ಸಾರಾಂಶ
ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ತುಂತುರು ಹನಿ ನೀರಾವರಿ ಪೈಪ್ಗಳು ಹಾಗೂ ರೈತರ ಪಂಪ್ಸೆಟ್ಗೆ ಟಿಸಿ ಅಳವಡಿಸಲು ಸಚಿವರು ಹಾಗೂ ಅಧಿಕಾರಿಗಳ ಕಮಿಷನ್ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಭಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕನಕಾಪುರ, ಕುರುಬಗೊಂಡ, ಕಬ್ಬೂರ, ಕುಳೇನೂರು, ಸಂಗೂರು, ದೇವಿಹೊಸೂರು, ಆಲದಕಟ್ಟಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲದರ ಬೆಲೆಯೂ ಹೆಚ್ಚಳವಾಗಿದೆ. ನಮ್ಮ ಅವಧಿಯಲ್ಲಿ ರೈತರ ಪಂಪ್ಸೆಟ್ಗಳಿಗೆ ಅಕ್ರಮ ಸಕ್ರಮಗೊಳಿಸಲು ಟಿಸಿ ನೀಡಲು ೨೫ ಸಾವಿರ ನಿಗದಿ ಪಡಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎರಡೂವರೆ ಲಕ್ಷ ರು. ಪಡೆಯುತ್ತಿದ್ದಾರೆ. ಅದೇ ರೀತಿ ಸ್ಪಿಂಕ್ಲರ್ ಪೈಪುಗಳಿಗೆ ನಮ್ಮ ಅವಧಿಯಲ್ಲಿ ಸಬ್ಸಿಡಿಯಲ್ಲಿ ೧೮೦೦ ರು. ಗಳಿಗೆ ನೀಡಲಾಗುತ್ತಿತ್ತು. ಈಗ ಅದೇ ಪೈಪುಗಳಿಗೆ ೪೫೦೦ ರು. ಪಡೆಯುತ್ತಿದ್ದಾರೆ. ಇದು ಹೆಚ್ಚಾಗಲು ಸಚಿವರು ಮತ್ತು ಅಧಿಕಾರಿಗಳ ಕಮಿಷನ್ ಹೆಚ್ಚಳವಾಗಿರುವುದೇ ಕಾರಣ. ಅದೇ ರೀತಿ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳವಾಗಿದೆ. ಮದ್ಯದ ದರವೂ ಹೆಚ್ಚಳವಾಗಿದೆ. ಈ ಸರ್ಕಾರದ ಅವಧಿಯಲ್ಲಿ ಎಲ್ಲವೂ ದುಬಾರಿಯಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನ್ ಹಾಜರಿದ್ದರು.