ಶಿಗ್ಗಾಂವಿ: ಸೋಯಾಬೀನ್ ಬೆಳೆ ವಿಮೆಯಲ್ಲಿ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಶುಕ್ರವಾರ ಕೃಷಿ ಇಲಾಖೆ ಕಚೇರಿ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದ್ದಾರೆ.
೨೦೨೫-೨೬ ಮುಂಗಾರು ಹಂಗಾಮಿನಲ್ಲಿ ಸೋಯಾಬೀನ್ ಬೆಳೆದ ಶಿಗ್ಗಾಂವಿ ಹೋಬಳಿಯ ರೈತರಿಗೆ ಬೆಳೆ ವಿಮೆಯಲ್ಲಿ ಅನ್ಯಾಯವಾಗಿದೆ. ಹಲವು ಬಾರಿ ಮನವಿ ನೀಡಿದರೂ ಕೃಷಿ ಇಲಾಖೆ ಸ್ಪಂದಿಸುತ್ತಿಲ್ಲ. ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು. ಈ ಕುರಿತು ತಹಸೀಲ್ದಾರ್, ಸಹಾಯಕ ಕೃಷಿ ನಿರ್ದೇಶಕ ಹಾಗೂ ಪೊಲೀಸ್ ಇಲಾಖೆಗೆ ಮನವಿ ನೀಡಿದರು.ರೈತ ಮುಖಂಡ, ಜಿಪಂ ಮಾಜಿ ಸದಸ್ಯ ಶಶಿಧರ ಹೊನ್ನಣ್ಣನವರ ಮಾತನಾಡಿ, ಬೆಳೆ ವಿಮೆಯಲ್ಲಿ ಅನ್ಯಾಯವಾಗಿರುವ ರೈತರು ಇಲಾಖೆಯಿಂದ ಇಲಾಖೆಗೆ ಅಲೆದಾಡುತ್ತಿದ್ದು, ಈ ಕ್ಷೇತ್ರದ ಶಾಸಕರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ, ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ತಾಲೂಕಿನ ಸಾವಿರಾರು ರೈತರನ್ನು ವಂಚಿಸುತ್ತಿರುವ ಅಧಿಕಾರಿಗಳು ಮತ್ತು ಇನ್ಸುರೆನ್ಸ್ ನೀಡುತ್ತಿರುವ ಎಐಸಿ ಕಂಪನಿ ವಿರುದ್ಧ ಶಾಸಕರು ಧ್ವನಿ ಎತ್ತಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧವೂ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಹೇಳಿದರು.
ಕೆ.ಎಂ.ಎಫ್. ನಿರ್ದೇಶಕ ತಿಪ್ಪಣ್ಣ ಸಾತಣ್ಣನವರ, ಮುಖಂಡರಾದ ವಿನಯಗೌಡ್ರ ಪಾಟೀಲ, ಶಂಕರಪ್ಪ ಮಡಿವಾಳರ, ನಾಗರಾಜ ಅದ್ರುಶಪ್ಪನವರ, ಸಿ.ವೈ. ಕಟ್ಟಿಗೌಡ್ರ, ಸಂತೋಷ ಕಟಗಿ ಇತರರಿದ್ದರು.ಅಧಿಕಾರಿಗಳಿಂದ ತಪ್ಪು ಮಾಹಿತಿ: ಜೆಡಿಎ ಡಾ. ಮಲ್ಲಿಕಾರ್ಜುನ, ಎಐಸಿ ಕಂಪನಿ ಮತ್ತು ಇತರ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯಿಂದ ತಾಲೂಕಿನ ಶಿಗ್ಗಾಂವಿ ಹೋಬಳಿಯ ಸೋಯಾಬೀನ್ ಬೆಳೆಗಾರರು ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಿ ವಿಮೆ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.