ಯಕ್ಕೆ ಯಾವೊಬ್ಬ ಅಧಿಕಾರಿಯೂ ಮುಂದಾಗಿಲ್ಲ.

ಕೆಜಿಎನ್, ಎಂಕೆ ಪೈನರ್‌ ಸೇರಿದಂತೆ ಟೈರ್‌ ಪೈರೋಲಿಸಿಸ್‌ ಕಾರ್ಖಾನೆಗಳು ರಾತ್ರಿ ಸಮಯದಲ್ಲಿ ವಾಮ ಮಾರ್ಗದಿಂದ ವಿದ್ಯುತ್‌ ಪಡೆಯುವ ಮೂಲಕ ತಮ್ಮ ದೈನಂದಿನ ಕಾರ್ಯ ಸತತ ನಡೆಸುತ್ತಿವೆ. ಇದಕ್ಕೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕುಮ್ಮಕ್ಕೂ ಇದೆ ಎಂಬ ವದಂತಿ ಜೋರಾಗಿದೆ.

ಟೈರ್‌ ಪೈರೋಲಿಸಿಸ್‌ ಕಾರ್ಖಾನೆಯ ಮಾಲೀಕರು ಪಕ್ಕದ ಕಾರ್ಖಾನೆ ಹಾಗೂ ವಿದ್ಯುತ್‌ ಕಂಬದಿಂದ ನೇರವಾಗಿ ವಿದ್ಯುತ್‌ ಪಡೆಯುವ ಮೂಲಕ ರಾತ್ರಿ ಸಂದರ್ಭದಲ್ಲಿ ಕಾರ್ಖಾನೆ ನಡೆಸಲಾಗುತ್ತಿರುವುದನ್ನೂ ಹೆಸರು ಹೇಳಲಿಚ್ಛಿಸದ ಪ್ರತ್ಯಕ್ಷದರ್ಶಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಮುಚ್ಚುವ ಆದೇಶವಾಗಿದ್ದರೂ ರ್ಖಾನೆಗಳ ಮಾಲೀಕರು ಕ್ಯಾರೆ ಎನ್ನದಿರುವುದು ಜಿಲ್ಲೆಯ ಜನಪ್ರತಿನಿಧಿಗಳನ್ನು ಅಣಕಿಸುವಂತಿದೆ. ತಕ್ಷಣವೇ ಕಾರ್ಖಾನೆಗಳನ್ನು ಜಪ್ತಿ ಮಾಡಿಸುವ ಕೆಲಸವಾಗಲಿ. ಪರಿಸರ ಉಳಿಸಲಿ, ಜನ, ಜಾನುವಾರುಗಳ ಜೀವಕ್ಕೆ ಬೆಲೆ ಸಿಗಲಿ ಎಂಬುದು ಪರಿಸರಾಸಕ್ತರ ಆತ್ತಾಸೆಯಾಗಿದೆ. ರಿಯಾಕ್ಟರ್‌ ಖಾಲಿ ಆದ ಮೇಲೆ ಕಾರ್ಖಾನೆಗೆ ಬೀಗ ಹಾಕಲಾಗುತ್ತದೆ. ಈ ಕುರಿತು ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್‌ಗೆ ಬೀಗ ಹಾಕುವ ಜವಾಬ್ದಾರಿ ಇದೆ. ಜೆಸ್ಕಾಂ ಅಧಿಕಾರಿಗೆ ಕಾರ್ಖಾನೆಯ ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸುವಂತೆ ಆದೇಶ ನೀಡಲಾಗಿತ್ತು. ಆದರೆ ರಾತ್ರಿ ವೇಳೆ ವಾಮ ಮಾರ್ಗದಿಂದ ವಿದ್ಯುತ್‌ ಪಡೆದು ಕೆಲಸ ನಡೆಸುತ್ತಿದ್ದಾರೆ ಎಂದರೆ ಈ ಕುರಿತು ಅವರೇ ಜವಾಬ್ದಾರರು.

- ಭಾಸ್ಕರ್‌, ಹುಮನಾಬಾದ್‌ ಪರಿಸರ ಮಾಲಿನ್ಯ ನಿಯಂತ್ರಣ ವಿಶೇಷ ನಿಯೋಜಿತ ಅಧಿಕಾರಿಹುಮನಾಬಾದ್‌ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದಾಗುವ ಪರಿಸರ ಮಾಲಿನ್ಯ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಕುರಿತು ಮಾಹಿತಿ ಪಡೆದುಕೊಂಡು ಶೀಘ್ರದಲ್ಲಿಯೇ ಸೂಕ್ತ ಕ್ರಮ ಜರುಗಿಸುತ್ತೇನೆ.

- ಲವೀಶ ಓರ್ಡಿಯಾ, ಸಹಾಯಕ ಆಯುಕ್ತರು, ಬೀದರ್‌ಬೀದರ್‌ ಸಹಾಯಕ ಆಯುಕ್ತ ಲವೀಷ ಓರ್ಡಿಯಾ ಅವರಿಗೆ ಕಾರ್ಖಾನೆಗಳಿಗೆ ಬೀಗ ಜಡಿಯುವ ಜವಾಬ್ದಾರಿಯನ್ನು ಸರ್ಕಾರ ನೀಡಿದ್ದು, ತಂಡ ರಚಿಸಿ ಬೀಗ ಹಾಕಬೇಕು. ಈ ಬಗ್ಗೆ ಅವರ ಗಮನಕ್ಕೆ ತರಲಾಗಿದೆ.

- ಅಂಜುಮ್‌ ತಬಸುಮ್‌, ತಹಸೀಲ್ದಾರ್‌, ಹುಮನಾಬಾದ್‌