ಹಕ್ಕುಪತ್ರ ನೀಡಲು ಆಗ್ರಹಿಸಿ ರೈತರ ಪ್ರತಿಭಟನೆ

| Published : Jun 25 2025, 11:47 PM IST

ಹಕ್ಕುಪತ್ರ ನೀಡಲು ಆಗ್ರಹಿಸಿ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 20ಕ್ಕೂ ಅಧಿಕ ಗ್ರಾಮಗಳ ಬಗರಹುಕುಂ ಸಾಗುವಳಿದಾರರಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಆದ್ದರಿಂದ ಆದಷ್ಟು ಶೀಘ್ರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ರಾಣಿಬೆನ್ನೂರು: ತಾಲೂಕಿನಲ್ಲಿ ಬಗರಹುಕುಂ ಅಥವಾ ಅರಣ್ಯ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಳಿಮೆ ಮಾಡಿದ ರೈತರನ್ನು ಒಕ್ಕಲ್ಲೆಬ್ಬಿಸಬಾರದು ಎಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಹುಚ್ಚನವಳ್ಳಿ ಮಂಜುನಾಥ ಬಣ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿ ಗ್ರೇಡ್- 2 ತಹಸೀಲ್ದಾರ್ ಅರುಣ ಕಾರಗಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿದ ರೈತರು ಬಸ್‌ನಿಲ್ದಾಣ ಸರ್ಕಲ್, ಹಲಗೇರಿ ಕ್ರಾಸ್, ಕುರುಬಗೇರಿ ಕ್ರಾಸ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ಬಂದು ಸೇರಿದರು. ತಾಲೂಕಿನ ಐರಣಿ, ಐರಣಿ ತಾಂಡಾ, ಸುಣಕಲ್ಲಬಿದರಿ, ಗುಡ್ಡದ ಹೊಸಳ್ಳಿ, ಉಕ್ಕುಂದ, ಸರ್ವಂದ, ಜೋಯಿಸರಹರಳಹಳ್ಳಿ, ಯಲ್ಲಾಪುರ, ಹನುಮಾಪುರ, ಹನುಮಾಪುರ ತಾಂಡಾ, ಕರೂರ, ಚಳಗೇರಿ, ರಾಣಿಬೆನ್ನೂರು, ಕಾಕೋಳ, ಕಜ್ಜರಿ ಸೇರಿದಂತೆ ಸುಮಾರು 20ಕ್ಕೂ ಅಧಿಕ ಗ್ರಾಮಗಳ ಬಗರಹುಕುಂ ಸಾಗುವಳಿದಾರರಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಆದ್ದರಿಂದ ಆದಷ್ಟು ಶೀಘ್ರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಶ್ರದ್ಧಾ ಭಕ್ತಿಯ ಮಣ್ಣೆತ್ತಿನ ಅಮಾವಾಸ್ಯೆ

ಹಾವೇರಿ: ಮುಂಗಾರು ಹಂಗಾಮಿನ ಮೊದಲ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆಯನ್ನು ಜಿಲ್ಲಾದ್ಯಂತ ರೈತರು ಬುಧವಾರ ಸಾಂಪ್ರದಾಯಿಕವಾಗಿ ಆಚರಿಸಿದರು.

ರೈತನ ಒಡನಾಡಿಯಾಗಿರುವ, ಕೃಷಿ ಕಾರ್ಯದಲ್ಲಿ ಹೆಗಲಿಗೆ ಜತೆಯಾಗಿ ಕುಟುಂಬದ ಸದಸ್ಯನಾಗಿ ಬಾಳುವ ಎತ್ತುಗಳಿಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಲಾಯಿತು.ಬುಧವಾರ ಬೆಳಗ್ಗೆ ಹೊಲ ಹಾಗೂ ಹುತ್ತದ ಮಣ್ಣು ತಂದು ಎತ್ತಿನ ಮೂರ್ತಿ ತಯಾರಿಸಿ ಅವುಗಳಿಗೆ ಸುಣ್ಣಬಣ್ಣ ಬಳಿದು ಸಿಂಗರಿಸಿ ದೇವರ ಮನೆಯಲ್ಲಿಟ್ಟು ಪೂಜಿಸಿದರು.ಮಕ್ಕಳು ಸಹ ಮಣ್ಣಿನಿಂದ ಎತ್ತಿನ ಮೂರ್ತಿಗಳನ್ನು ತಯಾರಿಸಿ ಸಂತಸಪಟ್ಟರು. ಮಹಿಳೆಯರು ಮನೆ ದೇವರ ಜಗಲಿ ಮೇಲೆ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ, ಪುನಸ್ಕಾರ ಮಾಡಿ ವಿವಿಧ ಬಗೆಯ ಬೆಲ್ಲದ ಹೂರಣದ ಕರಿಗಡುಬು, ಬೆಲ್ಲದ ಬ್ಯಾಳಿ, ಚಪಾತಿ, ಸೆಂಡಿಗೆ, ಬದನೆಕಾಯಿ ಪಲ್ಲೆ ಸೇರಿದಂತೆ ವಿವಿಧ ನೇವೈದ್ಯ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕುಟುಂಬದ ಸದಸ್ಯರೆಲ್ಲೂ ಒಟ್ಟಾಗಿ ಕುಳಿತು ಭೋಜನ ಸವಿಯುವ ಮೂಲಕ ಮಣ್ಣೆತ್ತಿನ ಅಮಾವಾಸ್ಯೆಯನ್ನು ಆಚರಿಸಿದರು.

ನಗರ ಪ್ರದೇಶದಲ್ಲೂ ಜನರು ಮಣ್ಣಿನ ಬಸವಣ್ಣ ಮೂರ್ತಿ ಖರೀದಿಸಿ ಮನೆಗೆ ತಂದು ಪೂಜಿಸಿದರು. ಮಣ್ಣಿನ ಬಸವ ಮೂರ್ತಿಗಳು ನಗರದ ಕುಂಬಾರ ಓಣಿ, ಎಂಜಿ ರೋಡ ಸೇರಿದಂತೆ ವಿವಿಧ ಭಾಗಗಳಲ್ಲಿ ಜೋಡಿಗೆ ₹30ರಿಂದ ₹80ಕ್ಕೆ ಮಾರಾಟ ಮಾಡಲಾಯಿತು. ಹಬ್ಬದ ಮರುದಿನ ಮಣ್ಣಿನ ಮೂರ್ತಿಗಳನ್ನು ಸುತ್ತಮುತ್ತಲಿನ ಕೆರೆ ಅಥವಾ ಬಾವಿಗಳಲ್ಲಿ ವಿಸರ್ಜಿಸಲಾಗುತ್ತದೆ. ಕೆಲವರು ಬಸವಣ್ಣನ ಮೂರ್ತಿಗಳನ್ನು ಮುಂದಿನ ಮಣ್ಣೆತ್ತಿನ ಅಮಾವಾಸ್ಯೆ ವರೆಗೂ ಮನೆಯಲ್ಲಿಟ್ಟು ಪೂಜಿಸುತ್ತಾರೆ.