ಹತ್ತಿ ಬೀಜೋತ್ಪಾದನೆ ಪ್ರೇರೇಪಿಸಿ ಕಂಪನಿ ಮೋಸ, ಬೆಳೆ ಕಿತ್ತೆಸೆಯುತ್ತಿರುವ ರೈತರು!

| Published : Jun 27 2025, 12:49 AM IST

ಹತ್ತಿ ಬೀಜೋತ್ಪಾದನೆ ಪ್ರೇರೇಪಿಸಿ ಕಂಪನಿ ಮೋಸ, ಬೆಳೆ ಕಿತ್ತೆಸೆಯುತ್ತಿರುವ ರೈತರು!
Share this Article
  • FB
  • TW
  • Linkdin
  • Email

ಸಾರಾಂಶ

ಕನಕಗರಿ ತಾಲೂಕು ವ್ಯಾಪ್ತಿಯ ನೂರಾರು ರೈತರು ಹತ್ತಿ ಬೀಜೋತ್ಪಾದನೆಗಾಗಿ ರಾಶಿ, ನುಝೂಡ್, ಕಾವೇರಿ, ಶ್ರೀಕಾರ್, ಕ್ರಸ್ಟಲ್ ಸೇರಿ ಹಲವು ಖಾಸಗಿ ಕಂಪನಿಗಳು ಮುಂದಾಗಿದ್ದವು.

ಕನಕಗಿರಿ:

ಹತ್ತಿ ಬೀಜೋತ್ಪಾದನೆಗೆ ಪ್ರೇರೇಪಿಸಿ ಕಂಪನಿಗಳು ಮೋಸ ಮಾಡಿದ್ದರಿಂದ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಯನ್ನು ಕಿತ್ತೆಸೆಯುತ್ತಿದ್ದಾರೆ.

ಕನಕಗಿರಿ, ನವಲಿ ಹಾಗೂ ಹುಲಿಹೈದರ್ ಹೋಬಳಿಗಳಲ್ಲಿ ಒಟ್ಟು 2133 ಹೆಕ್ಟೇರ್‌ ಹತ್ತಿ ಬೀಜೋತ್ಪಾದನೆಗಾಗಿ ಬಿತ್ತನೆ ಮಾಡಲಾಗಿದೆ.

ಕನಕಗರಿ ತಾಲೂಕು ವ್ಯಾಪ್ತಿಯ ನೂರಾರು ರೈತರು ಹತ್ತಿ ಬೀಜೋತ್ಪಾದನೆಗಾಗಿ ರಾಶಿ, ನುಝೂಡ್, ಕಾವೇರಿ, ಶ್ರೀಕಾರ್, ಕ್ರಸ್ಟಲ್ ಸೇರಿ ಹಲವು ಖಾಸಗಿ ಕಂಪನಿಗಳು ಮುಂದಾಗಿದ್ದವು. ಪ್ರತಿ ಪ್ಲಾಟ್‌(1 ಎಕರೆ)ಗೆ ಪ್ರತಿ ವರ್ಷ 6ರಿಂದ 8 ಕ್ವಿಂಟಲ್ ಬೀಜೋತ್ಪಾದನೆ ಮಾಡುತ್ತಿರುವ ರೈತರಿಗೆ ಇದೀಗ ಕಂಪನಿಗಳು ಪ್ರತಿ ಎಕರೆಗೆ 2 ಕ್ವಿಂಟಲ್ ಮಾತ್ರ ಬೀಜ ಖರೀದಿ ಮಾಡುತ್ತೇವೆ ಎಂದು ಹೇಳಿದ್ದರಿಂದ ರೈತರು ಆತಂಕಗೊಂಡು ಹತ್ತಿ ಬೆಳೆ ಕಿತ್ತೆಸೆಯಲು ಮುಂದಾಗಿದ್ದಾರೆ. ಇನ್ನೂ ಕೆಲ ರೈತರು ಕುರಿ, ಮೇಕೆ ಮೇಯಿಸಲು ಶುರು ಮಾಡಿದ್ದಾರೆ.

ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಬಿತ್ತನೆ ಮಾಡಿ ಹತ್ತಿ ಬೀಜೋತ್ಪಾದನೆಗೆ ಮುಂದಾಗಿದ್ದ ನಮಗೆ ಖಾಸಗಿ ಕಂಪನಿಗಳು ಮೋಸ ಮಾಡಿವೆ. ಪ್ರತಿ ಪ್ಲಾಟ್‌ಗೆ ಎರಡೇ ಕ್ವಿಂಟಲ್ ಬೀಜ ಖರೀದಿಸುತ್ತೇವೆ ಎನ್ನುವ ಕಂಪನಿಗಳ ಒಮ್ಮತಕ್ಕೆ ರೈತರು ಆಕ್ರೋಶಗೊಂಡು ಹೋರಾಟಕ್ಕೆ ಇಳಿದಿದ್ದಾರೆ. ಇತ್ತ ಕೃಷಿ ಅಧಿಕಾರಿಗಳು ರೈತರ ಹೋರಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕಂಪನಿಗಳ ಜತೆ ಚರ್ಚಿಸಲು ಮುಂದಾಗಿವೆ.

ಹತ್ತಿ ಬೀಜವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ತಾಲೂಕಿನ ಹಲವು ರೈತರು ಹತ್ತಾರು ಪ್ಲಾಟ್‌ಗಳನ್ನು ಬೆಳೆದಿದ್ದು, ಬೀಜೋಪಚಾರಕ್ಕಾಗಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ದಾರೆ. ಇದೀಗ ಕೈ ಸುಟ್ಟುಕೊಂಡ ರೈತರಿಗೆ ಕಂಪನಿಗಳು ಪರಿಹಾರ ನೀಡಬೇಕು. ಇಲ್ಲವಾದರೆ, ಉಗ್ರ ಹೋರಾಟ ಮಾಡಲಾಗುವುದು ಎಂದು ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಎಚ್ಚರಿಸಿದ್ದಾರೆ.

ಪ್ರತಿ ವರ್ಷ ಖಾಸಗಿ ಕಂಪನಿಗಳು ರೈತರನ್ನು ಪ್ರೇರೇಪಿಸಿ ಹತ್ತಿ ಬೀಜೋತ್ಪಾದನೆಗೆ ಮುಂದಾಗುತ್ತಿದ್ದವು. ಈ ವರ್ಷ ಮೊದಲು ಬೀಜ ನೀಡಿ ರೈತರಿಂದ ಬಿತ್ತನೆ ಮಾಡಿಸಿರುವ ಕಂಪನಿಗಳು ಇದೀಗ 2 ಕ್ವಿಂಟಲ್‌ಗಿಂತ ಹೆಚ್ಚುವರಿ ಬೀಜ ಖರೀದಿಸುವುದಿಲ್ಲ ಎನ್ನುತ್ತಿವೆ. ಈಗಾಗಲೇ ರೈತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಂಪನಿಗಳು ಈ ರೀತಿ ಹೇಳಿ ಜಾರಿಕೊಳ್ಳಲು ಯತ್ನಿಸುತ್ತಿವೆ. ನಾವು ಬೇರೆ ದಾರಿಯಿಲ್ಲದೆ ನಾವು ಹತ್ತಿ ಬೆಳೆ ಕಿತ್ತೆಸೆಯುತ್ತಿದ್ದೇವೆ. ರೈತರ ಉಳಿವಿಗೆ ಸರ್ಕಾರ ಬರಬೇಕು.

ಅಮರೇಶಪ್ಪ ವಾಲೇಕಲ್ ರೈತ

ಕನಕಗಿರಿ, ನವಲಿ ಹಾಗೂ ಹುಲಿಹೈದರ್ ಹೋಬಳಿಗಳಲ್ಲಿ ಒಟ್ಟು 2133 ಹೆಕ್ಟೇರ್‌ ಹತ್ತಿ ಬೀಜೋತ್ಪಾದನೆಗಾಗಿ ಬಿತ್ತನೆ ಮಾಡಲಾಗಿದೆ. ಖಾಸಗಿ ಕಂಪನಿಗಳ ಜತೆ ಸಭೆ ನಡೆಸಿದ್ದು, ಬಹುತೇಕ ಎಲ್ಲ ಕಂಪನಿಗಳು ರೈತರು ಬೆಳೆದ ಬೀಜ ಖರೀದಿಸಲು ಒಪ್ಪಿವೆ. ಯಾರೂ ಕೂಡ ಬೆಳೆ ನಾಶಪಡಿಸಬಾರದು. ರೈತರಿಗೆ ಮೋಸ ಮಾಡುವುದಾಗಲಿ, ಸಭೆಯಲ್ಲಿ ಒಪ್ಪಿದ್ದಂತೆ ನಡೆಯದಿರುವ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ಸಂತೋಷ ಪಟ್ಟದಕಲ್ಲು ಸಹಾಯಕ ಕೃಷಿ ನಿರ್ದೇಶಕ ಗಂಗಾವತಿ