ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿರುವ ೫ ಸಕ್ಕರೆ ಕಾರ್ಖಾನೆಗಳು ತಮಗೆ ನಿಗದಿಪಡಿಸಿರುವ ವ್ಯಾಪ್ತಿಯಲ್ಲಿ ಮಾತ್ರ ರೈತರಿಂದ ಕಬ್ಬನ್ನು ಖರೀದಿಸಬೇಕು. ಅನಧಿಕೃತವಾಗಿ ಬೇರೆ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರಿಂದ ಕಬ್ಬು ಖರೀದಿಸಿದರೆ ಅಂತಹ ಸಕ್ಕರೆ ಕಾರ್ಖಾನೆಯ ಪರವಾನಗಿ ರದ್ದುಪಡಿಸವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಗಳ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಬರದ ಹಿನ್ನೆಲೆಯಲ್ಲಿ ಕಬ್ಬಿನ ಇಳುವರಿ ಕುಂಠಿತಗೊಂಡಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಗೆ ಸ್ಪರ್ಧೆ ಎದುರಾಗುವ ಸಾಧ್ಯತೆಯಿದ್ದು, ಸಕ್ಕರೆ ಕಾರ್ಖಾನೆಗಳು ಲಾಭ-ನಷ್ಟ ಯಾವುದೇ ಉಂಟಾದರೂ ತಮ್ಮ ವ್ಯಾಪ್ತಿಗೆ ನಿಗದಿಪಡಿಸಿದ ಕಬ್ಬನ್ನು ಮಾತ್ರ ಅರೆಯಬೇಕು ಎಂದರು.
ಏಕಕಾಲದಲ್ಲಿ ಆರಂಭಿಸಲು ಸೂಚನೆ:ಏಕ ಕಾಲದಲ್ಲಿ ಕಬ್ಬು ಅರೆಯುವಿಕೆಗೆ ಪ್ರಸ್ತಾವನೆ ೨೦೨೪-೨೫ ನೇ ಸಾಲಿನ ಹಂಗಾಮಿನ ಕಬ್ಬು ಅರೆಯುವಿಕೆಗೆ ಸಂಬಂಧಿಸಿದಂತೆ ಯಾವುದಾದರು ಒಂದು ಸಕ್ಕರೆ ಕಾರ್ಖಾನೆ ಬೇರೆ ಸಕ್ಕರೆ ಕಾರ್ಖಾನೆಗಿಂತ ಮೊದಲು ಅರೆಯುವಿಕೆ ಪ್ರಾರಂಭಿಸಿದರೆ ಎಲ್ಲಾ ರೈತರು ತಮ್ಮ ಕಬ್ಬು ಖರೀದಿಸುವಂತೆ ಸಕ್ಕರೆ ಕಾರ್ಖಾನೆಗೆ ಮುಗಿಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ೫ ಸಕ್ಕರೆ ಕಾರ್ಖಾನೆಗಳು ಏಕಕಾಲದಲ್ಲಿ ಕಬ್ಬು ಅರೆಯಲು ಜುಲೈ ೧೫ ರಿಂದ ೩೦ ರವರೆಗೆ ಯಾವುದಾದರು ಒಂದು ದಿನಾಂಕವನ್ನು ನಿಗಧಿಪಡಿಸಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಅಭಿವೃದ್ಧಿ ಕಾರ್ಯಕ್ರಮಗಳ ವರದಿ ಸಲ್ಲಿಸಿ:ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬು ಬೆಳೆಯುವ ಪ್ರಕ್ರಿಯೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ನಡೆಸಬೇಕು. ರೈತರ ಕುಂದು ಕೊರತೆ ಸಭೆಯಲ್ಲಿ ರೈತರು ಕಬ್ಬು ಬಿತ್ತನೆಗೆ ಸಕ್ಕರೆ ಕಾರ್ಖಾನೆಗಳು ಬಿತ್ತನೆ ಕಬ್ಬು ಒದಗಿಸುವಂತೆ ಚರ್ಚಿಸಿದ್ದಾರೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ನಡೆಸುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ವರದಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಂಟಿ ಕೃಷಿ ನಿರ್ದೇಶಕ ಅಶೋಕ್, ಆಹಾರ ಇಲಾಖೆಯ ಜಂಟಿ ನಿರ್ದೇಶ ಎಂ.ಪಿ.ಕೃಷ್ಣಕುಮಾರ್ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.