ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಡದಿ ಟೌನ್‌ಶಿಪ್ ವಿರೋಧ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ) ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಸರ್ಕಾರಗಳು ಮೂಲಭೂತ ಸೌಕರ್ಯಗಳಾದ ರಸ್ತೆ, ನೀರಾವರಿ, ಕೈಗಾರಿಕೆಗಳಿಗೆ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅವೈಜ್ಞಾನಿಕ ಯೋಜನೆಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಭೂಮಿಯನ್ನು ವಶಪಡಿಸಿಕೊಳ್ಳವುದನ್ನು ನಾವು ಖಂಡಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸುಮಾರು ಹತ್ತು ವರ್ಷಗಳಿಂದ ರೈತರ ಭೂಮಿಗಳನ್ನು ವಶಪಡಿಸಿಕೊಂಡು ಅದರಲ್ಲಿ ಎಷ್ಟರ ಮಟ್ಟಿಗೆ ಅಭಿವೃದ್ಧಿ ಪಡಿಸಿದ್ದೇವೆ ಎಂಬುದನ್ನು ಸರ್ಕಾರಗಳು ಹೇಳಬೇಕಾಗಿದೆ. ನಿಜ ಹೇಳಬೇಕು ಎಂದರೆ ಟೌನ್‌ಶಿಪ್ಪಿಗೋಸ್ಕರ ವಶಪಡಿಸಿಕೊಂಡ ಭೂಮಿಗಳಲ್ಲಿ ಕೇವಲ ಶೇ.10ರಷ್ಟು ಮಾತ್ರ ಅಭಿವೃದ್ಧಿಯಾಗಿದ್ದು, ಇನ್ನು ಶೇ.90 ರಷ್ಟು ಹಾಗೆಯೇ ಉಳಿದಿದೆ ಎಂದು ಆರೋಪಿಸಿದರು.

ರೈತರ ಫಲವತ್ತಾದ ಭೂಮಿಗಳನ್ನು ವಶಪಡಿಸಿಕೊಂಡರೆ ಅವರ ಬದುಕೆ ಮೂರಾಬಟ್ಟೆಯಾಗುತ್ತದೆ. ಕೃಷಿ ಬಿಟ್ಟರೆ ಅವರಿಗೆ ಬೇರೆ ಗೊತ್ತಿರುವುದಿಲ್ಲ. ಈಗ ಗ್ರೇಟರ್ ಬೆಂಗಳೂರು ಇಂಟೆಗ್ರೆಟೆಡ್ ಪ್ರಾಜೆಟ್‌ಗೋಸ್ಕರ ಸುಮಾರು 7,481ಎಕರೆ ಜಮೀನನ್ನು ರೈತರಿಂದ ಬಲವಂತವಾಗಿ ವಶಪಡಿಸಿಕೊಳ್ಳುತ್ತಿರುವುದು ಖಂಡನೀಯ. ಈಗ ರೈತರು ಆತಂಕದ ಸ್ಥಿತಿಯಲ್ಲಿದ್ದಾರೆ. ಇರುವ ಜಮೀನನ್ನು ಬಿಟ್ಟು ಎಲ್ಲಿಗೆ ಹೋಗಬೇಕು ಎಂದು ಗೋಳಾಡುತ್ತಿದ್ದಾರೆ. ಸರ್ಕಾರ ಶೇ.80 ರಷ್ಟು ರೈತರು ಯೋಜನೆಯ ಪರವಾಗಿ ಇದ್ದಾರೆ ಸುಳ್ಳು ಹೇಳುತ್ತಿದ್ದಾರೆ. ಆದರಿಂದ ಈ ಯೋಜನೆಯನ್ನು ಕೈಬಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದರ ಜೊತೆಗೆ ಮಳೆ ಕೈಕೊಟ್ಟಿದೆ ಆದರಿಂದ ರಾಜ್ಯದ ಬರಪೀಡಿತ ಜಿಲ್ಲೆಗಳನ್ನು ಪಟ್ಟಿ ಮಾಡಿ ಘೋಷಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬ್ಯಾಂಕುಗಳಿಂದ ರೈತರಿಗೆ ನೋಟಿಸ್ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.


ಪತ್ರಿಭಟನೆಯಲ್ಲಿ ರೈತ ಚಳವಳಿಯ ಹಿರಿಯ ಸಂಸ್ಥಾಪಕ ಸದಸ್ಯ ಕೆ.ಟಿ. ಗಂಗಾಧರ್, ಜಿಲ್ಲಾ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥೇಶ್ವರ ಹೆಚ್.ಎಸ್. ಪ್ರಮುಖರಾದ ಯಶ್ವಂತ್ ರಾವ್ ಘೋರ್ಪಡೆ, ಪುಟ್ಟಪ್ಪ ಕೆ.ಎಸ್. ಹಿರಣ್ಣಯ್ಯ ಭದ್ರಾವತಿ, ಜಗದೀಶ್ ನಾಯ್ಕ, ಮೋಹನ್ ಕುಮಾರ್ ಕ್ಲೂಡಿಗೆರೆ, ಲೋಕೇಶಪ್ಪ, ಸೀನಪ್ಪ, ಗುಣಶೇಖರ್, ರಾಜಣ್ಣ ಸೇರಿದಂತೆ ಹಲವು ಇದ್ದರು.

ಹುತ್ಮಾರ ದಿನ

ಜು.21ರೈತ ಹುತ್ಮಾರ ದಿನವಾಗಿದೆ. ರೈತ ಹೋರಾಟದಲ್ಲಿ ಪಾಲ್ಗೊಂಡು ಹುತ್ಮಾರಾದ ಎಲ್ಲ ರೈತರಿಗೆ ರೈತ ಸಂಘದ ಪರವಾಗಿ ನಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ. ಸರ್ಕಾರದ ದಬ್ಬಾಳಿಕೆ ವಿರುದ್ಧ ನಡೆಸಿದ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದವರ ನೆನೆಪಿಸುವ ದಿನವಿದು. ಅಲ್ಲಿಂದ ಇಲ್ಲಿಯವರೆಗೂ ಕೂಡ ರೈತ ಬದುಕು ಹಸನಾಗಿಲ್ಲ. ರೈತರ ಮೇಲಿನ ದಬ್ಬಾಳಿಕೆ ನಿಂತಿಲ್ಲ. ಬೆಲೆ ತಾರತಮ್ಯ ಇನ್ನು ಇದೆ. ಇದರ ಜೊತೆಗೆ ಸರ್ಕಾರಗಳು ಬಂಡಾಳವಾಳ ಶಾಹಿಗಳ ಜೊತೆ ಸೇರಿಕೊಂಡು ರೈತರ ಫಲವತ್ತಾದ ಜಮೀನುಗಳನ್ನೇ ಬಲವಂತದಿಂದಲೂ, ಆಮಿಷದಿಂದಲೂ ಕಸಿದುಕೊಳ್ಳುತ್ತಿರುವುದು ಅಪಾಯದ ಸಂಕೇತವಾಗಿದೆ.

ಕೆ.ಟಿ.ಗಂಗಾಧರ್, ರೈತ ಚಳವಳಿಯ ಹಿರಿಯ ಸಂಸ್ಥಾಪಕ ಸದಸ್ಯ.