ಸಾರಾಂಶ
ಮಹದಾಯಿ ಯೋಜನೆ ಜಾರಿ ಮಾಡಬೇಕು ಹಾಗೂ ನರಗುಂದ ಕೋರ್ಟ್ ವೃತ್ತದ ಬಳಿ ರೈತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ರೈತರು ನರಗುಂದ ತಹಸೀಲ್ದಾರ್ಗೆ ಗುರುವಾರ ಹಿಮ್ಮುಖವಾಗಿ ಮನವಿ ಸಲ್ಲಿಸಿದರು.
ನರಗುಂದ: ಮಹದಾಯಿ ಯೋಜನೆ ಜಾರಿ ಮಾಡಬೇಕು ಹಾಗೂ ಕೋರ್ಟ್ ವೃತ್ತದ ಬಳಿ ರೈತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ರೈತರು ತಹಸೀಲ್ದಾರ್ಗೆ ಗುರುವಾರ ಹಿಮ್ಮುಖವಾಗಿ ಮನವಿ ಸಲ್ಲಿಸಿದರು.
2ನೇ ದಿನದ ಉಪವಾಸ ಸತ್ಯಾಗ್ರಹದ ವೇಳೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಮಹದಾಯಿ ಹಾಗೂ ರೈತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾವು ಹಿಮ್ಮುಖವಾಗಿ ಮನವಿ ನೀಡಿ ಆಗ್ರಹಿಸಿದ್ದೇವೆ ಎಂದರು.ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಬೇಕು ಮತ್ತು ರೈತ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ವೀರಪ್ಪ ಕಡ್ಲಿಕೊಪ್ಪ ಅವರ ಸ್ಮಾರಕ ಹಾಗೂ ರೈತ ಭವನ ನಿರ್ಮಾಣ ಮಾಡಬೇಕು ಎಂದು ಕಳೆದ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ನೀಡಿ ನೀಡಿ ಸಾಕಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಸ್ವೀಕರಿಸಿದರು. ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ, ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ, ವೀರಣ್ಣ ಸೋಪ್ಪಿನ, ಕರವೇ ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ವಿಠ್ಠಲ ಜಾಧವ, ಸಿ.ಎಸ್. ಪಾಟೀಲ ಮುಂತಾದವರು ಇದ್ದರು.