ಕನ್ನಡಪ್ರಭ ವಾರ್ತೆ ಬೇಲೂರುಕಳೆನಾಶಕ ಪೂರೈಕೆಗೆ ಸಂಬಂಧಿಸಿದಂತೆ ತಮ್ಮ ಅಂಗಡಿಯ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ದಾಸೇಗೌಡ ಪ್ಲಾಂಟೇಶನ್ ಮಾಲೀಕ ರಘು ಸ್ಪಷ್ಟನೆ ನೀಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ನೂರಾರು ರೈತರಿಗೆ ಹಲವು ವರ್ಷಗಳಿಂದ ಗುಣಮಟ್ಟದ ಕೃಷಿ ಔಷಧಿಗಳು ಹಾಗೂ ಕೃಷಿ ತಜ್ಞರ ಸಲಹೆಯೊಂದಿಗೆ ತಾಂತ್ರಿಕ ಮಾರ್ಗದರ್ಶನ ನೀಡುತ್ತಾ ವಿಶ್ವಾಸ ಗಳಿಸಿರುವ ನಮ್ಮ ಅಂಗಡಿಯ ವಿರುದ್ಧ ಯಾವುದೇ ಆಧಾರವಿಲ್ಲದೆ ಆರೋಪ ಮಾಡಲಾಗಿದೆ. ಆರೋಪ ಮಾಡಿರುವ ಪೊನ್ನತ್ಪುರ ಕಾಲೋನಿ ನಿವಾಸಿ ಅಣ್ಣಪ್ಪ ಅವರು ಉಲ್ಲೇಖಿಸಿರುವ ಜಮೀನಿಗೆ ಸಂಬಂಧಿಸಿದ ಕಳೆನಾಶಕವನ್ನು ನಮ್ಮ ಅಂಗಡಿಯಿಂದ ಖರೀದಿಸಿಲ್ಲ. ಆ ಜಮೀನಿಗೆ ಸಂಬಂಧಿಸಿದ ಯಾವುದೇ ಔಷಧಿಯನ್ನು ನಮ್ಮಿಂದ ಪಡೆದುಕೊಂಡಿರುವ ದಾಖಲೆಗಳೂ ಇಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಪುರಾವೆಯಿಲ್ಲದೆ ನಮ್ಮ ಅಂಗಡಿಯ ಹೆಸರನ್ನು ಪ್ರಸ್ತಾಪಿಸಿ ಆರೋಪ ಮಾಡಿದ್ದಾರೆ ಎಂದು ಹೇಳಿದರು.ಅಣ್ಣಪ್ಪ ಅವರು ಇತ್ತೀಚೆಗೆ ಬಲ್ಲೇನಹಳ್ಳಿ ಗ್ರಾಮದ ಶುಂಠಿ ಜಮೀನಿಗೆ ನಮ್ಮ ಅಂಗಡಿಯಿಂದ ನೀಡಿದ್ದ ಔಷಧಿಗಳನ್ನು ಖರೀದಿಸಿ ಸಿಂಪಡಣೆ ಮಾಡಿದ್ದರು. ಅದರ ಪರಿಣಾಮವಾಗಿ ಬೆಳೆ ಉತ್ತಮವಾಗಿ ಬಂದಿದೆ. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಕೃಷಿ ತಜ್ಞರು ರೈತರು ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಸತ್ಯಾಂಶ ಬಹಿರಂಗವಾಗುತ್ತದೆ. ನಮ್ಮ ಸಂಸ್ಥೆ ರೈತರ ಹಿತಾಸಕ್ತಿಯನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ, ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಯಾವುದೇ ರೈತರಿಗೆ ಉತ್ಪನ್ನದ ಕುರಿತು ಸಮಸ್ಯೆ ಅಥವಾ ಅನುಮಾನಗಳಿದ್ದರೆ ದಾಖಲೆಗಳೊಂದಿಗೆ ನಮ್ಮನ್ನು ಸಂಪರ್ಕಿಸಿದರೆ ಪರಿಶೀಲಿಸಿ ಅಗತ್ಯ ಸಹಕಾರ ನೀಡಲು ನಾವು ಸದಾ ಸಿದ್ಧರಾಗಿದ್ದೇವೆ.

ಸುಳ್ಳು ಆರೋಪಗಳ ಮೂಲಕ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನಗಳನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿರುವವರು ಕೈಬಿಡಬೇಕು. ಯಾವುದೇ ಆರೋಪ ಮಾಡುವ ಮುನ್ನ ಸತ್ಯಾಂಶವನ್ನು ಪರಿಶೀಲಿಸಿ ಮಾತನಾಡುವುದು ಸೂಕ್ತ ಎಂದು ಮನವಿ ಮಾಡಿದರು.