ಗಣಿಗಾರಿಕೆಗೆ ಸಿದ್ಧತೆ ವಿರೋಧಿಸಿ ರೈತರಿಂದ ಹೋರಾಟಕ್ಕೆ ಸಭೆ

| Published : Feb 20 2024, 01:45 AM IST

ಗಣಿಗಾರಿಕೆಗೆ ಸಿದ್ಧತೆ ವಿರೋಧಿಸಿ ರೈತರಿಂದ ಹೋರಾಟಕ್ಕೆ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಗಣಿಗಾರಿಕೆ ಮಾಡಲು ಸಿದ್ಧತೆ ಮಾಡುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ರೈತರು ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಪಶ್ಚಿಮಘಟ್ಟ ಸಾಲಿನಲ್ಲಿರುವ ಹೊಸಕೋಟೆ ಬೆಟ್ಟದಲ್ಲಿ ಪ್ರಭಾವಿಗಳು ಕಲ್ಲು ಗಣಿಗಾರಿಕೆ ಮಾಡಲು ಸರ್ಕಾರದಿಂದ ಅನುಮತಿ ಪಡೆದುಕೊಂಡು ಗಣಿಗಾರಿಕೆ ಮಾಡಲು ಸಿದ್ಧತೆ ಮಾಡುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ಉಭಯ ಜಿಲ್ಲಾ ಭಾಗದ ರೈತರು, ಪ್ರಮುಖರು ಗಣಿಗಾರಿಕೆ ಮಾಡುವುದನ್ನು ತಡೆಯಲು ಮತ್ತು ವಿರೋಧಿಸಿ ಹೋರಾಟ ಮಾಡುವ ಸಲುವಾಗಿ ಶನಿವಾರಸಂತೆ ಗಡಿಭಾಗದಲ್ಲಿರುವ ಈಚಲಬೀಡು ಗ್ರಾಮದಲ್ಲಿ ಶನಿವಾರ ಸಭೆ ನಡೆಸಿದರು.

ಕೊಡಗು ಮತ್ತು ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಹಾಸನ ಜಿಲ್ಲೆಗೆ ಸೇರಿದ ಹೊಸೂರು ಕೌಕೋಡಿ ಗ್ರಾಮದ ಹೊಸಕೋಟೆ ಬೆಟ್ಟದ ಅಂಚಿನಲ್ಲಿ ಕೊಡಗು ಜಿಲ್ಲೆಯ ತೋಳೂರುಶೆಟ್ಟಳ್ಳಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿದ್ದು ಈ ಉಭಯ ಜಿಲ್ಲಾ ಭಾಗದಲ್ಲಿ ರೈತರು ಗ್ರಾಮಸ್ಥರು ವ್ಯವಸಾಯ ಮಾಡಿಕೊಂಡು ಬದಕುತ್ತಿದ್ದಾರೆ.

ಸಭೆಯಲ್ಲಿ ರೈತ ಮುಖಂಡ ಎಚ್.ಪಿ.ಪುಟ್ಟೇಗೌಡ ಮಾತನಾಡಿ, ಈ ಭಾಗದ ನಾವು ಪ್ರಕೃತಿಯ ಆಶ್ರಯದಲ್ಲಿ ಜೀವನ ನಡೆಸುತ್ತಿದ್ದೇವೆ. ರೈತರ ಮನೆಯ ಸನಿಹದಲ್ಲಿ ಕನಿಷ್ಠ 7 ಮರಗಳ ಅಗತ್ಯ ಇರುತ್ತದೆ. ಪ್ರಕೃತಿ ನಾಶವಾದರೆ ನಮ್ಮ ಬದುಕು ನಾಶವಾದಂತೆ. ಹೀಗಿರುವಾಗ ಹೊರ ಭಾಗದವರು ಗಣಿಗಾರಿಕೆ ಮಾಡಲು ಇಲ್ಲಿಗೆ ಬಂದು ಜಾಗವನ್ನು ಖರೀದಿಸಿ ಪ್ರಕೃತಿನಾಶ ಮಾಡುವುದರ ಜೊತೆಯಲ್ಲಿ ಈ ಭಾಗದ ರೈತರ ಬದುಕನ್ನು ನಾಶ ಮಾಡಲು ಹೊರಟಿದ್ದಾರೆ ಎಂದರು.

ಈ ಭಾಗದಲ್ಲಿ ಗಣಿಗಾರಿಕೆ ಮಾಡಲು ನಿವೃತ್ತ ಅಧಿಕಾರಿಗಳು, ಉನ್ನತ್ತ ಅಧಿಕಾರಿಗಳು, ಪ್ರಭಾವಿಗಳು ಗಣಿಗಾರಿಕೆಗೆ ಅನುಮತಿ ಪಡೆದು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ನಿಟ್ಟಿನಲ್ಲಿ ಉಭಯ ಭಾಗದ ರೈತರೆಲ್ಲರೂ ಒಂದಾಗಿ ಗಣಿಗಾರಿಕೆಯನ್ನು ತಡೆಯುವ ಸಲುವಾಗಿ ಹೋರಾಟ ಮಾಡಬೇಕಾಗಿದೆ ಮತ್ತು ಗಣಿಗಾರಿಕೆಗೆ ಅನುಮತಿ ನೀಡದಂತೆ ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದರು.

ಹಾಸನ ಜಿಲ್ಲಾ ಬೆಳೆಗಾರರ ಸಂಘದ ಡಾ. ರಾಮಚಂದ್ರ ಮಾತನಾಡಿ, ಪ್ರಕೃತಿಯ ರಕ್ಷಣೆ ರೈತರ ಜವಾಬ್ದಾರಿಯಾಗಿದ್ದು ಪ್ರಕೃತಿ ಮಡಿಲಿನಲ್ಲಿ ವ್ಯವಸಾಯ ಮಾಡಿಕೊಂಡು ಬದುಕುತ್ತಿರುವ ರೈತರು ಪ್ರಕೃತಿ ನಾಶ ಮಾಡಲು ಬಿಡಬಾರದು ಎಂದರು.

ಕೊಡಗು ಜಿಲ್ಲೆಯ ತೋಳೂರಿಶೆಟ್ಟಳ್ಳಿಯ ರೈತ ಮುಖಂಡ ಕೂತಿ ದಿವಾಕರ್ ಮಾತನಾಡಿ, ಕೊಡಗು ಮತ್ತು ಹಾಸನ ಪಶ್ಚಿಮಘಟ್ಟ ಸಾಲಿನ ಪ್ರಕೃತಿ ಮಡಿಲಿನಲ್ಲಿ ಜೀವನ ಸಾಗಿಸುತ್ತಿರುವ ರೈತರಾಗಿದ್ದೇವೆ. ಅದೇ ರೀತಿಯಲ್ಲಿ ನಾವೆಲ್ಲಾರೂ ಒಂದಾಗಿ ಪ್ರಕೃತಿ ರಕ್ಷಣೆ ಮಾಡಲು ಮುಂದಾಗಬೇಕಿದೆ ಎಂದರು. ಪಶ್ಚಿಮಘಟ್ಟ ಉಳಿಸಲು ಜಿಲ್ಲೆ, ಹೊರ ಜಿಲ್ಲೆ ಎಂಬ ತಾರತಮ್ಯ ಮಾಡದೆ ಗಣಿಗಾರಿಕೆ ಮಾಡುವುದನ್ನು ತಡೆಯಲು ನಾವೆಲ್ಲಾರೂ ಒಂದಾಗಿ ಹೋರಾಟಕ್ಕೆ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.

ರೈತ ಪ್ರಮುಖರಾದ ಮಂಜೂರು ತಮ್ಮಣ್ಣಿ, ಹೊಸೂರು ಮದನ್, ಸುಬ್ರಮಣಿ, ವಿಠಲ, ಹೊಸೂರು ರಮೇಶ್, ಪುಟ್ಟಸ್ವಾಮಿ, ಕಳಲೆ ಕೃಷ್ಣೇಗೌಡ ಮುಂತಾದವರು ಹಾಜರಿದ್ದರು.