ವಾಣಿಜ್ಯ ಬೆಳೆಗಳ ಬೆಲೆ ಕುಸಿತ: ಬೆಳೆಗಾರರು ಕಂಗಾಲು

| Published : Mar 02 2024, 01:54 AM IST / Updated: Mar 02 2024, 12:04 PM IST

How To Grow Cardamom Plant

ಸಾರಾಂಶ

ಸಕಲೇಶಪುರ ತಾಲೂಕಿನಲ್ಲಿ ಕಾಫಿ, ಮೆಣಸು ಹಾಗೂ ಏಲಕ್ಕಿ ದರ ಕುಸಿದಿರುವುದರಿಂದ ರೈತರಲ್ಲಿ ಆತಂಕ ಉಂಟಾಗಿರುವುದು. ಮತ್ತು ಬೆಳೆಗಾರರಿಗೆ ಲಕ್ಷಾಂತರ ರು. ನಷ್ಟವಾಗಿರುವುದು.

ಕನ್ನಡಪ್ರಭವಾರ್ತೆ ಸಕಲೇಶಪುರ

ತಾಲೂಕಿನ ವಾಣಿಜ್ಯ ಬೆಳೆಗಳ ಬೆಲೆ ಕುಸಿತ ಬೆಳೆಗಾರರ ಮುಖದಲ್ಲಿನ ಮಂದಹಾಸ ಕುಂದುವಂತೆ ಮಾಡಿದೆ. ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ರೋಬಸ್ಟ್ ಕಾಫಿ ಧಾರಣೆ ಕಳೆದ ವರ್ಷದ ಮಾರುಕಟ್ಟೆ ಆರಂಭದಲ್ಲಿ ೫೦ ಕೆ.ಜಿಗೆ ೪೨೦೦ ರೂಗಳಿಂದ ಆರಂಭವಾಗಿ ಕೇವಲ ೩ ತಿಂಗಳಿನಲ್ಲಿ ೬೮೦೦ ಕ್ಕೆ ಏರಿಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರೆ, ಈ ಬಾರಿ ಮಾರುಕಟ್ಟೆ ಆರಂಭವಾದ ಡಿಸೆಂಬರ್ ತಿಂಗಳಿನಲ್ಲಿ ರೋಬಸ್ಟ್ ಚರಿ ಕಾಫಿ ಧಾರಣೆ ೬೮೦೦ ರೂಗಳಿಂದ ಆರಂಭವಾಗಿ ಕೇವಲ ಒಂದು ತಿಂಗಳಿನಲ್ಲಿ ೭೮೦೦ ರೂಗಳನ್ನು ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. 

ಆದರೆ, ಈ ಬಾರಿ ಕಾಫಿಕೊಯ್ಲು ನಡೆಸುವ ವೇಳೆ ಅಕಾಲಿಕ ಮಳೆ ಹಾಗೂ ಮೋಡ ಮುಸುಕಿದ ವಾತವಾರಣದಿಂದಾಗಿ ಜನವರಿ ತಿಂಗಳೊಂದರಲ್ಲೆ ಹೆಚ್ಚಾಗಿ ಕಾಫಿ ಕೂಯ್ಲು ನಡೆಸಲಾಗಿದ್ದು, ಏಕಕಾಲಕಕ್ಕೆ ಮಾರುಕಟ್ಟೆಗೆ ಬಂದ ಕಾಫಿ ೭೪೦೦ ರೂಗಳಿಂದ ೭೮೦೦ ರೂಗಳವರಗೆ ಬಿಕರಿಯಾಗಿತ್ತು.

ಆದರೆ, ಕಾಫಿ ಧಾರಣೆ ೮೦೦೦ ಸಾವಿರ ಗಡಿದಾಟಿ ಮುನ್ನಡೆಯಲಿದೆ ಎಂಬ ಮಾರುಕಟ್ಟೆ ತಜ್ಞರ ಅಭಿಪ್ರಾಯದಿಂದ ಸಾಕಷ್ಟು ಕಾಫಿ ಬೆಳೆಗಾರರು ಬೆಳೆದ ಕಾಫಿಯನ್ನು ಸಂಗ್ರಹಿಸಿಟ್ಟಿದ್ದಾರೆ. 

ಆದರೆ, ಪ್ರಸಕ್ತ ದಿನಗಳ ಮಾರುಕಟ್ಟೆಯಲ್ಲಿ ಓಟಿ ಧರದಲ್ಲೂ ಕುಸಿತಕಂಡಿದೆ. ಕಳೆದ ಒಂದುವಾರದ ವರಗೆ ಪ್ರತಿ ಓಟಿ ಧರ ೨೮೦ ರೂಗಳ ಅಸುಪಾಸಿನಲ್ಲಿದ್ದರೆ, ಪ್ರಸಕ್ತ ಓಟಿ ಧರ ೨೭೦ ರೂಗಳಿಗೆ ಕುಸಿದಿದೆ. ಇದರಿಂದಾಗಿ ಹೆಚ್ಚಿನ ಧರದ ನಿರೀಕ್ಷೆಯಲ್ಲಿ ಕಾಫಿ ಸಂಗ್ರಹಿಸಿಟ್ಟಿದ್ದ ಬೆಳೆಗಾರರ ನಿರಾಸೆಗೆ ಕಾರಣವಾಗಿದೆ.

ಓಟಿ ಇಲ್ಲ: ತಾಲೂಕಿನಲ್ಲಿ ಏಪ್ರೀಲ್ ತಿಂಗಳ ನೆನಪಿಸುವಂತ ಉಷ್ಣಾಂಶ ದಾಖಲಾಗುತ್ತಿದ್ದು, ೩೪ ರಿಂದ ೩೮ ಡಿಗ್ರಿ ಉಷ್ಣಾಂಶದಿಂದಾಗಿ ಕಾಫಿ ಅತಿಬೇಗ ಒಣಗುತ್ತಿದೆ ಫೆಬ್ರವರಿ ತಿಂಗಳಿನಲ್ಲಿ ಹಣ್ಣುಕೂಯ್ಲು ನಡೆಸಿದ ಬಹುತೇಕ ಬೆಳೆಗಾರರ ಕಾಫಿಗೆ ಓಟಿ ಸಮಸ್ಯೆ ಕಾಡುತ್ತಿದೆ. 

ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲಿ ಕಾಫಿ ಕೂಯ್ಲು ನಡೆಸಿದ ತೋಟಗಳಲ್ಲಿ ೫೦ ಕೆ.ಜಿ ಕಾಫಿ ೨೬ ರಿಂದ ೨೮ ಓಟಿ (ಒವರ್ ಟನ್) ಬಂದರೆ, ಫೆಬ್ರವರಿ ತಿಂಗಳಿನಲ್ಲಿ ಕೂಯ್ಲು ನಡೆಸಿದ ಬೆಳೆಗಾರರ ಕಾಫಿ ೨೨ ರಿಂದ ೨೫ ಓಟಿ ದಾಖಲಾಗುತ್ತಿದೆ. 

ಇದರಿಂದಾಗಿ ಜನವರಿ ತಿಂಗಳಿನಲ್ಲಿ ಕಾಫಿ ಹಣ್ಣು ಕೊಯ್ಲು ನಡೆಸಿದ ಬೆಳೆಗಾರರಿಗೆ ೭೪೦೦ ರು. ಗಳಿಂದ ೭೮೦೦ ರೂಗಳವರಗೆ ಧರ ದೊರೆತರೆ ಫೆಬ್ರವರಿ ತಿಂಗಳಿನಲ್ಲಿ ಕಾಫಿ ಕೂಯ್ಲು ನಡೆಸಿದ ಬೆಳೆಗಾರರಿಗೆ ೬೮೦೦ ರೂಗಳಿಂದ ೭೧೦೦ ರು. ಗಳವರಗೆ ಧಾರಣೆ ದೊರೆಯುತ್ತಿದೆ.

ಕಾಳುಮೆಣಸು ಧಾರಣೆ ಕುಸಿತ: ಕಳೆದ 6 ತಿಂಗಳಿನಿಂದ ಪ್ರತಿ ಕೆ.ಜಿ ಮೆಣಸಿನ ಧಾರಣೆ ಆರು ನೂರು ರು.ಗಳ ಗಡಿಯಲ್ಲಿದ್ದರೆ ಕಾಳು ಮೆಣಸು ಕೂಯಿಲು ಆರಂಭದ ವೇಳೆ ಪ್ರತಿಕೆಜಿ ಮೆಣಸಿನ ಬೆಲೆ ಬರೋಬ್ಬರಿ ನೂರು ರು. ಗಳ ಕುಸಿತ ಕಂಡಿದ್ದು ೪೮೦ ರಿಂದ ೫೦೦ ರೂಗಳ ಧರದಲ್ಲಿ ಮಾರಾಟವಾಗುತ್ತಿದೆ. ಇದು ಮೆಣಸು ಬೆಳೆಗಾರರ ಸಂತಸವನ್ನೆ ಕಸಿದಿದೆ. 

ತೂಕ ಇಲ್ಲ: ಸಾಮಾನ್ಯವಾಗಿ ೨.೫ ರಿಂದ ೩ ಕೆ.ಜಿ ಹಸಿಕಾಳು ಮೆಣಸು ಕೊಯ್ಲು ನಡೆಸಿದರೆ ಒಂದು ಕೆ.ಜಿ ಒಣ ಕಾಳಮೆಣಸು ದೊರಕುತ್ತದೆ ಎಂಬ ವಾಡಿಕೆ ಜಾರಿಯಲ್ಲಿತ್ತು. ಆದರೆ, ಈ ಬಾರಿ ಅತ್ಯಧಿಕ ಉಷ್ಣಾಂಶದ ಕಾರಣ ಕಾಳು ಮೆಣಸಿನಲ್ಲಿ ನೀರಿನಾಂಶ ಅವಿಯಾಗಿರುವ ಕಾರಣ ಒಂದು ಕೆ.ಜಿ ಒಣ ಕಾಳುಮೆಣಸು ಪಡೆಯಲು ೩ ರಿಂದ ೩.೫ ಕೆ.ಜಿ ಹಸಿಕಾಳುಮೆಣಸಿನ ಅಗತ್ಯವಿದೆ ಎನ್ನಲಾಗುತ್ತಿದೆ. 

ಅಲ್ಲದೆ ಸಾಕಷ್ಟು ತೋಟಗಳಲ್ಲಿ ಮೆಣಸು ಸಾಮಾನ್ಯ ಗಾತ್ರ ಮೂಡದೆ ಇರುವುದು ಕಾಳುಕಟ್ಟದೆ ಇರುವ ಪ್ರಕರಣಗಳು ಸಾಕಷ್ಟಿದೆ. ಇದರಿಂದಾಗಿ ಬೆಳೆಗಾರರು ಹಾಗೂ ಕಾಫಿ ತೋಟವನ್ನು ಪಸಲಿಗೆ ಪಡೆದಿರುವ ವ್ಯಾಪಾರಗಾರರು ತೂಕ ಹಾಗೂ ಧಾರಣೆ ಕುಸಿತದಿಂದ ಕಂಗಾಲಾಗಿದ್ದಾರೆ.

 ಏಲಕ್ಕಿ ಧರವು ಕುಸಿತ: ಕಳೆದ ಎರಡು ವಾರದವರಗೂ ಹೆರಕಿದ ಏಲಕ್ಕಿ ಧರ ಪ್ರತಿ ಕೆ.ಜಿ ಏಲಕ್ಕಿಗೆ ೨೦೦೦ ಸಾವಿರದಿಂದ ೨೨೦೦ರೂಗಳಿಗೆ ಮಾರಾಟವಾಗುತ್ತಿದ್ದರೆ, ಜರಡಿ ಮಾಡಿದ ಏಲಕ್ಕಿ ಧಾರಣೆ ೧೭೦೦ ರೂಗಳಿಂದ ೧೯೦೦ ರೂಗಳ ಧರದಲ್ಲಿ ಮಾರಾಟವಾಗುತಿತ್ತು. 

ಇನ್ನೂ ರಾಶಿ ಏಲಕ್ಕಿ ೧೪೫೦ ಅಸುಪಾಸಿನಲ್ಲಿ ಮಾರಾಟವಾಗುತ್ತಿದ್ದರೆ, ಪ್ರಸಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಏಲಕ್ಕಿ ಧಾರಣೆ ಇನ್ನೂರುರೂಗಳ ಕುಸಿತಗೊಂಡಿದ್ದು ಸದ್ಯ ಹೆರಕಿದ ಏಲಕ್ಕಿ೧೮೦೦ ರೂಗಳಿಂದ ೨೦೦೦ ಸಾವಿರದರವರಗೆ ಮಾರಾಟವಾಗುತ್ತಿದ್ದರೆ, ಜರಡಿಮಾಡಿದ ಏಲಕ್ಕಿ ಧಾರಣೆ ಸದ್ಯ ೧೫೦೦ ರೂಗಳಿಂದ ೧೬೦೦ ರೂಗಳಲ್ಲಿ ಮಾರಾಟವಾಗುತ್ತಿದೆ.

ಐಟಿ-ಬಿಟಿ ಸಂಪಾದನೆ: ತಾಲೂಕಿನಲ್ಲಿ ಸ್ಥಳೀಯ ಕೂಲಿ ಕಾರ್ಮಿಕರ ಕೊರತೆಯನ್ನು ಉತ್ತರ ಭಾರತದಿಂದ ಬಂದಿರುವ ಕಾರ್ಮಿಕರು ತುಂಬುತ್ತಿದ್ದು, ಪ್ರತಿ ಕುಟುಂಬ ಕನಿಷ್ಠ ೪೦೦ ರಿಂದ ೬೦೦ ಕೆ.ಜಿ ವರಗೆ ಕಾಫಿ ಹಣ್ಣು ಕೊಯ್ಲು ನಡೆಸುತ್ತಿದೆ. 

ಇದರಿಂದಾಗಿ ಪ್ರತಿ ದಿನ ೨.೫೦೦ ರೂಗಳಿಂದ ಮೂರು ಸಾವಿರದವರಗೂ ಕೂಲಿ ಸಂಪಾದಿಸುತ್ತಿದ್ದು ಕಳೆದೊಂದು ತಿಂಗಳಿನಲ್ಲಿ ಕಾರ್ಮಿಕ ಕುಟುಂಬವೊಂದು ೧ ಲಕ್ಷ ರು.ವರಗೆ ಸಂಪಾದನೆ ಮಾಡಿದೆ. 

ಇನ್ನೂ ಕಾಫಿ ಮಾರುಕಟ್ಟೆಯಲ್ಲಿ ಹಮಾಲಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಉತ್ತರ ಕರ್ನಾಟಕದಿಂದಲೂ ಹೆಚ್ಚಿನ ಹಮಾಲಿಗಳು ಆಗಮಿಸಿದ್ದು ಪ್ರತಿಮೂಟೆ ಕಾಫಿ ಲೋಡ್ ೧೦ ಅನ್‌ಲೋಡ್‌ಗೂ ೧೦ ರು. ಪಡೆಯುತ್ತಿದ್ದಾರೆ. 

ಪ್ರತಿ ಹಮಾಲಿ ಪ್ರತಿದಿನ ಕನಿಷ್ಠ ೩೦೦ ರಿಂದ ೪೦೦ ಚೀಲದವರಗೆ ಲೋಡ್‌ಮಾಡುವ ಮೂಲಕ ೨ ರಿಂದ ನಾಲ್ಕು ಸಾವಿರದವರಗೂ ಸಂಪಾದನೆ ಮಾಡುತ್ತಿದ್ದಾರೆ. 

ಮೆಣಸು ಮಾರುಕಟ್ಟೆಗೆ ಬರುವ ಹೊತ್ತಿನಲ್ಲಿ ಧಾರಣೆ ಕುಸಿತಕಂಡಿರುವುದು ಬೇಸರದ ಸಂಗತಿ ಇದರಿಂದಾಗಿ ಲಕ್ಷಾಂತರ ರು. ನಷ್ಟವಾಗುತ್ತಿದೆ.

ಧಾರೇಶ್ ಕಾಳುಮೆಣಸು ಬೆಳೆಗಾರ