ಬಸವ ಸಾಗರ ಜಲಾಶಯಕ್ಕೆ ರೈತರ ಮುತ್ತಿಗೆ ಯತ್ನ

| Published : Dec 30 2023, 01:15 AM IST

ಬಸವ ಸಾಗರ ಜಲಾಶಯಕ್ಕೆ ರೈತರ ಮುತ್ತಿಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ನೀರಿಲ್ಲದೇ ಮೆಣಸಿಕಾಯಿ ಬೆಳೆ ಸಂಪೂರ್ಣ ಬಾಡುತ್ತಿದ್ದು, ಕೂಡಲೇ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕೆಂದು ರೈತರು ಬಸವಸಾಗರ ಜಲಾಶಯಕ್ಕೆ ಮುತ್ತಿಗೆ ಯತ್ನ ನಡೆಸಿದರು,

ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ಬಿರುಸುಗೊಂಡ ಹೋರಾಟ

ಜಲಾಶಯದ ಮುಖ್ಯದ್ವಾರದ ಬಳಿ ರೈತರ ತಡೆಗಟ್ಟಿದ ಪೊಲೀಸರು: ಬಿಗಿ ಭದ್ರತೆ

ಮೆಣಸಿನಕಾಯಿ ಬೆಳೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಕನ್ನಡಪ್ರಭ ವಾರ್ತೆ ಯಾದಗಿರಿ

ನಾರಾಯಣಪುರ ಎಡದಂಡೆ ಕಾಲುವೆ ನೀರು ಹರಿಸುವ ಮೂಲಕ, ಈ ಭಾಗದಲ್ಲಿ ಬೆಳೆದು ನಿಂತ ಮೆಣಸಿನಕಾಯಿ ಬೆಳೆಗಳ ಸಂರಕ್ಷಣೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್ ಮದ್ದರಕಿ ನೇತೃತ್ವದಲ್ಲಿ ನೂರಾರು ರೈತರು ಶುಕ್ರವಾರ ಜಿಲ್ಲೆಯ ಹುಣಸಗಿ ತಾಲೂಕು ನಾರಾಯಣಪುರ ಸಮೀಪದ ಬಸವ ಸಾಗರ ಜಲಾಶಯಕ್ಕೆ ಮುತ್ತಿಗೆ ಯತ್ನದ ಪ್ರತಿಭಟನೆ ನಡೆಸಿದರು.

ಈ ಕುರಿತು ನೀರಿಗಾಗಿ ಆಗ್ರಹಿಸಿ ಶಹಾಪುರ ಸಮೀಪದ ಭೀಮರಾಯನ ಗುಡಿಯಲ್ಲಿ ಕಳೆದ 14 ದಿನಗಳಿಂದ ರೈತ ಸಂಘಟನೆಗಳ ವಿವಿಧ ಪ್ರತಿಭಟನೆಗಳ ಬೆನ್ನಲ್ಲೇ, ಇತ್ತ, ಶುಕ್ರವಾರ ನೂರಾರು ರೈತರು "ನಾರಾಯಣಪುರ ಚಲೋ " ಹಮ್ಮಿಕೊಳ್ಳುವ ಮೂಲಕ ಪ್ರತಿಭಟನೆ ಕಾವೇರಿಸಿದರು. ರೈತರ ದಿಢೀರ್ ಪ್ರತಿಭಟನೆಯಿಂದ ಎಚ್ಚೆತ್ತ 300ಕ್ಕೂ ಹೆಚ್ಚು ಪೊಲೀಸರು, ಭಾರಿ ಬಂದೋಬಸ್ತ್‌ ಮೂಲಕ ಜಲಾಶಯದ ಮುಖ್ಯದ್ವಾರದ ಬಳಿ ಎಲ್ಲರನ್ನೂ ತಡೆದರು.

ರೈತರು ಸಂಕಷ್ಟದಲ್ಲಿದ್ದಾರೆ. ಆತ್ಮಹತ್ಯೆಯಂತಹ ಪ್ರಕರಣಗಳು ನಡೆಯುತ್ತಿದ್ದು, ಮುಂದೆ ಇಂತಹ ಅನಾಹುತಗಳ ತಡೆಯಬೇಕೆಂದರೆ ಜನವರಿ ತಿಂಗಳಲ್ಲಿ 10 ದಿನಗಳ ಕಾಲ ಫೆಬ್ರವರಿಯಲ್ಲಿ 10 ದಿನಗಳ ಕಾಲ ಎಡದಂಡೆ ಕಾಲುವೆಗೆ ನೀರು ಹರಿಸಬೇಕೆಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್‌ ಆಗ್ರಹಿಸಿದರು.

ಮೂಗಿಗೆ ತುಪ್ಪ ಸವರಿ, ಪ್ರತಿಭಟನೆ ಮೊಟಕುಗೊಳಿಸುವ ಯತ್ನ: ಶಹಾಪುರ ಸಮೀಪದ ಭೀಮರಾಯನ ಗುಡಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‌ಎಲ್‌) ಕಚೇರಿಯೆದುರು ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 14ನೇ ದಿನಕ್ಕೆ ಕಾಲಿಟ್ಟಿದೆ.

ಈ ಬಗ್ಗೆ ಮಾತನಾಡಿದ ಹಿರಿಯ ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ನೀರು ಬಿಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ, ಶಾಸಕ ಅಜೇಯಸಿಂಗ್ ಅವರು ಭೇಟಿ ಮಾಡಿದ್ದಾರೆ. ಆದರೂ ಈ ಕುರಿತು, ಮೀನಾಮೇಷ ಏಕೆ ಎಂದು ಪ್ರಶ್ನಿಸಿದರು.

ಮೂಗಿಗೆ ತುಪ್ಪ ಸವರಿ, ಪ್ರತಿಭಟನೆ ಮೊಟಕುಗೊಳಿಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಕಿಡಿ ಕಾರಿದ ಸತ್ಯಂಪೇಟೆ, ನೀರು ಬಿಡುವ ಆದೇಶ ಹೊರಡಿಸುವವರೆಗೂ ಪ್ರತಿಭಟನೆ ನಿಲ್ಲಿಸೋಲ್ಲ ಎಂದರು.

ರೈತರು ಸಂಕಷ್ಟದಲ್ಲಿದ್ದಾರೆ. ಆತ್ಮಹತ್ಯೆಯಂತಹ ಪ್ರಕರಣಗಳು ನಡೆಯುತ್ತಿದ್ದು, ಮುಂದೆ ಇಂತಹ ಅನಾಹುತಗಳ ತಡೆಯಬೇಕೆಂದರೆ ಜನವರಿ ತಿಂಗಳಲ್ಲಿ 10 ದಿನಗಳ ಕಾಲ ಫೆಬ್ರವರಿಯಲ್ಲಿ 10 ದಿನಗಳ ಕಾಲ ಎಡದಂಡೆ ಕಾಲುವೆಗೆ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್‌ ಮದ್ದರಕಿ ಆಗ್ರಹಿಸಿದ್ದಾರೆ.