ಸಾರಾಂಶ
ಹಾವೇರಿ: ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ಕಬ್ಬು ಬೆಳೆಗಾರರ ಬಾಕಿ ಹಣವನ್ನು ನೀಡದಿರುವುದು ಖಂಡಿಸಿ, ಬಾಕಿ ಹಣ ನೀಡುವವರೆಗೂ ಕಾರ್ಖಾನೆಯಿಂದ ಸಕ್ಕರೆ ಒಯ್ಯಲು ಬಿಡುವುದಿಲ್ಲ ಎಂದು ರೈತರು ಕಾರ್ಖಾನೆಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಸಂಗೂರ ಸಕ್ಕರೆ ಕಾರ್ಖಾನೆಯ ಗುತ್ತಿಗೆದಾರರ ನಡೆಯನ್ನು ಖಂಡಿಸಿ ಆಕ್ರೋಶಗೊಂಡ ರೈತರು ಕಳೆದ ಎರಡು ದಿನಗಳಿಂದ ಕಾರ್ಖಾನೆ ಗೇಟ್ಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದು, 20ಕ್ಕೂ ಹೆಚ್ಚು ಲಾರಿಗಳು ಸಕ್ಕರೆಯನ್ನು ತುಂಬಿ ನಿಂತಿವೆ. ಪ್ರತಿದಿನ ಸಕ್ಕರೆ ಮಾರಿದರೂ ಕಾರ್ಖಾನೆ ಗುತ್ತಿಗೆದಾರ ರೈತರಿಗೆ ಬರಬೇಕಾದ ₹2.32 ಕೋಟಿಗಳನ್ನು ಬಾಕಿ ಇಟ್ಟುಕೊಂಡಿದ್ದಾರೆ. ಆದ ಕಾರಣ ರೈತರಿಗೆ ಹಣ ಹಾಕುವವರೆಗೂ ಸಕ್ಕರೆಯನ್ನು ಕಾರ್ಖಾನೆಯಿಂದ ಹೊರಗಡೆ ಒಯ್ಯಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.ಈ ವೇಳೆ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಕಾರ್ಖಾನೆಯಲ್ಲಿ 2024-25 ಹಂಗಾಮಿನಲ್ಲಿ 2 ಲಕ್ಷ ಟನ್ ಕಬ್ಬು ಅರೆದಿದ್ದು, ಈ ವರ್ಷದ ಎಫ್ಆರ್ಪಿ ದರ ₹3151 ಇದ್ದು, ಅದರಲ್ಲಿ ರೈತರಿಗೆ ₹3035 ನೀಡಿದ್ದಾರೆ. ಇನ್ನು ಬಾಕಿ ಉಳಿದ ₹116 ಹಣವನ್ನು ಕಾರ್ಖಾನೆಗೆ ಕಬ್ಬು ಸಾಗಿಸಿ ಏಳು ತಿಂಗಳು ಆದರೂ ರೈತರಿಗೆ ಸಂದಾಯ ಮಾಡಿಲ್ಲ. ರೈತರು ಪದೇ ಪದೇ ಕಾರ್ಖಾನೆಗೆ ಅಲೆದಾಡಿದರೂ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದಲ್ಲೇ, ರೈತರಿಗೆ ಯಾವುದೇ ತರಹದ ಬಿಲ್ಲನ್ನು ಕೊಟ್ಟಿಲ್ಲ ಎಂದು ದೂರಿದರು.
ಕಾರ್ಖಾನೆ ಗುತ್ತಿಗೆದಾರ ರೈತರೊಂದಿಗೆ ಸರಿಯಾಗಿ ಸಭೆ ಮಾಡದೆ ಇಂಥ ಸಮಯಕ್ಕೆ ಹಣ ಕೊಡುತ್ತೇನೆ ಎಂದು ಸಹ ಹೇಳುತ್ತಿಲ್ಲ. ಪ್ರಸಕ್ತ ಮುಂಗಾರು ಹಂಗಾಮು ಶುರುವಾಗಿದ್ದು ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಹಣವಿಲ್ಲದಂತಾಗಿದೆ. ನಮ್ಮ ಹಣವನ್ನು ನಮಗೆ ಕೊಡಲು ಕಾರ್ಖಾನೆ ಗುತ್ತಿಗೆದಾರ ಹಿಂದೇಟು ಹಾಕುತ್ತಿದ್ದಾರೆ. ನಮ್ಮ ರೈತರಿಗೆ ಹಣವನ್ನು ಪಾವತಿಸುವ ವರೆಗೂ ನಾವು ಸಕ್ಕರೆ ಮಾರಲು ಬಿಡುವುದಿಲ್ಲ ಎಂದರು.ಈ ವೇಳೆ ಕಬ್ಬು ಬೆಳೆಗಾರರ ಮುಂಡರಾದ ರಾಜಶೇಖರ್ ಬೆಟಗೇರಿ, ಫಕ್ಕೀರಪ್ಪ ಕುರುಬರ, ಮಂಜುನಾಥ ಅಸುಂಡಿ, ನಾಗೇಂದ್ರಪ್ಪ ಕೆಂಗೊಂಡ, ಶಂಕರಗೌಡ ಪಾಟೀಲ, ಬಸವರಾಜ ಕೆಂಗೊಂಡ, ಮಹೇಶ ಪಾಟೀಲ, ವೀರೇಶ ಸೋಮಕ್ಕನವರ, ಶಂಕರಗೌಡ ಪಾಟೀಲ, ಸೋಮಣ್ಣ ಹಾವೇರಿ, ರಾಜು ಹೊನ್ನತ್ತಿ, ಕೊಡೆಪ್ಪ ಸಿಂಗಾಪುರ, ನಾಗರಾಜ ಹೊನ್ನತ್ತಿ ಇದ್ದರು.