ಹಾನಗಲ್ಲ: ಪಟ್ಟಣದಲ್ಲಿರುವ ೧೧೦ ಕೆವಿ ಗ್ರಿಡ್‌ಗೆ ಮುತ್ತಿಗೆ ಹಾಕಿದ ರೈತರು ನಮ್ಮ ಪಂಪ್‌ಸೆಟ್‌ಗೆ ವಿದ್ಯುತ್ ಹರಿಸದ ಹೊರತು ಎಲ್ಲಿಗೂ ವಿದ್ಯುತ್ ಹರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ೩ ತಾಸುಗಳ ಕಾಲ ವಿದ್ಯುತ್ ತಡೆಗೆ ಕಾರಣವಾದರು.ಗುರುವಾರ ಹಾನಗಲ್ಲ ತಾಲೂಕಿನ ಸಾಂವಸಗಿ ಗ್ರಾಮದ ಪಂಪಸೆಟ್ ಗ್ರಾಹಕ ರೈತರು ತಮ್ಮ ಪಂಪ್ ಸೆಟ್‌ಗಳಿಗೆ ೫ ದಿನಗಳಿಂದ ವಿದ್ಯುತ್ ಇಲ್ಲ. ಗೋವಿನ ಜೋಳ ಅಡಕೆ ಬೆಳೆಗೆ ಈ ಬಿರು ಬಿಸಿಲಿನಲ್ಲಿ ಭಾರೀ ಹಾನಿಯಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಏನೂ ಪ್ರಯೋಜನವಾಗಲಿಲ್ಲ. ಅಧಿಕಾರಿಗಳು ಕೂಡ ಪೋನ್ ತೆಗೆಯುವುದಿಲ್ಲ. ಲೈನ್‌ಮನ್ ಕೂಡ ನಮ್ಮ ಊರಿಗ ವಿದ್ಯುತ್ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಹೆಸ್ಕಾಂ ಅಧಿಕಾರಿಗಳು ಪ್ರತಿವರ್ಷ ಬೇಸಿಗೆಯಲ್ಲಿ ಇಂತಹ ಸಮಸ್ಯೆಗಳನ್ನು ಹುಟ್ಟು ಹಾಕುತ್ತಾರೆ. ಅನಿವಾರ್ಯವಾಗಿ ಪ್ರತಿಭಟನೆಗಿಳಿಯುವ ಸ್ಥಿತಿ ಬಂದಿದೆ. ಹಾನಗಲ್ಲ ತಾಲೂಕಿನ ವಿದ್ಯುತ್ ಸಮಸ್ಯೆಗೆ ಪರಿಹಾರ ಯಾವಾಗ ಎಂಬ ಚಿಂತೆ ಕಾಡಿದೆ. ಈಗ ಬೆಳೆ ಬರುವ ಅಂತಿಮ ಹಂತದಲ್ಲಿ ಗೋವಿನ ಜೋಳವಿದೆ. ಈಗ ನೀರಿಲ್ಲದಿದ್ದರೆ ಬೆಳೆ ಹಾಳಾಗಿ ಹೋಗುತ್ತದೆ. ಕಳೆದ ಮಳೆಗಾಲದಲ್ಲಿ ಅತೀ ವೃಷ್ಟಿ ಕಾಡಿತು. ಈಗ ಹೆಸ್ಕಾಂ ಕಾಟದಿಂದ ಬೆಳೆ ಇಲ್ಲದಂತಾಗುತ್ತಿದೆ. ಯಾರೂ ಹೇಳುವವರು, ಕೇಳುವವರು ಇಲ್ಲದ ಸ್ಥಿತಿ ನಮ್ಮ ತಾಲೂಕಿಗೆ ಬಂದಿದೆ. ನಮಗೆ ವಿದ್ಯುತ್ ನೀಡುವವರೆಗೆ ಇಲ್ಲಿಂದ ಕದಲುವುದಿಲ್ಲ. ಅಲ್ಲಿಯವರೆಗೆ ಯಾರಿಗೂ ವಿದ್ಯುತ್ ಬೇಡ ಎಂದು ಇಡೀ ಗ್ರಿಡ್‌ನಿಂದ ಸಂಚರಿಸುವ ವಿದ್ಯುತ್ ಬಂದ್‌ಗೆ ಕಾರಣರಾದರು.ಮೂರು ಗಂಟೆ ವಿದ್ಯುತ್ ಕಟ್: ಮಧ್ಯಾಹ್ನ ೧೨ ಗಂಟೆಯಿಂದ ೩ ಗಂಟೆಯವರೆಗೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಾನಗಲ್ಲ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಯಿತು. ಅಂತಿಮವಾಗಿ ೩ ಗಂಟೆಯ ಹೊತ್ತಿಗೆ ವ್ಯತ್ಯಯವಿಲ್ಲದೆ ಇನ್ನು ಮುಂದೆ ವಿದ್ಯುತ್ ಹರಿಸುವ ಭರವಸೆಯ ನಂತರ ಪ್ರತಿಭಟನೆಯಿಂದ ಹಿಂದೆ ಸರಿದರು. ೧೧೦ಕೆವಿ ಹೊಸ ಗ್ರಿಡ್: ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಹಾಗೂ ಬೆಳಗಾಲಪೇಟೆಗಳಲ್ಲಿ ೩೩ ಕೆವಿ ವಿದ್ಯುತ್ ಗ್ರಿಡ್‌ಗಳನ್ನು ೧೩೨ ಕೆವಿ ವಿದ್ಯುತ್ ಗ್ರಿಡ್‌ಗಳಾಗಿ ಪರಿವರ್ತಿಸಲು ೫೦ ಕೋಟಿ ರು.ಗಳ ಟೆಂಡರ್ ಕೆರೆಯಲಾಗಿದೆ. ಆದರೆ ಟೆಂಡರ್ ವಿಳಂಬವಾಗುತ್ತಿದೆ. ಗುತ್ತಿಗೆದಾರರು ಕೆಲಸ ಆರಂಭಿಸಿದರೆ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಎನ್ನಲಾಗಿದೆ. ಇನ್ನು ಒಂದು ತಿಂಗಳ ಈಚೆಗೆ ಹಾನಗಲ್ಲ ೧೧೦ ಕೆವಿ ವಿದ್ಯುತ್ ಗ್ರಿಡ್‌ನಲ್ಲಿ ೨೦ ಮೆಗಾ ಓಲ್ಟ್ ಎಂಪಿಯಲ್ ಶಕ್ತಿ ವಿದ್ಯುತ್ ಪರಿವರ್ತಕ ಅಳವಡಿಸಿದ್ದರಿಂದ ಹಾನಗಲ್ಲ ಪಟ್ಟಣಕ್ಕೆ ಸ್ವಲ್ಪ ಮಟ್ಟಿನ ವಿದ್ಯುತ್ ಅನಾನುಕೂಲ ಕಡಿಮೆಯಾಗಿದೆ.

೧೧೦ ಕೆವಿ ೩ ಗ್ರಿಡ್: ೧೧೦ಕೆವಿ ೩ ಗ್ರಿಡ್‌ಗಳು ತಿಳವಳ್ಳಿ, ಹಾನಗಲ್ಲ, ಬಾಳಂಬೀಡದಲ್ಲಿವೆ. ಆದರೆ ಹಾನಗಲ್ಲ ಪಟ್ಟಣದಲ್ಲಿ ಇವುಗಳಿಂದ ವಿದ್ಯುತ್ ಪ್ರಸರಣ ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ನಿರಂತರ ಓವರ್‌ಲೋಡ್ ಸಮಸ್ಯೆಯಾಗುತ್ತಿದೆ. ಬೆಳಗಾಲಪೇಟೆ ಹಾಗೂ ಬಮ್ಮನಹಳ್ಳಿ ಗ್ರಿಡ್‌ಗಳು ಆರಂಭವಾಗದ ಹೊರತು ಹಾನಗಲ್ಲ ವಿದ್ಯುತ್ ಸಮಸ್ಯೆಗೆ ಪರಿಹಾರ ಇಲ್ಲ ಎನ್ನಲಾಗಿದೆ.ಪ್ರತಿಭಟನೆ ಸಂದರ್ಭದಲ್ಲಿ ರೈತರಾದ ಪಂಚಾಕ್ಷರಸ್ವಾಮಿ ಕುಲಕರ್ಣಿ, ಶಶಿಧರ ಕುಲಕರ್ಣೀ, ಸಂತೋಷ ಬೆಣ್ಣಿ, ಯಲ್ಲಪ್ಪ ಈಳಿಗೇರ, ಶಿವರಾಜ ದೊಡ್ಡಮನಿ, ಯಲ್ಲಪ್ಪ ಹರಿಜನ, ಪ್ರಭು ವಡ್ಡರ, ಪರಮೇಶ್ವರ ವಡ್ಡರ, ತಿಪ್ಪಯ್ಯ ಈಳಿಗೇರ ಇದ್ದರು. ಹಾನಗಲ್ಲ ಎಸ್‌ಒ ಕೃಷ್ಣ ಕಲ್ಲೇರ, ಬೆಳಗಾಲಪೇಟೆ ಎಸ್‌ಒ ಮಲ್ಲಿಕಾರ್ಜುನ ರೇವಣ್ಣನವರ ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಇನ್ನು ಮುಂದೆ ತೊಂದರೆಯಾಗಿರುವ ಸಾಂವಸಗಿ ಕೃಷಿ ಪಂಪಸೆಟ್‌ಗಳಿಗೆ ನವೋದಯ ಲೈನ್‌ನಿಂದ ವಿದ್ಯುತ್ ಪೂರೈಸುವ ಭರವಸೆ ನೀಡಿದರು.