ಕನ್ನಡಪ್ರಭ ವಾರ್ತೆ ಸಿಂಧನೂರು

ರೈತರ ಬ್ಯಾಂಕ್ ಖಾತೆಗೆ ಜೋಳ ಖರೀದಿ ಹಣ ಜಮಾ ಆಗಿದ್ದು, ಅವರನ್ನು ಪಡೆದುಕೊಳ್ಳುವ ಸಂಬಂಧ ತಾಲೂಕಿನ ಜವಳಗೇರಾ ಗ್ರಾಮದ ಕೆನರಾ ಬ್ಯಾಂಕ್ ಮುಂದೆ ಸೋಮವಾರ ರೈತರು ತೆರಳಿದಾಗ ಬ್ಯಾಂಕ್ ಸಿಬ್ಬಂದಿ ಮೀನಾಮೇಷ ಎಣಿಸಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ಜೋಳ ಖರೀದಿಸಿ ಮೂರ್ನಾಲ್ಕು ತಿಂಗಳ ನಂತರ ಬ್ಯಾಂಕಿನ ಖಾತೆಗೆ ಸರ್ಕಾರದಿಂದ ಹಣ ಜಮಾ ಮಾಡಲಾಗಿದೆ. ಆದರೆ ಜವಳಗೇರಾ ಕೆನರಾ ಬ್ಯಾಂಕಿನ ಸಿಬ್ಬಂದಿ ಒಂದು ದಿನಕ್ಕೆ ಕೇವಲ ರೂ.10 ಸಾವಿರ ಮಾತ್ರ ಹಣ ನೀಡುತ್ತೇವೆ. ಪ್ರತಿದಿನ ಬಂದು ರೂ.10 ಸಾವಿರದಂತೆ ಹಣ ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಈ ಬ್ಯಾಂಕಿನಲ್ಲಿ ನಾಲ್ಕೈದು ವರ್ಷಗಳಿಂದ ಪ್ರಿಂಟರ್ ಮಷಿನ್ ಕೆಟ್ಟಿದೆ. ವ್ಯವಸ್ಥಾಪಕರು ಸರಿಯಾಗಿ ಬ್ಯಾಂಕಿಗೆ ಬರುವುದಿಲ್ಲ. ಸಿಬ್ಬಂದಿ ಕೊರತೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ದೂರಿದರು.

ಜೋಳದ ಹಣ ಒಂದೇ ಸಲ ಕೊಟ್ಟರೆ ಟ್ರ್ಯಾಕ್ಟರ್ ಸಾಲದ ಕಂತು, ಮಕ್ಕಳ ವಿದ್ಯಾಭ್ಯಾಸ ಕೈಗಡ ಸಾಲ, ಆರೋಗ್ಯ ಸಮಸ್ಯೆ ಹಾಗೂ ಕುಟುಂಬ ನಿರ್ವಹಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಬ್ಯಾಂಕಿನಲ್ಲಿ ಪ್ರತಿದಿನ ರೂ.10 ಸಾವಿರ ಕೊಡುತ್ತೇವೆ ಎಂದರೆ ತೀವ್ರ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳು ನಾಲ್ಕೈದು ತಿಂಗಳು ಬ್ಯಾಂಕಿಗೆ ಬರದಿದ್ದರೆ ಆ ಅಕೌಂಟ್‌ ಲಾಕ್ ಮಾಡುತ್ತಾರೆ. ಮತ್ತೆ ಮಕ್ಕಳು ಶಾಲೆಯನ್ನು ಬಿಟ್ಟು ನಾಲ್ಕಾರು ದಿನ ಬ್ಯಾಂಕಿಗೆ ಅಲೆದಾಡಿ ಆಧಾರ್ ಕಾರ್ಡ್ ಜೆರಾಕ್ಸ್ ಕೊಟ್ಟು ಓಟಿಪಿ ಹೇಳಿ ಆಗ ಅಕೌಂಟನ್ನು ಚಾಲ್ತಿ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ನಮ್ಮ ಹಣ ತಿಳಿದುಕೊಳ್ಳಬೇಕಾದರೆ ಇಲ್ಲಿ ಪಾಸ್ ಬುಕ್ ಎಂಟ್ರಿ ಮಾಡಿಕೊಡುವುದಿಲ್ಲ. ನಮಗೆ ಏನಾದರೂ ಬೇಕಾದರೆ ಹಣ ಕೊಟ್ಟು ಪ್ರಿಂಟ್ ತೆಗೆದುಕೊಳ್ಳಬೇಕು. ಈ ಬ್ಯಾಂಕ್ 40 ಕಿ.ಮೀ ಸುತ್ತ ದೂರದಲ್ಲಿರುವ ಆಯನೂರು, ಹೆಡಗಿನಾಳ, ಪುಲದಿನ್ನಿ, ಗೋನವಾರ, ಸುಲ್ತಾನಪುರ ಜವಳಗೇರಾ, ಯದ್ದಲದೊಡ್ಡಿ, ತಿಮ್ಮಾಪುರ ಸೇರಿದಂತೆ ನೂರಾರು ಹಳ್ಳಿಗಳು ಈ ಬ್ಯಾಂಕಿನ ವ್ಯಾಪ್ತಿಗೆ ಬರುತ್ತವೆ. ಇದರಿಂದ ಇಲ್ಲಿ ಹೆಚ್ಚಿನ ಸಿಬ್ಬಂದಿ ಮತ್ತು ಹಣಕಾಸಿನ ತೊಂದರೆಯಾಗದಂತೆ ಮೇಲಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜವಳಗೇರಾ ಸೇರಿದಂತೆ ಸುತ್ತಮುತ್ತಿಲಿನ ಗ್ರಾಮಗಳ ನೂರಾರು ರೈತರು ಇದ್ದರು.