ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನಲ್ಲಿರುವ ಹಲವಾರು ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ನಂಜುಂಡಸ್ವಾಮಿ ಮೂಲ ಸಂಘಟನೆ) ಮತ್ತು ಕೆ ಆರ್ ಎಸ್ ಪಕ್ಷದ ಪದಾಧಿಕಾರಿಗಳು ಇಲ್ಲಿಯ ಬೆಸ್ಕಾಂ ಕಚೇರಿ ಮತ್ತು ತಹಸೀಲ್ದಾರ್ ರವರ ಕಚೇರಿ ಮುಂದೆ ತಾಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್, ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು. ಹೋಬಳಿಗೊಂದರಂತೆ 4 ಗೋ ಶಾಲೆ ಪ್ರಾರಂಭಿಸಬೇಕು. ಕೃಷಿ ಪಂಪ್ ಸೆಟ್ ಗಳಿಗೆ ನಿರಂತರವಾಗಿ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಕೆರೆ ಕಟ್ಟೆಗಳನ್ನು ಹೇಮಾವತಿ ನೀರನ್ನು ಹರಿಸುವ ಮೂಲಕ ತುಂಬಿಸಬೇಕು. ದೊಡ್ಡ ಬೆಳವಂಗಲ, ಜಂಗಮಕೋಟೆ, ಆನೇಕಲ್, ಬಿಡದಿಯಲ್ಲಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಲಿಂಕ್ ಕೆನಾಲ್ ನ್ನು ಕೈ ಬಿಡಬೇಕು. ರೈತರ ಮತ್ತು ಸ್ವ ಸಹಾಯ ಸಂಘಗಳ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರೈತರ ಸಾಗುವಳಿ ಜಮೀನಿಗೆ ಸಾಗುವಳಿ ಚೀಟಿ ನೀಡಬೇಕು. ಆರ್ ಟಿ ಸಿ ಗಳನ್ನು ಪ್ರತ್ಯೇಕಿಸಬೇಕು. ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರಿಗೆ ಉಚಿತವಾಗಿ ಮೂಲಭೂತ ಸೌಕರ್ಯ ಒದಗಿಸಬೇಕು. ಸುಟ್ಟು ಹೋದ ವಿದ್ಯುತ್ ಪರಿವರ್ತಕಗಳನ್ನು ಸಕಾಲದಲ್ಲಿ ಮರು ಸೌಕರ್ಯ ನೀಡಬೇಕು. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಜಮೀನನ್ನು ವಶಪಡಿಸಿಕೊಳ್ಳುವ ಕೃತ್ಯ ಕೊನೆಯಾಗಬೇಕೆಂದು ಆಗ್ರಹಿಸಿದರು. ಓವರ್ ಲೋಡ್ ಇರುವ ಫೀಡರ್ ಗಳ ಲೋಡ್ ಕಡಿಮೆ ಮಾಡಲು ಹೊಸ ಲಿಂಕ್ ಲೈನ್ ಗಳನ್ನು ಮಾಡಬೇಕು. ಶಾಖಾ ಕಚೇರಿಗಳಲ್ಲಿ ನೌಕರರ ಸಮಸ್ಯೆ ಸರಿಪಡಿಬೇಕು. ಹೊಸಕಟ್ಟಡಗಳಿಗೆ ಮನೆಗಳಿಗೆ ನೀಡುವ ವಿದ್ಯುತ್ ಸಂಪರ್ಕದ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಗೌರವಾಧ್ಯಕ್ಷರಾದ ಗಂಗಾಧರ್ ಗೌಡ, ವಿ.ಎಂ. ಅಶೋಕ್ ಕುಮಾರ್, ಸುರೇಶ್, ಪ್ರಧಾನ ಕಾರ್ಯದರ್ಶಿ ವಿನೋದ್, ಕಾರ್ಯದರ್ಶಿ ವಿಜಯ ನರಸಿಂಹ ಶೆಟ್ಟಿ, ಕಾರ್ಯಾಧ್ಯಕ್ಷ ಲೋಕೇಶ್, ಸಲಹೆಗಾರರಾದ ರವಿಪ್ರಕಾಶ್, ಶಿವಕುಮಾರ ಸ್ವಾಮಿ, ಎಚ್.ಬಿ. ಪುಟ್ಟಣ್ಣ, ಸಂಚಾಲಕರಾದ ಚಿದಾನಂದ್ ಮೂರ್ತಿ, ಸುರೇಶ್, ಪುಟ್ಟರಾಜು, ಶಿವಸ್ವಾಮಿ, ಸಂಘಟನಾ ಕಾರ್ಯದರ್ಶಿಗಳ ಧನಂಜಯ್, ವಾಣಿ ಶಿವಕುಮಾರ್, ಸತೀಶ್, ಸಿದ್ದರಾಮಣ್ಣ, ಗಂಗಾಧರ್, ರಮೇಶ್, ಶಿವಕುಮಾರ್, ಪ್ರವೀಣ್, ಅಶೋಕ್, ಮಹಿಳಾಧ್ಯಕ್ಷೆ ಸುಧಾಮಣಿ, ಉಪಾಧ್ಯಕ್ಷೆ ಶಾಂತಕುಮಾರಿ, ತುರುವೇಕೆರೆ ನಗರ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಸಂಚಾಲಕರುಗಳಾದ ಪೂರ್ಣಿಮಾ, ಶ್ವೇತ, ರಾಜೇಶ್ವರಿ, ನಾಗರತ್ನಮ್ಮ, ಪುಷ್ಪ, ಭಾಗ್ಯಮ್ಮ, ರೇಣುಕಮ್ಮ ಹಾಗೂ ಗ್ರಾಮ ಘಟಕಗಳ ಪದಾಧಿಕಾರಿಗಳಾದ ಕೆ ಜಿ ರಾಮು, ರಾಕೇಶ್, ಸ್ವಾಮಿ ಹಾಗೂ ರೈತ ಸಂಘದ ಮುಖಂಡರುಗಳು ಪಾಲ್ಗೊಂಡಿದ್ದರು.